"ಡಿಕೆಶಿ ಯುದ್ಧ ಗೆದ್ದು ಬಂದಿದ್ದಾರಾ? ಯಾಕಿಷ್ಟು ಅದ್ಧೂರಿ ಸ್ವಾಗತ?"
ಹುಬ್ಬಳ್ಳಿ, ಅಕ್ಟೋಬರ್ 26: ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ವಿಮಾನ ನಿಲ್ದಾಣದಲ್ಲಿ ಈ ರೀತಿ ಅದ್ಧೂರಿ ಸ್ವಾಗತ ನೀಡಿರುವುದು ಸರಿ ಅಲ್ಲ. ಡಿಕೆಶಿ ಯುದ್ಧ ಗೆದ್ದು ಬಂದಿದ್ದಾರಾ?" ಎಂದು ಆರ್. ಅಶೋಕ ಸಿಡಿಮಿಡಿಗೊಂಡಿದ್ದಾರೆ.
ಡಿಕೆಶಿ ಸ್ವಾಗತ, 'ಇವೆಲ್ಲ ಬೇಕಿತ್ತಾ?' ಎಂದ ಸಂತೋಷ್ ಹೆಗ್ಡೆ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಡಿಕೆಶಿ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವಾಗ ಈ ರೀತಿಯ ವರ್ತನೆ ಸರಿ ಅಲ್ಲ. ಅವರು ಯುದ್ಧ ಗೆದ್ದು ಬಂದವರಂತೆ ವರ್ತಿಸುತ್ತಿದ್ದಾರೆ" ಎಂದಿದ್ದಾರೆ. ಇದೇ ಸಂದರ್ಭ ಉಪ ಚುನಾವಣೆ ಕುರಿತೂ ಮಾತನಾಡಿದ ಅವರು, "ಅನರ್ಹಗೊಂಡ ಶಾಸಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಆದರೆ ಯಾರ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ಗೊತ್ತಿದೆ. ಅನರ್ಹಗೊಂಡ ಶಾಸಕರ ಬಗ್ಗೆ ಸುಪ್ರಿಂ ಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡುವುದು ಇದೆ. ತೀರ್ಪು ಪ್ರಕಟಗೊಂಡ ನಂತರ ಬಿಜೆಪಿ ಟಿಕೆಟ್ ಅಂತಿಮಗೊಳಿಸಲಾಗುವುದು" ಎಂದರು.
ನೆರೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಮನೆ ಬಿದ್ದವರಿಗೆ 5 ಲಕ್ಷ ರೂ ಹಾಗೂ 30/40 ನಿವೇಶನವನ್ನು ಉಚಿತವಾಗಿ ನೀಡಲಾಗುತ್ತದೆ. ಪರಿಹಾರ ನೀಡಲು ಆರ್ಥಿಕ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.