ಕನ್ನಡ ಧ್ವಜದ ಬೇಡಿಕೆ ಪ್ರತ್ಯೇಕತೆ ಕೂಗಲ್ಲ: ಪಾಟೀಲ್ ಪುಟ್ಟಪ್ಪ
ಹುಬ್ಬಳ್ಳಿ, ಜುಲೈ 19: ಈಗ ಬಳಕೆಯಲ್ಲಿರುವ ಹಳದಿ-ಕೆಂಪು ಬಾವುಟ ಕನ್ನಡ ನಾಡಿನ ಸಮಗ್ರತೆಯನ್ನು ಹೊಂದಿಲ್ಲ. ಅದು ಕೇವಲ ಅರಿಷಿಣ ಕುಂಕುಮ ಬಣ್ಣದಿಂದ ಕೂಡಿದ್ದು, ಇಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದರಿಂದ ಈ ಧ್ವಜವನ್ನು ಯಾವುದೇ ಕಾರಣಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ, ಆದ್ದರಿಂದ ಈ ಧ್ವಜಕ್ಕೆ ಹೊರತಾಗಿ ನಾಡಿಗೊಂಡು ಪ್ರತ್ಯೇಕ ಧ್ವಜದ ಬೇಡಿಕೆ ತಪ್ಪಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರ ನಾಡೋಜ ಪಾಟೀಲ ಪುಟ್ಟಪ್ಪ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕಕ್ಕೆ ಧ್ವಜ ಬೇಕೋ ಬೇಡವೋ : ವಾದವಿವಾದ
ಹುಬ್ಬಳ್ಳಿಯಲ್ಲಿಂದು(ಜುಲೈ 19) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1962 ರಲ್ಲಿ ತಮಿಳರಿಂದ ಕನ್ನಡ ಹಾಗೂ ಕನ್ನಡಿಗರ ಮೇಲೆ ನಡೆಯುತ್ತಿದ್ದ ಆಕ್ರಮಣ ತಡೆಯಲು ನಡೆದ ಹೋರಾಟದಲ್ಲಿ ಕನ್ನಡದ ಕಾರ್ಯಕರ್ತ ರಾಮಮೂರ್ತಿ ಅವರು ಈ ಧ್ವಜವನ್ನು ಬಳಕೆ ಮಾಡಲು ಆರಂಭಿಸಿದರು. ಅಲ್ಲದೆ ಅಂದೇ ಅವರು ಕನ್ನಡದ ಧ್ವಜಕ್ಕಾಗಿ ಹೋರಾಟ ಮಾಡಿದ್ದರು. ಅದು ಇಂದಿಗೂ ಮುಂದುವರಿದಿದೆ ಅಷ್ಟೇ ಎಂದು ಅವರು ಹೇಳಿದರು.
ನಾಡಿಗೊಂದು ಧ್ವಜದ ಬೇಡಿಕೆ ಪ್ರತ್ಯೇಕತೆಯ ಕೂಗಲ್ಲ. ಅದು ಕನ್ನಡದ ಸಾರ್ವಭೌಮದ ಸಂಕೇತ. ನಾಡು, ನುಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂಥ ಧ್ವಜ ಹೊಂದಬೇಕು ಎಂಬುದು ಬಹುದಿನಗಳ ಬೇಡಿಕೆ. ಇದರಿಂದ ದೇಶದ ಸಮಗ್ರತೆಗೆ ದಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಇದು ರಾಷ್ಟ್ರಧ್ವಜಕ್ಕೆ ಪರ್ಯಾಯವೂ ಅಲ್ಲ ಎಂದು 96 ವರ್ಷದ ಖ್ಯಾತ ಸಾಹಿತಿ, ಪಾಟೀಲ್ ಪುಟ್ಟಪ್ಪ ಸ್ಪಷ್ಟಪಡಿಸಿದರು.
ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಕರ್ನಾಟಕದ 'ಪ್ರತ್ಯೇಕ ಧ್ವಜ'
ರಾಷ್ಟ್ರಧ್ವಜದ ಸಾರ್ವಭೌಮತೆಗೆ ಧಕ್ಕೆಯಾಗದಂತೆ ಕನ್ನಡದ ಅಸ್ತಿತ್ವ ಕಾಪಾಡುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಪುಟ್ಟಪ್ಪ ಕರೆ ನೀಡಿದರು.