ಪ್ರವಾಹ ಪರಿಹಾರದ ವಿಚಾರದಲ್ಲಿ ರಾಜಕೀಯವಿಲ್ಲ: ಡಿಕೆಶಿ
ಹುಬ್ಬಳ್ಳಿ, ಆಗಸ್ಟ್ 12 : "ಪ್ರವಾಹ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಈ ವಿಚಾರದಲ್ಲಿ ನಾವು ಪಕ್ಷಭೇದ ಮರೆತು ಜನರ ನೋವಿಗೆ ಸ್ಪಂದಿಸಬೇಕಿದೆ. ಈ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು" ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಲು ಡಿ. ಕೆ. ಶಿವಕುಮಾರ್ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಈ ಪರಿಸ್ಥಿತಿಯಲ್ಲಿ ನಾವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ" ಎಂದರು.
"ಪಕ್ಷಬೇಧ ಮರೆತು ಜನರಿಗೆ ಸ್ಪಂದಿಸುವ ಉದ್ದೇಶದೊಂದಿಗೆ ನಾನು ಆಗಮಿಸಿದ್ದೇನೆ. ಮೊದಲು ಕುಂದಗೋಳಕ್ಕೆ ಭೇಟಿ ನೀಡುತ್ತೇನೆ. ನಂತರ ಜಿಲ್ಲಾ ನಾಯಕರು ಎಲ್ಲಿ ಹೇಳುತ್ತಾರೋ ಅಲ್ಲಿ ಪ್ರವಾಸ ಮಾಡುತ್ತೇನೆ. ನಂತರ ಸಂಜೆ ಬೆಳಗಾವಿಗೆ ತೆರಳಲಿದ್ದೇನೆ" ಎಂದು ಹೇಳಿದರು.
ಕೊಡಗು: ಬಂದ್ ಆಗಿರುವ, ಪರ್ಯಾಯ ರಸ್ತೆಗಳ ಪಟ್ಟಿ
"ಕೆಲವು ಕಡೆ ಪ್ರವಾಹದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಎಂದರೆ ಮತ್ತೆ ಕೆಲವು ಕಡೆ 40 ಸಾವಿರ ಕೋಟಿ ನಷ್ಟ ಆಗಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ರಾಜ್ಯ ಮತ್ತು ಕೇಂದ್ರಗಳಲ್ಲಿ ಅವರದೇ ಸರ್ಕಾರ ಇದೆ" ಎಂದು ತಿಳಿಸಿದರು.
ಪ್ರವಾಹದ ಬಳಿಕ, ನೆಲೆ ಕಾಣಬೇಕಾದ ಬದುಕಿಗಾಗಿ ಶುರುವಾಗಿದೆ ಹುಡುಕಾಟ
"ಸರ್ವಪಕ್ಷ ನಿಯೋಗ ಕರೆದರೆ ನಾವು ಕೂಡ ಬಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ. ಅವರದು ಸಂಪೂರ್ಣ ಬಹುಮತ ಇರುವ ಶಕ್ತಿಶಾಲಿ ಸರ್ಕಾರ. ಹೀಗಾಗಿ ಅವರು ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿ ನಾವು ಅದಕ್ಕೆ ಬೆಂಬಲ ನೀಡುತ್ತೇವೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ದೇವೇಗೌಡ
"ಸಂತ್ರಸ್ತರ ನೆರವಿನ ಹೆಸರು ಹೇಳಿಕೊಂಡು ಕೆಲವರು ಹಣ ದೇಣಿಗೆ ಪಡೆಯಲು ಡಬ್ಬ ಹಿಡಿದು ರಸ್ತೆಗೆ ಇಳಿದಿದ್ದಾರೆ. ನಿಜವಾಗಿಯೂ ಸಂತ್ರಸ್ತರಿಗೆ ಸಹಾಯ ಮಾಡಲು ಇಚ್ಛಿಸುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನೋಂದಣಿ ಮಾಡಿ, ತಾಲೂಕು ಕಚೇರಿಯಲ್ಲಿ ಮಾಹಿತಿ ನೀಡಿ ಹಣ ಸಂಗ್ರಹಿಸುವಂತಾಗಬೇಕು" ಎಂದು ಕಾಳಜಿ ವ್ಯಕ್ತಪಡಿಸಿದರು.