ಹುಬ್ಬಳ್ಳಿ: ಅಗ್ನಿ ಸುರಕ್ಷತೆ ನಿಯಮ ಪಾಲಿಸದ ಕೈಗಾರಿಕೆಗಳಿಗೆ ನೋಟಿಸ್
ಧಾರವಾಡ, ಆಗಸ್ಟ್, 17: ಹುಬ್ಬಳ್ಳಿ ನಗರ ಹೊರ ವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಪ್ಲೇಮ್ ಕಾರ್ಖಾನೆಯಲ್ಲಿ ಜುಲೈ 23ರಂದು ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 6 ಜನ ಕಾರ್ಮಿಕರು ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ 6 ಜನ ಕಾರ್ಮಿಕರು ಮೃತಪಟ್ಟಿದ್ದರು. ಗಾಯಾಳುಗಳಾಗಿರುವ 2 ಜನ ಕಾರ್ಮಿಕರಲ್ಲಿ ಒಬ್ಬರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೋರ್ವ ಕಾರ್ಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಳಿಕ ಕೈಗಾರಿಕಾ ವಸಾಹತುಗಳಲ್ಲಿನ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಅವರು ಆಗಸ್ಟ್ 12ರಂದು ತುರ್ತು ಸಭೆ ನಡೆಸಿದ್ದರು. ಧಾರವಾಡ ಮತ್ತು ಹುಬ್ಬಳ್ಳಿ ನಗರ ಅಭಿವೃದ್ಧಿ ಹೊಂದಿರುವ ಕೈಗಾರಿಕಾ ವಸಾಹತು ಮತ್ತು ಕೈಗಾರಿಕಾ ಪ್ರದೇಶದಲ್ಲಿ ಪರಿಶೀಲನೆಗೆ ಮುಂದಾಗಿದ್ದಾರೆ. ಕೈಗಾರಿಕೆಗಳು, ಅಂಗಡಿ ಮತ್ತು ಮುಂಗಟ್ಟುಗಳನ್ನು ಪರಿಶೀಲಿಸಲು ಆದೇಶ ನೀಡಿದ್ದಾರೆ.
ಮಾರುವೇಷ ಧರಿಸಿ ಆಟೋಚಾಲಕರಿಗೆ ಬಿಸಿ ಮುಟ್ಟಿಸಿದ ಧಾರವಾಡ ಪೊಲೀಸ್!
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅವರ ನೇತೃತ್ವದಲ್ಲಿ ಕೈಗಾರಿಕೆಗಳ ಸಮೀಕ್ಷೆ ನಡೆಸಲು ಆದೇಶಿಸಿದ್ದರು. ಈಗಾಗಲೇ ಕಾನೂನು ಉಲ್ಲಂಘಿಸಿದ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಮೀಕ್ಷೆಯಲ್ಲಿ ಭಾಗಿಯಾದ ಇಲಾಖೆಗಳು?
ಕೆಐಎಡಿಬಿ, ಕೆಎಸ್ಎಸ್ಐಡಿಸಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ವಿದ್ಯುತ್ ಪರಿವೀಕ್ಷಣಾ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ಗಳ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ, ಕಂದಾಯ, ಪೊಲೀಸ್ ಮತ್ತು ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳನ್ನು ಸಮೀಕ್ಷೆಗೆ ರಚಿಸಲಾಗಿತ್ತು. ಒಟ್ಟು 10 ತಂಡಗಳನ್ನು ರಚಿಸಿ ಜುಲೈ 27ರಿಂದ ಸಮೀಕ್ಷೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 10 ಕೈಗಾರಿಕಾ ವಸಾಹತು ಮತ್ತು 6 ಕೈಗಾರಿಕಾ ಪ್ರದೇಶಗಳಿದ್ದು, ಒಟ್ಟು 2,180 ಕೈಗಾರಿಕಾ ಘಟಕಗಳ ಸಮೀಕ್ಷೆಯನ್ನು ಆಗಸ್ಟ್ 6ರಂದು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಕಾನೂನು ಉಲ್ಲಂಘಿಸಿದವರಿಗೆ ಡಿಸಿ ವಾರ್ನ್!
ಕೈಗಾರಿಕೆ, ಅಂಗಡಿ ಮತ್ತು ಎಸ್ಟ್ಯಾಬ್ಲಿಷ್ಮೆಂಟ್ಗಳಲ್ಲಿ ವಿವಿಧ ಇಲಾಖೆಗಳ 647 ಘಟಕಗಳು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಗಿ ಪಡೆಯದಿರುವುದು ಬೆಳಕಿಗೆ ಬಂದಿದೆ. ಕಾರ್ಖಾನೆ ಮತ್ತು ಬಾಯ್ಲರ್ಗಳ ಇಲಾಖೆಯ ಅನ್ವಯ 75 ಘಟಕಗಳು ಪರವಾನಗಿಯನ್ನು ಪಡೆದಿಲ್ಲ. ಕಾರ್ಮಿಕ ಇಲಾಖೆಯಲ್ಲಿ 978 ಘಟಗಳ ಪರವಾನಗಿ ಪಡೆದಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ
15 ಕಾರ್ಖಾನೆಗಳು ಇಎಸ್ಐ ನೀಡಿಲ್ಲ. ಭವಿಷ್ಯ ನಿಧಿ ನೀಡದ 2 ಕಾರ್ಖಾನೆಗಳು, ವಿದ್ಯುತ್ ಇಲಾಖೆಯ ಪರವಾನಿಗೆ ಪಡೆಯದ 101 ಕಾರ್ಖಾನೆಗಳು, ಕೆಐಎಡಿಬಿನ ಬೈಲಾ ಉಲ್ಲಂಘನೆಯ 278 ಘಟಕಗಳು ಹಾಗೂ ಕೆಎಸ್ಎಸ್ಐಡಿಸಿ ನಿಯಮ ಉಲ್ಲಂಘಿಸಿದ 106 ಕೈಗಾರಿಕಾ ಘಟಕಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 4 ಕಾರ್ಖಾನೆಗಳಿಗೆ ಉತ್ಪಾದನೆ ಮಾಡಲು ನಿಷೇಧದ ಆದೇಶವಿದೆ. 75 ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡದೇ ಕಾನೂನು ಉಲ್ಲಂಘಿಸಿದ 22 ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾನೂನು ಉಲ್ಲಂಘಿಸಿದವರಿಗೆ ನೋಟಿಸ್
ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯದಿರುವ ಕೈಗಾರಿಕಾ ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಮೂರು ದಿನಗಳ ಒಳಗಾಗಿ ಇಲಾಖೆಯ ನಿಯಮಾವಳಿ ಪ್ರಕಾರ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ. ನೋಟಿಸ್ ಜಾರಿ ಮಾಡಿ ಎಂದು ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚಿಸಿದರು. ಎಲ್ಲಾ ಕೈಗಾರಿಕಾ ಘಟಕಗಳಿಗೆ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ. ಕಾನೂನು ಉಲ್ಲಂಘಿಸಿದ ಕೈಗಾರಿಕಾ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕೆಐಎಡಿಬಿ, ಕೆಎಸ್ಎಸ್ಐಡಿಸಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ವಿದ್ಯುತ್ ಪರಿವೀಕ್ಷಣಾ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ಗಳ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ, ಕಂದಾಯ ಇಲಾಖೆ, ಪೊಲೀಸ್ ಮತ್ತು ಅಗ್ನಿ ಶಾಮಕ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.