ಗಲಭೆಗೆ ಹಣ ಕೇಸ್: ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್ ಗೆ ಖುಲಾಸೆ
ಹುಬ್ಬಳ್ಳಿ, ಸೆ. 08: ಗಲಭೆ ಸೃಷ್ಟಿಸಲು ಹಣ ಪಡೆದ ಆರೋಪ ಎದುರಿಸುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಇಲ್ಲಿನ 2ನೇ ಜೆಎಂಎಫ್ ಸಿ ಈ ಪ್ರಕರಣದಿಂದ ಮುತಾಲಿಕ್ ರನ್ನು ಖುಲಾಸೆಗೊಳಿಸಿದೆ.
ತೆಹೆಲ್ಕಾ ಸುದ್ದಿ ಸಂಸ್ಥೆ 2010ರಲ್ಲಿ ನಡೆಸಿದ ಕುಟುಕು ಕಾರ್ಯಚರಣೆಯಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಣ ಪಡೆದು ಲವ್ ಜಿಹಾದ್ ಕುರಿತಂತೆ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಆದರೆ, ಇದನ್ನು ಅಲ್ಲಗೆಳೆದಿದ್ದ ಶ್ರೀರಾಮಸೇನೆ, ಸ್ಟಿಂಗ್ ಆಪರೇಷನ್ ನಲ್ಲಿ ಪಾಲ್ಗೊಂಡಿದ್ದ ಪುಷ್ಪ್ ಕುಮಾರ್ ಸೇರಿದಂತೆ ಸುದ್ದಿ ಸಂಸ್ಥೆಯ ರಾಹುಲ್ ಕನ್ವಲ್, ನಖ್ವಿ ಮುಂತಾದವರ ವಿರುದ್ಧವೆ ಪ್ರಕರಣ ದಾಖಲಿಸಿತ್ತು.
ಸುದ್ದಿವಾಹಿನಿ ವಿರುದ್ಧ ಶ್ರೀರಾಮ ಸೇನೆ ಸಮರ
"ಲವ್ ಜಿಹಾದ್' ಕುರಿತ ವಸ್ತು ಪ್ರದರ್ಶನ ವಿಷಯ ಪ್ರಸ್ತಾಪಿಸಿ ಪುಷ್ಪ್ ಕುಮಾರ್ ಎನ್ನುವವರು ನನಗೆ ಫೆ. 25 ಕ್ಕೆ ಕರೆ ಮಾಡಿದ್ದರು. ಈ ಬಗ್ಗೆ ಫೆ. 27ಕ್ಕೆ ನಮ್ಮಿಬ್ಬರ ಭೇಟಿ ಆಯಿತು. ಈ ಸಂದರ್ಭದಲ್ಲಿ ನಮ್ಮ ಮಧ್ಯೆ ನಡೆದ ಸಂಭಾಷಣೆ ಯನ್ನು ಧ್ವನಿ ಮುದ್ರಣ ಮಾಡಿಕೊಳ್ಳಲಾಗಿದೆ. ಆದರೆ ತಮಗೆ ಬೇಕಾದ ರೀತಿಯಲ್ಲಿ ಧ್ವನಿ ಮುದ್ರಣವನ್ನು ಮಾರ್ಪಡಿಸಿ ಸುದ್ದಿವಾಹಿನಿಗಳಲ್ಲಿ ಬಿತ್ತರಿಸಲಾಗಿದೆ, ಹಿಂದು ನಾಯಕನಿಗೆ ಕೆಟ್ಟ ಹೆಸರು ಬರಬೇಕು ಎಂಬ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ' ಎಂದು ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಕೋರ್ಟಿನಲ್ಲಿ ಹೇಳಿದ್ದರು.
2015ರಲ್ಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು, 30ಕ್ಕೂ ಅಧಿಕ ಮಂದಿ ಪ್ರಮೋದ್ ಹಾಗೂ ನಗರ ಅಧ್ಯಕ್ಷ ವಸಂತಕುಮಾರ್ ಭವಾನಿ ವಿರುದ್ಧ ಸಾಕ್ಷಿ ಹೇಳಿದ್ದರು. ಆದರೆ ಪ್ರಮುಖ ಸಾಕ್ಷಿ, ಆಧಾರದ ಕೊರತೆ ಇದ್ದಿದ್ದರಿಂದ ಪ್ರಕರಣದಿಂದ ಮುತಾಲಿಕ್ ರನ್ನು ಖುಲಾಸೆಗೊಳಿಸಿ ಜಿಲ್ಲಾ ನ್ಯಾಯಾಲಯವು ಆದೇಶ ಹೊರಡಿಸಿದೆ.