ಅಗ್ನಿಪಥ್ ಯೋಜನೆ ಹಿಂಸಾತ್ಮಕವಾಗಲೂ ವಿರೋಧ ಪಕ್ಷಗಳೇ ಕಾರಣ: ಜೋಶಿ ಕಿಡಿ
ಹುಬ್ಬಳ್ಳಿ, ಜೂ. 19: ದೇಶದಲ್ಲಿ ನಡೆಯುತ್ತಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ ಪ್ರತಿಪಕ್ಷಗಳ ಪಿತೂರಿಯಿದೆ. ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅಂತಹವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇವೆ. ಆದರೆ ಕೆಲವು ಉದ್ದೇಶ ಪೂರ್ವಕವಾಗಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜೋಶಿ, "ಕೇಂದ್ರದ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ವಿರೋಧ ಪಕ್ಷಗಳ ಕೈವಾಡ ಇದೆ. ಸೈನ್ಯ ಸೇರಿ ದೇಶಸೇವೆ ಮಾಡುವ ಅಮೂಲ್ಯ ಅವಕಾಶವನ್ನು ದೇಶದ ಯುವ ಸಮುದಾಯ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಕೆಲವರು ವಿಪಕ್ಷಗಳ ಮಾತನ್ನು ನಂಬಿ ಹಿಂಸೆಗೆ ಇಳಿದಿದ್ದಾರೆ," ಎಂದು ಜೋಶಿ ಅಸಮಾಧಾನ ಹೊರಹಾಕಿದರು.
ಅಗ್ನಿಪಥ್ ವೀರರಿಗೆ ಸಿಎಪಿಎಫ್, ಅಸ್ಸಾಂ ರೈಫಲ್ಸ್ನಲ್ಲಿ ಶೇ.10ರಷ್ಟು ಮೀಸಲಾತಿ
ಅಗ್ನಿಪಥ್ ಯೋಜನೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ಮಾಡಲಾಗುತ್ತಿದೆ. ಹಲವು ಕಡೆ ರೈಲುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಪ್ರಯಾಣಿಕರಿಗೆ ತೊಂದರೆ ಆಗುವುದಲ್ಲದೆ, ಆಸ್ತಿಪಾಸ್ತಿ ನಷ್ಟವಾಗಿದೆ. ಇದೊಂದು ರಾಜಕೀಯ ಪ್ರೇರಿತ ಕೃತ್ಯ. ಜನ ಸ್ವಲ್ಪ ದಿನಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರು ಈಗಾಗಲೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಇದೀಗ ಆ ಸಾಲಿಗೆ ಜೋಶಿ ಸೇರ್ಪಡೆಗೊಂದಿದ್ದಾರೆ.
ಬೇರೆ ದೇಶಗಳಲ್ಲಿ ಇದೇ ವ್ಯವಸ್ಥೆಯಿದೆ
ಅಗ್ನಿಪಥ್ ವ್ಯವಸ್ಥೆ ಬೇರೆ ದೇಶಗಳಲ್ಲಿಯೂ ಜಾರಿಯಲ್ಲಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಲಾಗಿದ್ದು, ಸೈನ್ಯಾಧಿಕಾರಿಗಳು ಸೇನೆಯ ತಜ್ಞರು ಯೋಜನೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಪ್ರಯೋಗ ಮಾಡಬಾರದು ಎನ್ನುವುದ ದುರುದ್ದೇಶದಿಂದ ಈ ರೀತಿ ಗೊಂದಲ ಸೃಷ್ಠಿ ಮಾಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅಗ್ನಿಪಥ್ ಯೋಜನೆಗೆ ಪ್ರತಿಭಟನೆ: ಕಾಂಗ್ರೆಸ್ನಿಂದ ಬೆಂಕಿಗೆ ತುಪ್ಪ ಹಾಕುವ ಕೆಲಸ- ಸಿಎಂ
ದೋಷಗಳನ್ನು ಸರಿಪಡಿಸಿಲು ಸಿದ್ಧ
ಈ ಯೋಜನೆಯಲ್ಲಿ ಸಣ್ಣ-ಪುಟ್ಟ ದೋಷಗಳಿದ್ದರೆ ಸರಿಪಡಿಸಿಕೊಳ್ಳಬಹುದು, ಆದರೆ ಈ ರೀತಿ ಹಿಂಸಾತ್ಮಕ ಹೋರಾಟ ಮಾಡುವುದು ಸರಿಯಲ್ಲ. ಯಾವುದೇ ಸಾಧಕ ಬಾಧಕ ಚರ್ಚಿಸದೇ ಜಾರಿ ತರುತ್ತಿಲ್ಲ, ಈ ಯೋಜನೆಗೆ ಸೇರುವವರಿಗೆ ಮುಂದುವರಿಯಲೂ ಅವಕಾಶ ಇರುತ್ತದೆ ಮತ್ತು ಬೇರೆ ಕಡೆಯೂ ಉದ್ಯೋಗ ಅವಕಾಶ ಸಿಗಲಿದೆ. ನಮ್ಮ ಸರಕಾರ ಏನೇ ಜಾರಿಗೆ ತಂದರೂ ಕಾಂಗ್ರೆಸ್ ವಿರೋಧಿಸುತ್ತಿದೆ. ಈ ಹೋರಾಟದ ಹಿಂದೆ ಅವರ ಷಡ್ಯಂತ್ರವಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಜನ ಬೀದಿಗೆ ಬಂದಿದ್ದಾರೆ. ಈ ಹೋರಾಟದಲ್ಲಿರುವವರಲ್ಲಿ ಶೇಕಡಾ 90 ಭಾಗ ಸೇನೆಗೆ ಸೇರಲು ಅರ್ಹತೆಯನ್ನೇ ಹೊಂದಿಲ್ಲ. ಸೇನೆಗೆ ಸೇರಬೆಕೆನ್ನುವವರು ಹೋರಾಡುತ್ತಿಲ್ಲ, ಬದಲಿಗೆ ಬೇರೆಯವರು ಬೀದಿಗಿಳಿದು ಹೋರಾಡುತ್ತಿದ್ದಾರೆ ಎಂದರು.
ಮೋದಿ ಹೆಸರಿಗೆ ಮಸಿ ಬಳಿಯುವ ಯತ್ನ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ, ಅವರ ಹೇಳಿಕೆಗಳಿಗೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ರಫೇಲ್ ಹಗರಣದಲ್ಲಿ ಮೋದಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿ ರಾಹುಲ್ ಗಾಂದಿ ವಿಫಲರಾದರು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ತಳ್ಳಿ ಹಾಕಿತು. ರಫೇಲ್ ಹಗರಣದಲ್ಲಿ ಹುರುಳಿಲ್ಲ, ಅದು ಪಾರದರ್ಶಕವಾಗಿದೆ ಎಂದು ಆದೇಶ ನೀಡಿತು. ರಫೇಲ್ ಸೇರ್ಪಡೆಯಿಂದ ವಾಯುಸೇನೆ ಅತ್ಯಂತ ಬಲಿಷ್ಠವಾಗಿದೆ ಎಂದು ಜೋಶಿ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ
ಅಗ್ನಿಪಥ್ ಒಂದು ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ ಇದೆ. 17 - 21 ವರ್ಷ ಉತ್ತಮ ತರಬೇತಿ ಪಡೆದರೆ, ಬೇರೆ ಅವಕಾಶಗಳು ಸಿಗುತ್ತವೆ. ಮಿಲಿಟರಿ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ ಅವಕಾಶ ಸಿಗಲಿದೆ. ಸಶಕ್ತ ಯುವಕರ ಜನಸಂಖ್ಯೆ ಯನ್ನು ಸಿದ್ದ ಮಾಡುವ ದೃಷ್ಟಿಯಿಂದ ಹಾಗೂ ಸಶಸ್ತ್ರ ಪಡೆಗಳಲ್ಲಿ ಯುವಶಕ್ತಿ ಯನ್ನು ತುಂಬುವ ಮಹತ್ವಾಕಾಂಕ್ಷೆ ಇದೆ. ಯೋಜನೆಯ ಬಗ್ಗೆ ಅರಿವಿಲ್ಲದೆ ರೈಲುಗಳಿಗೆ ಬೆಂಕಿ ಹಚ್ಚುವುದು, ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ. ಪ್ರಯಾಣಿಕರಿಗೆ ತೊಂದರೆ, ಆಸ್ತಿಪಾಸ್ತಿ ನಷ್ಟವಾಗಿದೆ. ಜವಾಬ್ದಾರಿ ಇರುವವರು ಯಾರೂ ಈ ರೀತಿ ಮಾಡುವುದಿಲ್ಲ. ಇದೊಂದು ರಾಜಕೀಯ ಪ್ರೇರಿತ ಕೃತ್ಯ ಎನ್ನುವುದಕ್ಕೆ ಖಾನಾಪುರ ಶಾಸಕ ಪ್ರತಿಭಟನೆಯಲ್ಲಿ ಇರುವುದೇ ಸಾಕ್ಷಿ,ಇದನ್ನು ಜನ ಸ್ವಲ್ಪ ದಿನಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.