ಹಿಂದೂಗಳ ಭಾವನೆಗೆ ನೋವಾಗಿದೆ, ಜುಲೈ 2ರ ಪ್ರತಿಭಟನೆ ಪಕ್ಕಾ: ಮುತಾಲಿಕ್
ಹುಬ್ಬಳ್ಳಿ, ಜೂನ್ 29: 'ಉಡುಪಿಯ ಶ್ರೀಕೃಷ್ಣ ಮಠದಲ್ಲಿ ರಂಜಾನ್ ಅಂಗವಾಗಿ ಆಯೋಜಿಸಿದ್ದ ಇಫ್ತಾರ್ ಕೂಟವನ್ನು ಖಂಡಿಸಿ ಜುಲೈ 2ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧಸಲಾಗಿದ್ದು, ನಮ್ಮ ಪ್ರತಿಭಟನೆ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ವಿರುದ್ಧ ಅಲ್ಲ' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ನಮ್ಮ ಹೋರಾಟ ಏನಿದ್ದರೂ ಮಠದ ಆವರಣದಲ್ಲಿ ನಡೆದ ನಮಾಜ್ ಹಾಗೂ ಇಫ್ತಾರ್ ಕೂಟದ ವಿರುದ್ಧವೇ ಹೊರತು ಸ್ವಾಮೀಜಿ ವಿರುದ್ಧವಲ್ಲ. ನಮಗೆ ಪೇಜಾವರ ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ಈ ಕಾರಣದಿಂದ ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಮುತಾಲಿಕ್ ಹೇಳಿದರು.
ಪೇಜಾವರ ಶ್ರೀಗಳು ಹಿಂದುತ್ವಕ್ಕಾಗಿ ಹೋರಾಟವೇ ನಡೆಸಿಲ್ಲವೇ ?
ಇಫ್ತಾರ್ ಕೂಟದ ಔಚಿತ್ಯ ಏನಿತ್ತು ?
ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡುವ ಔಚಿತ್ಯ ಏನಿತ್ತು ಎಂದು ಪ್ರಶ್ನಿಸಿದ ಮುತಾಲಿಕ್, ಮಠದ ಆವರಣದಲ್ಲಿ ನಡೆದ ಘಟನೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಸೌಹಾರ್ದ ಎಂಬುದು ಕೇವಲ ಹಿಂದೂಗಳಿಂದ ಮಾತ್ರ ವ್ಯಕ್ತವಾಗುತ್ತಿದ್ದು, ಮುಸ್ಲಿಂರಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದರು.
ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ಹಿಂದೂ ಧರ್ಮದ ಹಬ್ಬಗಳನ್ನು ಆಚರಣೆ ಮಾಡುವುದಿಲ್ಲ. ಹೀಗಾಗಿ ಬಹುತೇಕ ವಿಷಯಗಳಲ್ಲಿ ಹಿಂದೂಗಳೇ ರಾಜಿಯಾಗುವ ಪ್ರಸಂಗ ಬಂದಿದೆ ಎಂದು ಅವರು ಅಸಮದಾನ ವ್ಯಕ್ತಪಡಿಸಿದರು.
ಇಫ್ತಾರ್ ನಿಂದ ಹಿಂದೂ ಧರ್ಮದ ಶ್ರೇಷ್ಠತೆ ಹೆಚ್ಚಿದೆ - ಪೇಜಾವರ ಶ್ರೀ ತಿರುಗೇಟು
ಮೋದಿ, ಟ್ರಂಪ್ ದಿಟ್ಟ ಕ್ರಮ
ಮುಸ್ಲಿಮರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಟ್ಟ ನಿಲುವು ತಾಳಿದ್ದಾರೆ ಎಂದು ಬಣ್ಣಿಸಿದ ಮುತಾಲಿಕ್, ನರೇಂದ್ರ ಮೋದಿ ಅವರು ಈವರೆಗೂ ಇಫ್ತಾರ್ ಕೂಟದಲ್ಲಿ ಭಾಗವಹಿಸಿಲ್ಲ. ಈ ಮೂಲಕ ಅಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಟ್ಟಿದ್ದಾರೆ.
ಅಲ್ಲದೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಹ ಇಫ್ತಾರ್ ಕೂಟವನ್ನು ತಮ್ಮ ದೇಶದ ಪಾರ್ಲಿಮೆಂಟ್ ನಲ್ಲಿ ರದ್ದು ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸ್ವಾಮೀಜಿ ನಡೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಅವರು ಕ್ಷಮೆ ಕೇಳಲಿ ಎಂದು ಅಪೇಕ್ಷಿಸುತ್ತಿಲ್ಲ. ಬದಲಾಗಿ ಪ್ರತಿಭಟನೆ ಮೂಲಕ ರಾಜ್ಯದ ಜನತೆಗೆ ಅಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಆದ ನೋವನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ಎಲ್ಲ ಹಿಂದೂ ಮಠಗಳಲ್ಲಿ ಇಂಥ ಕಾರ್ಯಕ್ರಮಗಳು ಆಯೋಜನೆ ಆಗಬಾರದು ಎಂಬ ಉದ್ದೇಶದಿಂದ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.