ರೈತರ ಸಾಲ ಕುರಿತ ಹೇಳಿಕೆ ಬಗ್ಗೆ ನಿಜಗುಣಾನಂದ ಸ್ವಾಮೀಜಿ ಸ್ಪಷ್ಟನೆ
ಹುಬ್ಬಳ್ಳಿ, ಜೂನ್ 26: ರೈತರ ಸಾಲಮನ್ನಾಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದ್ದ ನಿಜಗುಣಾನಂದ ಸ್ವಾಮೀಜಿ ಅವರು ಈ ಬಗ್ಗೆ ಇಂದು ಸ್ಪಷ್ಟಣೆ ನೀಡಿದ್ದು ತಾವು ರೈತರ ಸಾಲಮನ್ನಾ ಯೋಜನೆಯನ್ನು ಸ್ವಾಗತಿಸುವದಾಗಿ ಹೇಳಿದ್ದಾರೆ.
ಇಸ್ಪೀಟ್ ಆಡುವುದರಿಂದ ಸಾಲ ಆಗಿರುತ್ತದೆ ಎಂದು ನಿಜಗುಣಾನಂದ ಸ್ವಾಮಿಗಳು ಹೇಳಿದ್ದ ವಿಡಿಯೋ ವೈರಲ್ ಆಗಿ ಸ್ವಾಮೀಜಿಗಳು ರೈತರ ವಿರೋಧವಾಗಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಅವರ ಇಂದು ಸ್ಪಷ್ಟೀಕರಣ ನೀಡಿದರು.
ಚಟದಿಂದ ಸಾಲಮಾಡಿಕೊಂಡ ರೈತರು: ಸ್ವಾಮೀಜಿ ವಿವಾದಾತ್ಮಕ ಹೇಳಿಕೆ!
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸ್ವಾಮೀಜಿಗಳು, ಸರಳ ಜೀವನದಿಂದ ಮುಕ್ತಿ ಸುಲಭ ಎಂದು ಹೇಳುತ್ತಾ, 'ದೇವರ ಬಳಿ ಸಾಲದಿಂದ ಪಾರು ಮಾಡು ಎಂದು ಕೇಳಿದರೆ ಆತ ಸಾಲ ಯಾಕೆ ಮಾಡಿದೆ ಎಂದು ಕೇಳುತ್ತಾನೆ. ಇಸ್ಪೀಟ್ ಆಡಿದ್ದರಿಂದ ಬಂತು, ಮತ್ತೊಂದರದಿಂದ ಬಂತು ಎಂದು ಹೇಳಿದರೆ ಆ ಸಾಲದಿಂದ ಆತ ಪಾರು ಮಾಡುತ್ತಾನೆಯೇ' ಎಂದು ಲೋಕಾಭಿರಾಮವಾಗಿ ಹೇಳಿದ್ದರು.
ಸ್ವಾಮೀಜಿಗಳ ಮಾತನ್ನು ರೈತರ ಸಾಲಮನ್ನಾಕ್ಕೆ ಸಂಬಂಧ ಕಲ್ಪಿಸಿ ಸ್ವಾಮೀಜಿಗಳು ಸಾಲಮನ್ನಾದ ವಿರುದ್ಧ ಇದ್ದಾರೆ. ರೈತರು ಇಸ್ಪೀಟ್ ಆಡಿ ಸಾಲ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.
ಇಂದು ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ ಅವರು, 'ಎಲ್ಲಿಯೂ ನಾನು ಸಾಲಮನ್ನಾ ತಪ್ಪು ಎಂದಾಗಲಿ, ರೈತರು ದುಷ್ಚಟಗಳಿಗೆ ಸಾಲ ಮಾಡಿದ್ದಾರೆ' ಎಂದು ಹೇಳಿಯೇ ಇಲ್ಲ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.
ಡಿಸೆಂಬರ್ 31ರ ಬದಲಿಗೆ ಮಾರ್ಚ್ 31ರ ಒಳಗೆ ಮಾಡಿದ್ದ ಸಾಲಮನ್ನಾ?
ನಾನು ರೈತ ಸ್ವಾಮೀಜಿ ಅಲ್ಲ, ನಾನು ಸಾಮಾಜಿಕ ಜವಾಬ್ದಾರಿ ಇರುವ ಸ್ವಾಮೀಜಿ, ಸರ್ಕಾರದ ರೈತ ಸಾಲಮನ್ನಾ ಯೋಜನೆಗೆ ನನ್ನ ಸಂಪೂರ್ಣ ಸಹಮತ ಇದೆ, ಈ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ, ನನ್ನ ಮಾತಿನಿಂದ ರೈತರಿಗೆ ಬೇಸರವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ' ಎಂದಿದ್ದಾರೆ.