ಉತ್ತರ ಕರ್ನಾಟಕಕ್ಕೆ ಇಂದು ಬಂದ್ ಬಿಸಿ, ಅವಳಿ ನಗರ ಸಂಪೂರ್ಣ ಸ್ತಬ್ಧ
ಹುಬ್ಬಳ್ಳಿ, ಜನವರಿ 8: ವಿಜಯಪುರದ ದಲಿತ ಅಪ್ರಾಪ್ತ ಯುವತಿ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಮಹಾರಾಷ್ಟ್ರದ ಭೀಮ ಕೊರೆಗಾಂವ್ ಗಲಭೆಗೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿವೆ.
ಈ ಹಿನ್ನಲೆಯಲ್ಲಿ ಅವಳಿ ನಗರಗಳು ಸಂಪೂರ್ಣ ಸ್ತಬ್ಧವಾಗಿವೆ. ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ದಲಿತ ಸಂಘಟನೆ ಕಾರ್ಯಕರ್ತರು ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಟಿಕೆಟ್ ಕೌಂಟರ್ ಗೆ ಕಲ್ಲು ತೂರಾಟ ನಡೆಸಲಾಗಿದ್ದು, ಗಾಜುಗಳು ಪುಡಿಯಾಗಿವೆ.
ಬೆಳಿಗ್ಗೆ 10 ಗಂಟೆಗೆ 10ಕ್ಕೂ ಹೆಚ್ಚು ದಲಿತ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.
ಚಿಕ್ಕೋಡಿ ಬಂದ್
ಇದೇ ವೇಳೆ ಇಂದು ಚಿಕ್ಕೋಡಿ ಬಂದ್ ಗೂ ಕರೆ ನೀಡಲಾಗಿದೆ. ಕೋರೆಗಾಂವ್ ಗಲಭೆ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದ್ದು, ಚಿಕ್ಕೋಡಿಯ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಚಿಕ್ಕೋಡಿ ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿ 10 ಗಂಟೆಗೆ ದಲಿತ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.
ಮುಂಡರಗಿ ಬಂದ್
ಇದೇ ವೇಳೆ ಗದಗ ಜಿಲ್ಲೆ ಮುಂಡರಗಿ ಪಟ್ಟಣ ಬಂದ್ ಗೂ ಕರೆ ನೀಡಲಾಗಿದೆ. ಇಲ್ಲಿನ ಸಿಂಗಟಲೂರು ಗ್ರಾಮದ ತೋಟವೊಂದರಲ್ಲಿ ಜನವರಿ 5ರಂದು ಶಾಂತವ್ವ ಎಂಬ ಮಹಿಳೆಯನ್ನು ಸಜೀವವಾಗಿ ಸುಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನಿರ್ಲಕ್ಷ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದೆ.