"ಸಾವಿರಾರು ಜನರ ಕೊಂದ ಟಿಪ್ಪು ಕಥೆ ಮಕ್ಕಳಿಗೇಕೆ?" ಪ್ರಹ್ಲಾದ್ ಜೋಶಿ ಸಮರ್ಥನೆ
ಹುಬ್ಬಳ್ಳಿ, ಅಕ್ಟೋಬರ್ 30: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕಲು ಮುಂದಾಗಿರುವ ಸರ್ಕಾರದ ನಡೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಪಠ್ಯದಲ್ಲಿ ಯಾರ ಚರಿತ್ರೆ ಇರಬೇಕು ಎಂಬುದರ ಕುರಿತು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಭಾರತೀಯ ವ್ಯವಸ್ಥೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ, ಶ್ರೀರಾಮ, ಕೃಷ್ಣ, ಮಹಾಭಾರತದಂಥ ಕೃತಿಗಳನ್ನು ಪರಿಚಯಿಸಬೇಕು. ಬದಲಾಗಿ ಔರಂಗಜೇಬನ ಕ್ರೌರ್ಯ, ಅಪ್ಪನನ್ನು ಜೈಲಿಗೆ ಕಳಿಸಿದವರ, ಸಾವಿರಾರು ಹಿಂದೂ ಜನರನ್ನು ಕೊಲೆ ಮಾಡಿದ ಟಿಪ್ಪುವಿನ ಇತಿಹಾಸ ಮಕ್ಕಳಿಗೆ ಬೇಡ. ದೇಶದ ಉದಾತ್ತತೆ, ಸಂಸ್ಕೃತಿ ಸಾರುವ ವಿಷಯಗಳನ್ನು ಪಠ್ಯದಲ್ಲಿ ಪರಿಚಯಿಸಬೇಕು" ಎಂದು ಹೇಳಿದ್ದಾರೆ.
ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ತೆಗೆದುಹಾಕಲು ಮುಂದಾದ ಬಿಜೆಪಿ ಸರ್ಕಾರ
"ಟಿಪ್ಪು ಸುಲ್ತಾನಂಥ ಮತಾಂಧನ ಪಾಠವನ್ನು ಪಠ್ಯದಲ್ಲಿ ಇಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಒಳ್ಳೆಯ ನಿರ್ಣಯ ಕೈಗೊಂಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ" ಎಂದಿದ್ದಾರೆ.
ಇದೇ ಸಂದರ್ಭ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಬಿಜೆಪಿ ಪರ ಮೆದುಧೋರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಸದ್ಯಕ್ಕೆ ನಮಗೆ ಯಾವುದೇ ಬೆಂಬಲದ ಅಗತ್ಯವಿಲ್ಲ, ಸರ್ಕಾರ ಸುಭದ್ರವಾಗಿದೆ. ಬಿಜೆಪಿ ಉತ್ತಮ ಆಡಳಿತ ನಡೆಸುತ್ತಿದೆ, ರಾಜ್ಯದಲ್ಲಿ ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಅವರ ಉತ್ತಮ ಆಡಳಿತ ನೋಡಿ ಕುಮಾರಸ್ವಾಮಿ ಅವರು ಈ ರೀತಿ ಮಾತನಾಡಿರಬಹುದು. ಅವರು ನಮಗೆ ಬೆಂಬಲ ನೀಡುತ್ತೇವೆ ಅಂತಲೂ ಹೇಳಿಲ್ಲ" ಎಂದಿದ್ದಾರೆ.
"ಲಕ್ಷ್ಮಣ ಸವದಿಯನ್ನು ಡಿಸಿಎಂ ಸ್ಥಾನದಿಂದ ಕೈಬಿಟ್ಟು ಉಮೇಶ ಕತ್ತಿಗೆ ಡಿಸಿಎಂ ಸ್ಥಾನ ಮಾತುಗಳು ಬಿಜೆಪಿಯಲ್ಲಿ ಹರಿದಾಡುತ್ತಿವೆ. ಈ ವಿಚಾರ ಕೇವಲ ಊಹಾಪೋಹಗಳಷ್ಟೇ, ಇದಕ್ಕೆಲ್ಲ ಉತ್ತರ ನೀಡುವ ಅವಶ್ಯಕತೆ ಇಲ್ಲ. ಉಮೇಶ ಕತ್ತಿ ಅವರು ನಮ್ಮ ಪಕ್ಷದ ಹಿರಿಯರು. ಆದರೆ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಸ್ಥಾನದಿಂದ ಕೈಬಿಡುತ್ತಾರೆ ಎಂಬ ಮಾತುಗಳು ಆಧಾರರಹಿತವಾದದ್ದು" ಎಂದು ತಿಳಿಸಿದ್ದಾರೆ.