ಕಿಮ್ಸ್ನಿಂದ ರವಿ ಬೆಳಗೆರೆ ಬಿಡುಗಡೆ, ಸೋಮವಾರ ಸ್ಪೀಕರ್ ಮುಂದೆ ಹಾಜರು
ಹುಬ್ಬಳ್ಳಿ, ಜುಲೈ 2: ಹೈಕೋರ್ಟ್ ಸೂಚನೆಯಂತೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಮುಂದೆ ಹಾಜರಾಗಲು ನಿರ್ಧರಿಸಿರುವ ಪತ್ರಕರ್ತ ರವಿ ಬೆಳಗೆರೆ ಇಲ್ಲಿನ ಕಿಮ್ಸ್ ಆಸ್ಪತ್ರೆಯಿಂದ ಶನಿವಾರ ಸಂಜೆ ಬಿಡುಗಡೆಯಾಗಿದ್ದಾರೆ.
ಶಾಸಕರ ವಿರುದ್ಧ ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿದ ಆರೋಪದ ಮೇಲೆ ಸದನದ ಹಕ್ಕು ಬಾದ್ಯತಾ ಸಮಿತಿ ಕೆಂಗಣ್ಣಿಗೆ ಗುರಿಯಾಗಿದ್ದ ಅವರು ಹಲವು ದಿನಗಳಿಂದ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಇತ್ತೀಚಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ರವಿ ಬೆಳಗೆರೆ ಖಾಸ್ ಬಾತ್ : ಸಿದ್ದು ಪಂಚೆ ಪೀಕದೆ ಬಿಡಲ್ಲ!
ಕಳೆದ ಎರಡು ದಿನಗಳಿಂದ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಆರೋಪಕ್ಕೆ ಗುರಿಯಾಗಿರುವ ಪತ್ರಕರ್ತರಿಗೆ ಸ್ಪೀಕರ್ ಮುಂದೆ ಹಾಜರಾಗಲು ಹೈಕೋರ್ಟ್ ಶನಿವಾರ ಅವಕಾಶ ಕಲ್ಪಿಸಿದೆ.
ಅಲ್ಲದೆ ಅವರನ್ನು ಬಂಧಿಸುವುದಿಲ್ಲ ಎಂದು ಹೆಚ್ಚುವರಿ ಅಡ್ವೋಕೆಟ್ ಜನರಲ್ ಪೊನ್ನಣ್ಣ ಹೈಕೋರ್ಟ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸ್ಪೀಕರ್ ಎದುರು ಹಾಜರಾಗಲು ಬೆಳಗೆರೆ ನಿರ್ಧರಿಸಿದ್ದಾರೆ.
ಕಳ್ಳ, ಸುಳ್ಳ, ಕೊಲೆಗಡುಕನಲ್ಲ
ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಬಿಡುಗಡೆಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ರವಿ ಬೆಳಗೆರೆ, ನಾನು ಕಳ್ಳ, ಸುಳ್ಳ, ಕೊಲೆಗಡುಕನಲ್ಲ. ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನವನ್ನು ಸದನ ಕೈ ಬಿಡಬೇಕು. ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನ ನಾನು ಯಾವತ್ತೂ ಅಪಮಾನಕ್ಕೀಡು ಮಾಡಿಲ್ಲ. ಹೀಗಿದ್ದೂ ಅವರಿಗೆ ನನ್ನ ಮೇಲೆ ಯಾಕೆ ಸಿಟ್ಟು ಅಂತ ಗೊತ್ತಿಲ್ಲ. ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸ್ಪೀಕರ್ ಮುಂದೆ ಹಾಜರಾಗಲು ಹೈಕೋರ್ಟ್ ಸೂಚನೆ ನೀಡಿದ್ದು, ಅರೆಸ್ಟ್ ವಾರೆಂಟ್ ಹಿಂಪಡೆಯಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಕಾರಣದಿಂದ ಸೋಮವಾರ ನಾನು ಸ್ಪೀಕರ್ ಎದುರು ಹಾಜರಾಗುತ್ತೇನೆ. ನಾನು ಕಳ್ಳ ಅಲ್ಲ ಎಂಬ ನಂಬಿಕೆ ಇರುವುದರಿಂದ ನನಗೆ ಶಿಕ್ಷೆಯ ಭಯವಿಲ್ಲ.
ಆದರೆ, ಪತ್ರಿಕೋದ್ಯಮದ ಮೇಲೆ ಇಂಥ ಗದಾ ಪ್ರಹಾರ ನಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು. ವೃತ್ತಿಯಲ್ಲಿ ಸ್ಪರ್ಧೆ ಇದ್ದೆ ಇರುತ್ತೆ, ಪತ್ರಕರ್ತರ ಮಧ್ಯೆ ಆರೋಗ್ಯಕರ ಸ್ಪರ್ಧೆ ಇರಬೇಕು. ಆದರೆ, ಪತ್ರಕರ್ತರೆಲ್ಲರೂ ಒಂದೆ. ಒಬ್ಬನೇ ಒಬ್ಬ ಪತ್ರಕರ್ತನ ಮೇಲೆ ಆಕ್ರಮಣ ನಡೆದರೂ ಅದು ಇಡೀ ಪತ್ರಿಕೋದ್ಯಮದ ಮೇಲೆ ನಡೆದ ಆಕ್ರಮಣ ಎಂಬ ಭಾವನೆ ಹೊಂದಬೇಕು ಎಂದು ರವಿ ಬೆಳಗೆರೆ ಸಲಹೆ ನೀಡಿದರು.