"ಅಯೋಧ್ಯೆ ತೀರ್ಪಿನ ಹಿನ್ನೆಲೆ ಹುಬ್ಬಳ್ಳಿ ಬಾಂಬ್ ಸ್ಫೋಟದ ಸಂಚು";ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ, ಅಕ್ಟೋಬರ್ 23: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಾದ ಸ್ಫೋಟ ಪ್ರಕರಣದಲ್ಲಿ ಷಡ್ಯಂತ್ರವಿದ್ದು, ರಾಮ ಜನ್ಮಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನಡೆದ ಕುತಂತ್ರ ಇದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಕೇಂದ್ರ ಹಾಗೂ ರಾಜ್ಯ ಸರ್ಕಾರ ಹುಬ್ಬಳ್ಳಿ ಸ್ಫೋಟ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದೆ. ಈವರೆಗೂ ಬೆಂಗಳೂರಿನಿಂದ ಪರೀಕ್ಷೆಗಾಗಿ ತಂಡ ಬಂದಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ರೈಲು ನಿಲ್ದಾಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿಸಿ ಟಿವಿ ಕ್ಯಾಮರಾ ಹಾಕಲಾಗಿದೆ. ಆದರೆ ಪ್ರಯೋಜನವಿಲ್ಲ. ಈ ಕೃತ್ಯದ ಹಿಂದೆ ಷಡ್ಯಂತ್ರವಿದೆ. ರಾಮ ಜನ್ಮಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನಡೆದ ಕೃತ್ಯ ಇದು" ಎಂದರು.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ಬಾಕ್ಸ್ ಮೇಲೆ ಹೀಗೆ ಬರೆದಿತ್ತು
"ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು. ಪಾಕಿಸ್ತಾನ, ಅಫ್ಘಾನಿಸ್ತಾನದವರು ಹತಾಶರಾಗಿ ಅನಾಹುತ ನಡೆಸಲು ಸಂಚು ನಡೆಸಿದ್ದಾರೆ. ಮುಂದೆ ಬರಲಿರುವ ರಾಮಜನ್ಮ ಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಂಶಯವಿದೆ" ಎಂದರು.
ಬಾಂಗ್ಲಾ ವಲಸಿಗರು ದೇಶದಲ್ಲಿ ವಾಸವಾಗಿದ್ದಾರೆ ಎಂದು ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದ್ದರು. ಆದರೆ ಇದುವರೆಗೂ ವಲಸಿಗರನ್ನು ಗಡಿಪಾರು ಮಾಡುವ ಕೆಲಸ ನಡೆದಿಲ್ಲ. ಭಟ್ಕಳದ ಜಗನಾಥ ಶೆಟ್ಟಿ ಆಯೋಗವನ್ನು ಬಿಜೆಪಿ ಸರ್ಕಾರ ಮಂಡಿಸಬೇಕು. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಬಾಕ್ಸ್ ಬಂದಿದ್ದು ಎಲ್ಲಿಂದ?
ಇದೇ ಸಂದರ್ಭದಲ್ಲಿ "ಮದರಸಾಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ 100ಕ್ಕೂ ಹೆಚ್ಚು ಮದರಸಾಗಳಿವೆ. ಅವುಗಳನ್ನು ತಪಾಸಣೆ ಮಾಡಬೇಕು. ಸರ್ಕಾರ ಬಾಂಗ್ಲಾ ವಲಸಿಗರನ್ನು ಹುಡುಕದಿದ್ದರೆ ಶ್ರೀರಾಮ ಸೇನೆ ಹುಡುಕಿ ಹೊರಹಾಕಲಿದೆ" ಎಂದು ಎಚ್ಚರಿಕೆ ನೀಡಿದರು.