ಸದ್ದಿಲ್ಲದೇ ಸೈನಿಕ ಕುಟುಂಬದ ಸೇವೆ ಮಾಡುತ್ತಿರುವ ಅಪರೂಪದ ಪ್ರೊಫೆಸರ್
ಹುಬ್ಬಳ್ಳಿ, ಆಗಸ್ಟ್.26: ಅವರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ಕನಸು ಕಂಡಿದ್ದವರು. ಆದರೆ ವಿಧಿ ಅವರಿಗೆ ದೇಶ ಸೇವೆ ಮಾಡುವ ಅವಕಾಶ ನೀಡಲೇ ಇಲ್ಲ. ಆದರೆ ಹೇಗಾದರೂ ಕೂಡ ದೇಶದ ಸೇವೆ ಮಾಡಲೇಬೇಕು ಎಂಬ ಹಂಬಲದಿಂದ, ಗಡಿ ಕಾಯಬೇಕೆಂದುಕೊಂಡಿದ್ದವರು ಕುಟುಂಬವನ್ನು ಕಾಯುತ್ತಿದ್ದಾರೆ.
ಹೌದು, ನಿವೃತ್ತ ಸೈನಿಕರು, ಸೈನಿಕರ ಕುಂಟುಂಬಕ್ಕೆ ಉಚಿತ ಚಿಕಿತ್ಸೆ ನೀಡುವ ಮೂಲಕ ಪರೋಕ್ಷವಾಗಿ ದೇಶದ ಸೇವೆ ಮಾಡುತ್ತಿದ್ದಾರೆ. ಹೀಗೆ ಮಾನಸಿಕ ಅಸ್ವಸ್ಥರು ಮತ್ತು ವಯೋವೃದ್ಧರ ಜೊತೆಯಲ್ಲಿ ಕಾಲ ಕಳೆಯುತ್ತಾ ಅವರಿಗೆ ಚಿಕಿತ್ಸೆ ನೀಡುತ್ತಿರುವವರ ಹೆಸರು ಡಾ.ರಾಮಚಂದ್ರ ಕಾರಟಗಿ.
ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೈನ್ಯಕ್ಕೆ ಸೇರಬೇಕು ಎಂದು ಕನಸು ಕಂಡವರು. ಆದರೆ ಕಾಲಿನ ಮೂಳೆ ಮುರಿದು ಬೈಪಾಸ್ ಸರ್ಜರಿ ಆದ ಕಾರಣ ಸೈನ್ಯ ಸೇರಲಾಗಲಿಲ್ಲ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕೆಲಸ ಮುಗಿದ ಬಳಿಕ ಹುಬ್ಬಳ್ಳಿಯ ಕೇಶವ ಕುಂಜದಲ್ಲಿರುವ ಸ್ವಂತ ಕ್ಲಿನಿಕ್ ಗೆ ತೆರಳುತ್ತಾರೆ. ಇಲ್ಲಿಗೆ ಬರುವ ಸೈನಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಕೆಲವು ಸೈನಿಕರ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡಿ ಬರುತ್ತಾರೆ.
ಸೈನಿಕರು ಎಂದರೆ ನಮ್ಮನ್ನು ಕಾಯುವ ದೇವರು ಎಂದು ತಿಳಿದಿರುವ ಡಾ ರಾಮಚಂದ್ರ ಕಾರಟಗಿ ಅವರ, ಜನ ಸೇವೆ ಇಷ್ಟೇ ಅಲ್ಲ. ನಗರದ ಬಹುತೇಕ ಮಾನಸಿಕ ರೋಗಿಗಳ ಮನೆ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ.
ಅಲ್ಲದೆ ಪ್ರತಿ ರವಿವಾರ ಬಿಡುವು ಸಿಕ್ಕಾಗಲೆಲ್ಲಾ ನಗರದ ನಾನಾ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ಸೈನಿಕರು ದೇಶದ ಗಡಿ ಕಾಯುತ್ತಿದ್ದರೆ ಇವರು ಸುತ್ತಮುತ್ತಲಿನ ಸೈನಿಕರ ಕುಂಟುಂಬವನ್ನು ಕಾಯುತ್ತಾ ದೇಶಸೇವೆ ಮಾಡುವವವರ ಸೇವೆ ಮಾಡುತ್ತಿದ್ದಾರೆ.
ದೇಶ ಕಾಯುವ ಕನಸು ಕಂಡು ಅದು ಈಡೇರದೆ ಇದ್ದಾಗ ಗಡಿ ಕಾಯುವ ಸೈನಿಕರ ಕುಟುಂಬವನ್ನು ಕಾಯುತ್ತಾ ತಮ್ಮದೇ ರೀತಿಯಲ್ಲಿ ದೇಶ ಸೇವೆ ಮಾಡುವ ಇವರಿಗೆ ನಮ್ಮದೊಂದು ಸಲಾಂ.