ಮಾನ್ಯತೆ ರದ್ದಾದರೂ ಟಿಸಿ ಕೊಡದೆ ಹುಬ್ಬಳ್ಳಿ ಶಾಲೆ; ಪೋಷಕರ ಕಣ್ಣೀರು
ಹುಬ್ಬಳ್ಳಿ, ಜೂನ್ 27: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪೋಷಕರು ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದರು. ಆದರೆ ಏಕಾಏಕಿ ಶಾಲೆಯ ಮಾನ್ಯತೆ ರದ್ದಾಗಿದ್ದು, ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಇದೀಗ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಆಲೋಚನೆಯಲ್ಲಿರುವ ಪೋಷಕರಿಗೆ ಖಾಸಗಿ ಶಾಲಾ ಆಡಳಿತ ಮಂಡಳಿ ಹಣಕ್ಕಾಗಿ ಬೇಡಿಕೆಯಿಡುತ್ತಿದೆ. ಈ ಕಾರಣದಿಂದ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮೊರೆ ಹೋಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹಳೇ ಹುಬ್ಬಳ್ಳಿಯ ಮಹಾಸರಸ್ವತಿ ವಿದ್ಯಾಪೀಠದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮಾನ್ಯತೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿಯೇ ಶಾಲೆಯ ಮಾನ್ಯತೆ ರದ್ದಾಗಿರುವುದರಿಂದ, ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.
ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ: ಎಷ್ಟು ದಿನ, ಶುಲ್ಕದ ಮಾಹಿತಿ ಇಲ್ಲಿದೆ
ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸದ ಕಾರಣ ವಿದ್ಯಾನಿಕೇತನ ಶಾಲೆಯ ಮಾನ್ಯತೆ ರದ್ದು ಮಾಡಲಾಗಿದೆ. ಹೀಗಿದ್ದರೂ ಕೂಡಾ ಮಕ್ಕಳ ವರ್ಗಾವಣೆ ಪತ್ರ ನೀಡಲು ಶಾಲೆಯ ಆಡಳಿತ ಮಂಡಳಿ ಹಣ ಕೇಳುತ್ತಿದೆ. ಇಲ್ಲವಾದರೆ, ಇಲ್ಲೇ ಪ್ರತಿ ವರ್ಷ ಹಣ ಕಟ್ಟಿ ಮುಂದುವರೆಯಿರಿ ಎಂದು ಪಾಲಕರಿಗೆ ಬೇಡಿಕೆಯಿಡುತ್ತಿದೆ ಎಂದು ಪಾಲಕರು ಮಾಧ್ಯಮದ ಮುಂದೆ ತಮ್ಮ ಅಳನ್ನು ತೋಡಿಕೊಂಡಿದ್ದಾರೆ.
ಬೆಂಗಳೂರು ನಗರದ ಹೊರ ವಲಯದಲ್ಲಿ ಶಾಲೆ-ಕಾಲೇಜು ತೆರೆಯಲಿದೆ ಬಿಬಿಎಂಪಿ
ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಪತ್ರದನ್ವಯ ಮಾನ್ಯತೆ ರದ್ದು
ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸದ ಕಾರಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಹಾಸರಸ್ವತಿ ವಿದ್ಯಾಪೀಠದ ವತಿಯಿಂದ ಸುಭಾಷ್ ನಗರದಲ್ಲಿ ನಡೆಯುತ್ತಿರುವ ಈ ಶಾಲೆಯ ಮಾನ್ಯತೆಯನ್ನು ರದ್ದು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಪತ್ರದನ್ವಯ ಕರ್ನಾಟಕ ಶಿಕ್ಷಣ ಅಧಿನಿಯಮ 1983 ರ ಸೆಕ್ಸನ್,(39)(2)ಪ್ರಕಾರ ಶಾಲೆಯ ಮಾನ್ಯತೆ ರದ್ದುಗೊಳಿಸಲಾಗಿದೆ.
ಹತ್ತಿರದ ಶಾಲೆಗೆ ಸೇರಿಸಲು ಸೂಚನೆ
ಶಾಲೆಯ ಮಾನ್ಯತೆ ರದ್ದು ಮಾಡಿರುವುದರಿಂದ ಈ ಶಾಲೆಯ ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ದಾಖಲು ಮಾಡಲು ಶಿಕ್ಷಣ ಇಲಾಖೆ ಆದೇಶ ಸಹ ಹೊರಡಿಸಿದ್ದಾರೆ. ಆದರೆ ಆ ಶಾಲೆಯ ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡದೆ ಸತಾಯಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ತೋರುತ್ತಿರುವ ನಿರ್ಲಕ್ಷ್ಯ ಕುರಿತು ಪಾಲಕರ ಮನವಿ ಸ್ವೀಕರಿಸಿದ್ದೇನೆ. ಶಾಲೆ ಆಡಳಿತ ಮಂಡಳಿ ಟಿಸಿ ಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ. ನಾನು ಶಾಲಾ ಆಡಳಿತ ಮಂಡಳಿ ಜೊತೆ ಮಾತನಾಡಿ ನ್ಯಾಯ ಕೊಡಿಸುತ್ತೇನೆ. ಆರ್ಟಿಇ ಸೌಲಭ್ಯ ಪಡೆದಿದ್ದರೆ, ಅದನ್ನು ಪರಾಮರ್ಶೆ ಮಾಡಿ ನಂತರ ಸೌಲಭ್ಯ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಳ್ಳಿಮಠ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಮೂಲಭೂತ ಸೌಕರ್ಯಗಳಿಲ್ಲ
"ಈ ಶಾಲೆಯಲ್ಲಿ ಪ್ರತಿ ವರ್ಷ 2500 ಸಾವಿರ ಶುಲ್ಕ ಕಟ್ಟುತ್ತಿದ್ದೇವೆ. ಇಡೀ ಶಾಲೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಒಂದೇ ಕೊಠಡಿಯಲ್ಲಿಒಬ್ಬರು ಶಿಕ್ಷಕರು ಮತ್ತು ನಮ್ಮ ಮಕ್ಕಳು ಸೇರಿದಂತೆ ಐದಾರು ಮಕ್ಕಳು ಮಾತ್ರ ಕುಳಿತಿರುತ್ತಾರೆ. ಶಿಕ್ಷಕರೇ ಇರುವುದಿಲ್ಲ. 3 ಮತ್ತು 4ನೇ ತರಗತಿ ದಾಟಿದ್ದರೂ ನಮ್ಮ ಮಕ್ಕಳಿಗೆ ಏನೂ ಬರುತ್ತಿಲ್ಲ. ಏನೂ ಕಲಿತೂ ಇಲ್ಲ. ನಾವು ಬೇರೆ ಶಾಲೆಗೆ ಸೇರಿಸುತ್ತೇವೆ ಅಂದರೂ ಟಿಸಿ ಕೊಡುತ್ತಿಲ್ಲ, ನಾವು ನಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕೆಂದುಕೊಂಡಿದ್ದೇವೆ" ಎಂದು ಜಂಗಿಸಾಬ್ ಎಂಬ ಪೋಷಕ ಹೇಳಿದ್ದಾರೆ.
ಉಚಿತ ದಾಖಲಾತಿ ಎಂದು ಮೋಸ
"ವಿದ್ಯಾನಿಕೇತನ ಶಾಲೆ ಮಂಡಳಿ ನಮ್ಮ ಮಕ್ಕಳನ್ನು ಉಚಿತ ಶಿಕ್ಷಣ ಕೊಡುತ್ತೇವೆ ಎಂದು ಸೇರಿಸಿಕೊಂಡರು. ನಂತರ 222 ಪಡೆದುಕೊಂಡರು, ಪ್ರತೀ ವರ್ಷ 2500 ತೆಗೆದುಕೊಳ್ಳುತ್ತಿದ್ದರು. ಬಟ್ಟೆ ಮತ್ತು ಪುಸ್ತಕ ಸೇರಿಸಿ 6 ಸಾವಿರಕ್ಕೂ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದರು. ಆದರೆ ಶಾಲೆಯಲ್ಲಿ ಯಾವುದೇ ಸೌಲಭ್ಯವಿಲ್ಲ. ಟೀಚರ್ ಇಲ್ಲ, ಮಕ್ಕಳಿಗೆ ಸರಿಯಾದ ವ್ಯವಸ್ಥೆಯಿಲ್ಲ, ಕೇಳಿದರೆ ಪ್ರಾಂಶುಪಾಲರಾದ ಸುವರ್ಣಲತಾ ಎಂಬುವವರು, ನಮ್ಮ ಮಾವನವರು ಬರುತ್ತಾರೆ, ಅವರು ಚುನಾವಣೆ ನಿರತರಾಗಿದ್ದರು, ಈಗ ಎಲ್ಲ ಸರಿ ಮಾಡ್ತಾರೆ. ಆದರೆ ನಮಗೆ ಟಿಸಿ ಕೊಡಿ ಎಂದರೆ ಅವರು ವರ್ಷಕ್ಕೆ 5000 ರೂ. ನಂತೆ ಕಟ್ಟಿಕೊಡಬೇಕು ಎನ್ನುತ್ತಿದ್ದಾರೆ. ಇಲ್ಲವಾದರೆ 2500 ರೂ ದುಡ್ಡು ಕಟ್ಟಿ ಶಾಲೆಗೆ ಕಳುಹಿಸಿ ಎಂದು ಬೇಡಿಕೆ ಇಡುತ್ತಿದ್ದಾರೆ" ಎಂದು ಜಂಗೀಸಾಬ್ ತಿಳಿಸಿದ್ದಾರೆ.
ಈ ಶಾಲೆಗೆ ಪ್ರಭಾವಿ ರಾಜಕಾರಣಿಯೊಬ್ಬರ ಬೆಂಬಲ ಇದೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಶಾಲೆಯ ಮಾನ್ಯತೆ ರದ್ದು ಆಗಿರುವ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಬದುಕು ಅತಂತ್ರವಾಗುವ ಸನ್ನಿವೇಶ ಕಂಡು ಬರುತ್ತಿದೆ. ಹಾಗಾಗಿ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಕಾರ್ಯ ಮಾಡಬೇಕಿದೆ.