ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ಅನುಮಾನಾಸ್ಪದ ತಾಂತ್ರಿಕ ತೊಂದರೆ, ದೂರು
Recommended Video
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅನುಮಾನಾಸ್ಪದವಾಗಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಭೂ ಸ್ಪರ್ಶ ಮಾಡುವಾಗಲೂ ತೊಂದರೆ ಗಮನಕ್ಕೆ ಬಂದಿದೆ. ಈ ಬಗ್ಗೆ ಗುರುವಾರ ಕಾಂಗ್ರೆಸ್ ಪೊಲೀಸರ ಬಳಿ ದೂರು ದಾಖಲಿಸಿದೆ. ರಾಹುಲ್ ಗಾಂಧಿ ಅವರು ದೆಹಲಿಯಿಂದ ಹುಬ್ಬಳ್ಳಿಗೆ ಬಂದ ವಿಮಾನದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಕರ್ನಾಟಕ ಪೊಲೀಸ್ ಮುಖ್ಯಸ್ಥೆ ನೀಲಮಣಿ ಎನ್ ರಾಜು ಅವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ರಾಹುಲ್ ಗಾಂಧಿ ಕಚೇರಿಯಿಂದ ನೀಡಿದ ದೂರಿನ ಪ್ರಕಾರ, ಹಲವು 'ವಿವರಿಸಲಾಗದ ತಾಂತ್ರಿಕ ದೋಷಗಳು" ಎರಡೂವರೆ ಗಂಟೆಗಳ ವಿಮಾನ ಪ್ರಯಾಣದ ಸಂದರ್ಭದಲ್ಲಿ ಸಂಭವಿಸಿದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಅಂಕೋಲಾದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ
ಮೂಲಗಳ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಗೆ ಕರೆ ಮಾಡಿ, ಕುಶಲ ವಿಚಾರಿಸಿದ್ದಾರೆ. ಇನ್ನು ಪೊಲೀಸ್ ದೂರನ್ನು ನಾಗರಿಕ ವಿಮಾನಯಾನದ ಡೈರೆಕ್ಟರ್ ಜನರ್ ಅವರಿಗೆ ಮುಂದಿನ ವಿಚಾರಣೆಗಾಗಿ ಹಸ್ತಾಂತರಿಸುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿಮಾನವು ವಿಪರೀತ ಹೊಯ್ದಾಡಿದೆ. ಒಂದು ಕಡೆಗೆ ವಾಲಿಕೊಂಡಿದೆ. ವಿಪರೀತವಾಗಿ ಶಬ್ದ ಮಾಡಿದೆ. ಇನ್ನು ಆಟೋಪೈಲಟ್ ಸಿಸ್ಟಮ್ ವಿಮಾನದಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎನ್ನಲಾಗಿದೆ.
ರಾಹುಲ್ ಗಾಂಧಿ ಹೊರತಾಗಿ ಇತರ ಮೂವರು ಪ್ರಯಾಣಿಕರು ವಿಮಾನದಲ್ಲಿದ್ದರು. ಪೊಲೀಸರ ದೂರಿನ ಪ್ರಕಾರ, ಮೂರನೇ ಪ್ರಯತ್ನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಸಾಧ್ಯವಾಗಿದೆ. ಅದೂ ಪ್ರಯಾಸಕರವಾಗೊ ಇಳಿಸಲಾಗಿದೆ.
ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ, ಒತ್ತಡಕ್ಕೆ ಈಡಾದರು. ಜೀವಭಯಕ್ಕೆ ಒಳಗಾದರು. ಇದು ವಿರಳ ಸಂದರ್ಭದಲ್ಲಿ ಆಗುವಂಥ ಘಟನೆ ಎಂದು ವಿಮಾನ ಸಿಬ್ಬಂದಿ ಕೂಡ ತಿಳಿಸಿದ್ದಾರೆ.
ಖಾಸಗಿ ವಿಮಾನದ ಪೈಲಟ್ ಮತ್ತು ವಿಮಾನ ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ವಿಧಾನಸಭೆಗೆ ಮೇ ಹನ್ನೆರಡರಂದು ಚುನಾವಣೆ ನಡೆಯಲಿದ್ದು, ಏಳನೇ ಹಂತದ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಬಂದಿದ್ದಾರೆ. ಅಂದಹಾಗೆ ಹುಬ್ಬಳ್ಳಿಯ ನಂತರ ನಿಗದಿತ ಕಾರ್ಯಕ್ರಮಕ್ಕಾಗಿ ಅಂಕೋಲಾಗೆ ವಿಮಾನದಲ್ಲಿ ರಾಹುಲ್ ಗಾಂಧಿ ತೆರಳಿದ್ದಾರೆ.