ಪುತ್ರನನ್ನು ಸೋಲಿಸಿದ್ದಕ್ಕೆ ಸುಮಲತಾ ವಿರುದ್ಧ ಎಚ್ಡಿಕೆ ರಾಜಕೀಯ: ಸಿದ್ದರಾಮಯ್ಯ
ಹುಬ್ಬಳ್ಳಿ, ಜುಲೈ 12: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸುಮಲತಾ ಅಂಬರೀಶ್ ಸೋಲಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೆಆರ್ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಆರೋಪ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, "ಸುಮಲತಾ ಆರೋಪ ಮಾಡಿದ ನಂತರ ಸರ್ಕಾರವಾಗಲಿ, ಗಣಿ ಇಲಾಖೆಯಾದರೂ ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕಿತ್ತು.''
"ಕೆಆರ್ಎಸ್ ಡ್ಯಾಂನ 20 ಕಿಲೋಮೀಟರ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸುಮಲತಾ ಆರೋಪಿಸಿದ್ದಾರೆ. ಜೆಡಿಎಸ್ ನಾಯಕರ ಗಣಿ ಕಂಪನಿಗಳಿವೆ ಎಂದು ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಆಡಳಿತ ಪಕ್ಷ ಭಾಗಿಯಾಗಿದೆ. ಹೀಗಾಗಿ ಸರ್ಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿಲ್ಲ,'' ಎಂದು ಆರೋಪಿಸಿದರು.
"ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯ ಸರ್ಕಾರಕ್ಕೆ ಮಾನ, ಮರ್ಯಾದೆ, ನಾಚಿಕೆ ಏನೂ ಇಲ್ಲ. ಮಾಲಿನ್ಯ ಮಂಡಳಿಯ ಅಧಿಕಾರಿ ವರ್ಗಾವಣೆಗೆ 16 ಕೋಟಿ ಡೀಲಿಂಗ್ ಮಾಡಿದ್ದು ಸುಳ್ಳಾ?,'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
Recommended Video
"ಜಾತಿ ಸಮೀಕ್ಷೆ ನಡೆದು ಎರಡೂವರೆ ವರ್ಷಗಳಾಗಿವೆ. ಅದರ ವರದಿ ಸಲ್ಲಿಕೆಯಾಗಿದ್ದು, ಸದನದಲ್ಲಿ ಇನ್ನೂ ಚರ್ಚೆ ಆಗುತ್ತಿಲ್ಲ. ಚರ್ಚೆ ಮಾಡಿದರೆ ಸಾಮಾಜಿಕ ನ್ಯಾಯ ಒದಗಿಸಬೇಕಾಗುತ್ತದೆ. ಹೀಗಾಗಿ ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತಿಲ್ಲ,'' ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಕಿಡಿಕಾರಿದರು.