ಜಾರಕಿಹೊಳಿ ಸಿಡಿ: ಹುಬ್ಬಳ್ಳಿಯಿಂದ ಬ್ರೇಕಿಂಗ್ ನ್ಯೂಸ್ ಕೊಟ್ಟ ಶ್ರೀರಾಮುಲು
ಹುಬ್ಬಳ್ಳಿ, ಮಾರ್ಚ್ 7: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮುಂಜಾಗೃತಾ ಕ್ರಮವಾಗಿ ಆರು ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಒಂದೆಡೆಯಾದರೆ, ತಾಜಾ ಬೆಳವಣಿಗೆಯಲ್ಲಿ ಈ ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ವಾಪಾಸ್ ಪಡೆದುಕೊಂಡಿದ್ದಾರೆ.
ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ತಿರುಗಿಬಿದ್ದಿದ್ದರೆ, ಜೆಡಿಎಸ್ ತಕ್ಕಮಟ್ಟಿನ ಅಂತರ ಕಾಯ್ದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಈ ರೀತಿ ಸಿಡಿ ಇದೆ ಎನ್ನುವವರನ್ನು ಮೊದಲು ಬಂಧಿಸಬೇಕು ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್: ದಿನೇಶ್ ಕಲ್ಲಹಳ್ಳಿ ಪತ್ರದಲ್ಲಿ ಏನಿದೆ?
ಇನ್ನು, ಹುಬ್ಬಳ್ಳಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಬಿ.ಶ್ರೀರಾಮುಲು, " ಈ ಸಿಡಿ ಪ್ರಕರಣದಲ್ಲಿ ಹಲವರ ಕೈವಾಡವಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗಗೊಂಡು ಅವರ ಮುಖಭಂಗವಾಗಲಿದೆ"ಎಂದು ಹೇಳಿದರು.
ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ; ಎಚ್ಡಿಕೆ ಪ್ರತಿಕ್ರಿಯೆ
ನಗರದಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀರಾಮುಲು, ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎನ್ನುವುದಕ್ಕೆ ಈ ಸಿಡಿ ಪ್ರಕರಣವೇ ಉದಾಹರಣೆ"ಎಂದಿದ್ದಾರೆ.
ಬಿಜೆಪಿ ಪಕ್ಷದ ಮೇಲಾಗಲಿ, ಯಡಿಯೂರಪ್ಪನವರ ವಿರುದ್ದ ಬೇಸರ ಮಾಡಿಕೊಂಡಿಲ್ಲ
"ನಾನೇನೂ ಬಿಜೆಪಿ ಪಕ್ಷದ ಮೇಲಾಗಲಿ ಅಥವಾ ಯಡಿಯೂರಪ್ಪನವರ ವಿರುದ್ದ ಬೇಸರವನ್ನು ಮಾಡಿಕೊಂಡಿಲ್ಲ. ರಾಜ್ಯ ಪ್ರವಾಸ ಮಾಡಿಕೊಂಡು ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ"ಎಂದು ನಗರದ, ಸಂಗೊಳ್ಳಿ ರಾಯಣ್ಣ ನಗರದಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿ ಶ್ರೀರಾಮುಲು ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ
"ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಹಲವರ ಕೈವಾಡವಿದೆ. ಕಾಂಗ್ರೆಸ್ ನಾಯಕರ ಮತ್ತು ಕೆಲವು ಸಂಘ ಸಂಸ್ಥೆಗಳ ಹೆಸರು ಕೇಳಿ ಬರುತ್ತಿದೆ. ಈ ಪಿತೂರಿಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದ ಹೊರಬರಲಿದೆ"ಎನ್ನುವ ಮೂಲಕ, ನೇರವಾಗಿ ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷವನ್ನು ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೆ ಆಗುವುದಿಲ್ಲ
"ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೆ ಆಗುವುದಿಲ್ಲ. ಹಾಗಾಗಿ, ಬಿಜೆಪಿ ನಾಯಕರ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಅದರ ಭಾಗವೇ ಈ ಸಿಡಿ ಪ್ರಕರಣ. ಸಿಡಿ ಎಂದರೆ ಅದು ಬರೀ ಅಶ್ಲೀಲ ಸಿಡಿ ಆಗಬೇಕೆಂದೇನಿಲ್ಲ. ಹನಿಟ್ರ್ಯಾಪ್, ಸಂಭಾಷಣೆ ಮುಂತಾದವೂ ಇರಬಹುದು"ಎಂದು ಶ್ರೀರಾಮುಲು ಅಭಿಪ್ರಾಯ ಪಟ್ಟರು.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜೋಡಿ ಹೋರಿಗಳು
"ಅಧಿಕಾರ ಇಲ್ಲದಿದ್ದರೂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ಬೇಕು, ಇತ್ತ ಸಿದ್ದರಾಮಯ್ಯನವರಿಗೂ ಆ ಕುರ್ಚಿ ಬೇಕು. ಅವರಿಬ್ಬರೂ ಜೋಡೆತ್ತುಗಳಲ್ಲ, ಅವರಿಬ್ಬರು ಅಧಿಕಾರಕ್ಕೆ ಬಡಿದಾಡುತ್ತಿರುವ ಜೋಡಿ ಹೋರಿಗಳು"ಎಂದು ಶ್ರೀರಾಮುಲು ಲೇವಡಿ ಮಾಡಿದರು.