ನಿಯಮ ಉಲ್ಲಂಘಿಸಿದ ಪೊಲೀಸ್ ಜೀಪ್ಗೆ ದಂಡ ವಿಧಿಸಿದ ಪ್ರಾಮಾಣಿಕ ಪೊಲೀಸ್ ಅಧಿಕಾರಿ!
ಹುಬ್ಬಳ್ಳಿ, ಮೇ. 20: ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಪೊಲೀಸ್ ವಾಹನಕ್ಕೆ ದಂಡ ವಿಧಿಸುವ ಮೂಲಕ ಹುಬ್ಬಳ್ಳಿ ಪೊಲೀಸರು "ಕಾನೂನು ಮುಂದೆ ಎಲ್ಲರೂ ಸಮಾನರು" ಎಂಬ ಸಂದೇಶವನ್ನು ರವಾನಿಸಿದ್ದಾರೆ. ಕೊರೊನಾ ಕಷ್ಟ ಕಾಲದಲ್ಲಿ ಜೀವ ಪಣಕ್ಕೆ ಇಟ್ಟು ಕೆಲಸ ಮಾಡುವ ಪೊಲೀಸರು ಲಾಕ್ ಡೌನ್ ನಿರ್ಬಂಧ ಜಾರಿ ವೇಳೆ ಸಾರ್ವಜನಿಕರ ಮೇಲೆ ಲಾಠಿ ಪ್ರಯೋಗಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಹುಬ್ಬಳ್ಳಿಯಲ್ಲಿ ಕೆಳ ಹಂತದ ಪೊಲೀಸ್ ಅಧಿಕಾರಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ವಾಹನಕ್ಕೆ ದಂಡದ ರಶೀದಿ ಹರಿಯುವ ಮೂಲಕ ತನ್ನ ಪ್ರಾಮಾಕತೆ ಜತೆಗೆ ಪೊಲೀಸರ ಮೇಲಿನ ಗೌರವ ಹೆಚ್ಚಾಗುವಂತೆ ನಡೆದುಕೊಂಡಿದ್ದಾರೆ.
ನಡೆದಿದ್ದೇನು?: ಬೆಳಗಾವಿಯ ಪೊಲೀಸ್ ವಾಹನದಲ್ಲಿ ಏಳು ಪೊಲೀಸ್ ಸಿಬ್ಬಂದಿಯಿದ್ದ ಪೊಲೀಸ್ ಜೀಪ್ ಚಲಿಸುತ್ತಿತ್ತು. ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಚಲಿಸುತ್ತಿದ್ದ ಪೊಲೀಸ್ ಜೀಪನ್ನು ತಡೆದ ಹುಬ್ಬಳ್ಳಿ ಪೊಲೀಸರು, ಕೋವಿಡ್ ನಿಯಮದ ಪ್ರಕಾರ ಐದು ಮಂದಿಗೂ ಅಧಿಕ ಮಂದಿ ಜೀಪಿನಲ್ಲಿ ಹೋಗುವಂತಿಲ್ಲ. ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದ್ದೀರಿ. ದಂಡ ಪಾವತಿಸಿ ಎಂದು ಚಾಲಕನಿಗೆ ಸೂಚಿಸಿದ್ದಾರೆ. ನಿಯಮ ಉಲ್ಲಂಘನೆ ಕುರಿತು ಮನವರಿಕೆ ಮಾಡಿದ ಮರು ಕ್ಷಣದಲ್ಲೇ ಪೊಲೀಸ್ ವಾಹನದ ಸಂಖ್ಯೆ ಉಲ್ಲೇಖಿಸಿ ದಂಡದ ರಶೀದಿ ಹರಿದು ಕೈಗೆ ಕೊಟ್ಟಿದ್ದಾರೆ. ಮರು ಮಾತನಾಡದೇ ಪೊಲೀಸ್ ಜೀಪ್ ಚಾಲಕ ಕೂಡ ದಂಡ ಪಾವತಿಸಿ ದಂಡದ ರಶೀದಿಯನ್ನು ಪಡೆದುಕೊಂಡಿದ್ದು, " ಕಾನೂನು ಎಲ್ಲರಿಗೂ ಒಂದೇ " ಎಂಬುದು ಇನ್ನೂ ಜೀವಂತವಾಗಿದೆ ಎಂಬ ಸಂದೇಶವನ್ನು ಸಾರಿದ್ದಾರೆ.
ಕೆಳ ದರ್ಜೆಯ ಅಧಿಕಾರಿ: ನಿಯಮ ಉಲ್ಲಂಘಿಸಿದ ಪೊಲೀಸ್ ವಾಹನಕ್ಕೆ ದಂಡ ವಿಧಿಸಿ ಕಾನೂನು ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶ ಒಂದಡೆಯಾದರೆ, ಒಬ್ಬ ಎಎಸ್ಐ ದರ್ಜೆಯ ಅಧಿಕಾರಿಯ ಕರ್ತವ್ಯ ನಿಷ್ಠೆ ಮತ್ತೊಂದು ವಿಚಾರ. ಪೊಲೀಸರು ಯಾರ ಒತ್ತಡಕ್ಕೂ ಮಣಿಯಬಾರದು ಪ್ರಭಾವಕ್ಕೆ ಒಳಗಾಗಬಾರದು. ಪೊಲೀಸ್ ಸೇವೆ ಎಂಬುದು ಪವಿತ್ರ ವೃತ್ತಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಒಬ್ಬ ಪೊಲೀಸ್ ಪ್ರಾಮಾಣಿಕವಾಗಿ ಇರಬೇಕಾದ ಅಗತ್ಯತೆಯನ್ನು ಈ ಕೆಳ ಹಂತದ ಅಧಿಕಾರಿ ಸಂದೇಶ ರವಾನಿಸಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕಾರ್ಯ ಇದೀಗ ಪೊಲೀಸ್ ಇಲಾಖೆಯಲ್ಲಿ ಬಹುಚರ್ಚೆಗೆ ನಾಂದಿ ಹಾಡಿದೆ.
ಮೂರು ವರ್ಷದ ಹಿಂದೆ ಸಹ ಹುಬ್ಬಳ್ಳಿ ಪೊಲೀಸರು ವಾಹನ ಸವಾರರ ವಿರುದ್ಧ ವಿನೂತನ ಕಾರ್ಯಾಚರಣೆ ನಡೆಸಿ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮನೆಗೆ ಹೋಗಿ ರಶೀದಿ ಕೊಟ್ಟು ಬಂದಿದ್ದರು. ಈ ಮೂಲಕ ವಾಹನ ಸವಾರರಿಗೆ ಚುರುಕು ಮುಟ್ಟಿಸಿದ್ದರು.
Recommended Video