ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಾಷ್ಟ್ರಧ್ವಜದ ಮಹತ್ವ ಸಾಬೀತಾಗಿದೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಆಗಸ್ಟ್, 13: ಈಗಾಗಲೇ ಒಂದು ಕೋಟಿ ರಾಷ್ಟ್ರಧ್ವಜ ಮಾರಾಟ ಆಗಿವೆ. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಮಹತ್ವವನ್ನು ಸಾರಿದ್ದಾರೆ. ಇನ್ನಾದರೂ ಇಂದಿನಿಂದ ತಮ್ಮ ಮನೆಗಳ ಮುಂದೆ ಧ್ವಜವನ್ನು ಹಾರಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.
ಹುಬ್ಬಳ್ಳಿ ನಗರದಲ್ಲಿಂದು ತಮ್ಮ ನಿವಾಸದ ಮುಂದೆ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ದಿನ ನಿಜಕ್ಕೂ ನಮಗೆ ಮಹತ್ವವಾದದ್ದು ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಪ್ರಿಯಾಂಕ್ ಖರ್ಗೆ ಅವರ ಲಂಚ ಮಂಚ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಅವರ ಕೀಳು ಅಭಿರುಚಿ ತೋರಿಸುತ್ತಿದೆ. ಅವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಯಾವ ಮಹಿಳೆಯೂ ಈ ಹೇಳಿಕೆ ಸಹಿಸುವುದಿಲ್ಲ. ಮಹಿಳಾ ಸಮುದಾಯಕ್ಕೆ ಅವರು ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಕಿಡಿ ಕಾರಿದರು. ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸಚಿವರಾಗಿದ್ದಾಗ ಅನೇಕ ವಿಷಯಗಳಲ್ಲಿ ಭ್ರಷ್ಟಾಚಾರ ಆಗಿದೆ. 'ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ದಿದ್ದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ಪ್ರಹ್ಲಾದ್ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ ಜಗತ್ತಿಗೆ ಉತ್ತಮ ನಿದರ್ಶನ:
ಹೊಸ ಸಂಸತ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ನೂರು ವರ್ಷಕ್ಕೆ ಸಂಸತ್ ಯಾವ ರೀತಿ ಇರಬೇಕು ಎಂಬ ಚಿಂತನೆಯಲ್ಲಿದ್ದೇವೆ. ಅದೇ ರೀತಿಯಾಗಿ ಸಂಸತ್ ನಿರ್ಮಾಣ ಮಾಡಲಾಗಿದೆ. ಜಗತ್ತಿನಲ್ಲೇ ಈ ರೀತಿಯ ಕಟ್ಟಡ ಎಲ್ಲಿಯೂ ನಿರ್ಮಾಣ ಮಾಡಿಲ್ಲ. ಇದು ಜಗತ್ತಿಗೆ ಒಂದು ಉತ್ತಮ ನಿದರ್ಶನ ಸಂಸತ್ತು ಎಂದು ಹೇಳಿದರು.
ಪ್ರಹ್ಲಾದ್ ಜೋಶಿಯವರು ತಮ್ಮ ನಿವಾಸದ ಮುಂದೆ ಧ್ವಜಾರೋಹಣ ಮಾಡುವ ಮೂಲಕ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿದರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ಹರ್ ಘರ್ ತಿರಂಗಾ' ಅಭಿಯಾನವನ್ನು ಜಾರಿ ಮಾಡಿತ್ತು. ಇದರ ಪ್ರಯುಕ್ತವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಮನೆಯ ಮುಂದೆ ಧ್ವಜಾರೋಹಣ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಅರ್ಥಪೂರ್ಣ ಆಚರಣೆಗೆ ಸರ್ಕಾರ ಮುಂದಾಗಿದೆ. ಈಗಾಗಲೇ ದೇಶಾದ್ಯಂತ ರಾಷ್ಟ್ರೀಯ ಧ್ವಜ ರಾರಾಜಿಸುತ್ತಿದೆ. ಹೀಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ತಮ್ಮ ನಿವಾಸದ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.
Recommended Video