ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ 45ಕ್ಕೂ ಹೆಚ್ಚು ವೈದ್ಯರಿಗೆ ನೋಟಿಸ್ ಜಾರಿ
ಹುಬ್ಬಳ್ಳಿ, ಸೆಪ್ಟೆಂಬರ್ 27: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಎಂದು ಕರೆಸಿಕೊಂಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ನಿತ್ಯ ನೂರಾರು ರೋಗಿಗಳು ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲ, ಗಂಭೀರವಾಗಿ ಗಾಯಗೊಂಡ ರೋಗಿಗಳನ್ನು ಸಹ ಬೇರೆ ಬೇರೆ ಆಸ್ಪತ್ರೆಗಳಿಂದ ಇಲ್ಲಿಗೆ ರವಾನಿಸುತ್ತಾರೆ.
ಆದರೆ ಇಲ್ಲಿ ಈಚೆಗೆ ರೋಗಿಗಳಿಗೆ ಚಿಕಿತ್ಸೆ ಸಿಗದೇ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಚಿಕಿತ್ಸೆಗೆ ವೈದ್ಯರೇ ಲಭ್ಯವಿರುತ್ತಿರಲಿಲ್ಲ. ವೈದ್ಯರು, ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಚಕ್ಕರ್ ಹಾಕಿ ಓಡಾಡುತ್ತಿದ್ದರು. ಇದೇ ಕಾರಣಕ್ಕೆ ಕಿಮ್ಸ್ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರು ದಿಟ್ಟ ಕ್ರಮ ಕೈಗೊಂಡಿದ್ದಾರೆ.
ಆಸ್ಪತ್ರೆಯ ಕಾರಿಡಾರ್ನಲ್ಲಿ ರೋಗಿಯನ್ನು ದರದರನೆ ಎಳೆದೊಯ್ದ ಸಿಬ್ಬಂದಿ
ತುರ್ತು ಚಿಕಿತ್ಸಾ ವಿಭಾಗ, ಓಪಿಡಿ, ಸೂಪರ್ ಸ್ಪೆಷಾಲಿಟಿ ಓಪಿಡಿ, ಮೆಡಿಷನ್ ವಿಭಾಗ, ಸರ್ಜರಿ ಮತ್ತು ಆನ್ಲೈನ್ ವಿಭಾಗ, ಬರ್ನಿಂಗ್ ವಿಭಾಗ, ಪ್ಲಾಸ್ಟಿಕ್ ಸರ್ಜರಿ ವಿಭಾಗ ಸೇರಿದಂತೆ ಬಹುತೇಕ ವಿಭಾಗಕ್ಕೆ ನೋಟಿಸ್ ನೀಡಿ 45 ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದ ಶಿಸ್ತು ಕ್ರಮ ಅನಿವಾರ್ಯ ಎಂದೂ ತಿಳಿಸಿದ್ದಾರೆ.
ಆಸ್ಪತ್ರೆಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತದೆ. ಆದರೆ ಬಡವರಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಮಾತ್ರ ರೋಗಿಗಳ ಕೈಗೆ ಸಿಗುತ್ತಿರಲಿಲ್ಲ. ಹೀಗಾಗಿ ವೈದ್ಯರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಡಾ. ರಾಮಲಿಂಗಪ್ಪ ಆಸ್ಪತ್ರೆಯ ತುಕ್ಕು ಹಿಡಿದ ವ್ಯವಸ್ಥೆಗೆ ಸರ್ಜರಿ ಮಾಡಿದ್ದು, ವೈದ್ಯರು ಬೆಚ್ಚಿ ಬಿದ್ದಿದ್ದಾರೆ.