ಸಿಎಂ ಆಡಿಯೋ ಪ್ರಕರಣ; ಸಭಾ ಕೊಠಡಿಯಲ್ಲಿ ಸಿಸಿ ಟಿವಿಯೂ ಇರಲಿಲ್ಲ
ಹುಬ್ಬಳ್ಳಿ, ನವೆಂಬರ್ 6: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣಕ್ಕೆ ಹೊಸ ಅಂಶವೊಂದು ಸೇರ್ಪಡೆಯಾಗಿದೆ.
ಅಕ್ಟೋಬರ್ 26ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿರುವ ಆಡಿಯೋ ಸಾಕಷ್ಟು ಸುದ್ದಿ ಮಾಡಿತು. ಸದ್ಯಕ್ಕೆ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತನಿಖೆಯನ್ನೂ ನಡೆಸಲಾಗುತ್ತಿದೆ. ಆದರೆ, ಈಗ ಮತ್ತೊಂದು ಸತ್ಯ ಬಯಲಾಗಿದೆ.
ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಬಂದ್
ಅಂದು ನಗರದ ಡೆನಿಸನ್ ಹೊಟೇಲ್ ನಲ್ಲಿ ನಡೆದ ಸಭೆಯ ಹಾಲ್ ನಲ್ಲಿದ್ದ, ಸಿಸಿ ಟಿವಿ ಕ್ಯಾಮರಾ ಬಂದ್ ಮಾಡಲಾಗಿತ್ತು ಎಂಬ ವಿಷಯ ತಿಳಿದುಬಂದಿದೆ. ಹೋಟೆಲ್ ಹೊರಗೆ ಇರುವ ಎಲ್ಲಾ ಸಿಸಿ ಟಿವಿ ಕ್ಯಾಮರಾ ಆನ್ ಆಗಿದ್ದರೆ, ಸಭೆ ನಡೆಯುವ ಹಾಲ್ ನಲ್ಲಿರುವ ಕ್ಯಾಮರಾ ಮಾತ್ರ ಬಂದ್ ಮಾಡಲಾಗಿತ್ತು. ಬಂದ್ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಆದೇಶ ಮಾಡಿದ್ದರು, ಅವರ ಮಾತಿನಂತೆ ಸಭೆ ನಡೆಯುವ ಸ್ಥಳದಲ್ಲಿ ಕ್ಯಾಮರಾ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಿಎಸ್ವೈ ಆಡಿಯೋ: ಆಂತರಿಕ ತನಿಖಾ ಸಮಿತಿ ರಚನೆಯಲ್ಲಿ ವಿಳಂಬ ಏಕೆ?
ಗೌಪ್ಯ ವಿಷಯಗಳ ಚರ್ಚೆ ಕಾರಣ ಬಂದ್
ಸಭೆಯಲ್ಲಿ ಪಕ್ಷದ ಹಾಗೂ ಗೌಪ್ಯ ವಿಷಯಗಳ ಕುರಿತು ಚರ್ಚೆ ನಡೆಯುವ ಉದ್ದೇಶದಿಂದ ಕ್ಯಾಮರಾ ಬಂದ್ ಮಾಡಲಾಗಿತ್ತು ಎನ್ನುವುದು ಬಿಜೆಪಿ ಮುಖಂಡರ ಮಾತು. ಆ ಸಭೆಗೆ ಯಾರ್ಯಾರು ಹಾಜರಾಗಬೇಕು ಎನ್ನುವುದನ್ನು ಮೊದಲೇ ನಿರ್ಧಾರ ಮಾಡಲಾಗಿತ್ತು. ಅದರನ್ವಯ ಸಭೆಗೆ ಆ ನಾಯಕರನ್ನು ಒಳಗೆ ಬಿಡಲಾಗಿತ್ತು. ಸಭೆಗೆ ಹಾಜರಾದರು ತಮ್ಮ ಮೊಬೈಲ್ ಸಮೇತ ಸಭೆಗೆ ಹಾಜರಾಗಿದ್ದರು. ಆದರೆ ಆ ರಹಸ್ಯ ವಿಡಿಯೋ ಮಾಡಿರುವದು ಯಾರು ಎನ್ನುವುದು ಈವರೆಗೆ ಪತ್ತೆಯಾಗಿಲ್ಲ. ಅದನ್ನು ಪತ್ತೆ ಮಾಡಲು ಸಿಸಿ ಟಿ.ವಿ ಕೂಡ ಕೆಲಸ ಮಾಡುತ್ತಿರಲಿಲ್ಲ.
ಕೇಳಿಬಂದಿದ್ದ ಆರೋಪ ಪ್ರತ್ಯಾರೋಪಗಳು
"ಭಾರತೀಯ ಜನತಾ ಪಕ್ಷ, ಒಂದು ಸರಕಾರವನ್ನು ಉರುಳಿಸಲು ಸಂವಿಧಾನ ಬಾಹಿರವಾದ ಕೆಲಸವನ್ನು ಮಾಡಿದೆ. ಅಮಿತ್ ಶಾ ಅವರೇ ನೇರ ಇದಕ್ಕೆ ಜವಾಬ್ದಾರಿ ಎನ್ನುವ ಮಾತನ್ನು ಯಡಿಯೂರಪ್ಪನವರೇ ಹೇಳಿದ್ದಾರೆ. ಇದಕ್ಕೆ ಪ್ರೂಫ್ ಅನ್ನು ಬಿಜೆಪಿಯವರೇ ಕೊಟ್ಟಿದ್ದಾರೆ" ಎಂದು ದಿನೇಶ್ ಗುಂಡೂರಾವ್ ಹೇಳಿದ್ದರು. ಬಿಜೆಪಿ ಒಳಗೆ ಯಡಿಯೂರಪ್ಪ ಅವರಿಗೆ ಬಹಳ ವೈರಿಗಳಿದ್ದಾರೆ. ಅವರಲ್ಲಿಯೇ ಒಬ್ಬರು ಅವರ ಮಾತುಗಳನ್ನು ಧ್ವನಿ ಮುದ್ರಿಸಿ ಬಹಿರಂಗಪಡಿಸಿದ್ದಾರೆ. ಈ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಮೊದಲು ಒಪ್ಪಿಕೊಂಡಿದ್ದರು. ಆದರೆ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ಬಳಿಕ ವರಸೆ ಬದಲಿಸಿದ್ದಾರೆ ಎಂದು ಹರಿಹಾಯ್ದಿದ್ದರು. ಆಡಿಯೋ ಬಹಿರಂಗಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಜೆಪಿ ಆರೋಪಿಸಿತ್ತು. ಜತೆಗೆ ಅನರ್ಹ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಘಟನೆಗಳಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ. ಅವರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ. ಹಾಗೆಯೇ ಆಡಿಯೋದಲ್ಲಿರುವುದು ತಮ್ಮ ಹೇಳಿಕೆಯಲ್ಲ. ಅದನ್ನು ಕಾಂಗ್ರೆಸ್ಸಿಗರು ತಿರುಚಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.
ವಿಧಾನಸೌಧಕ್ಕೆ ಹೊರಟ ಯಡಿಯೂರಪ್ಪ ಹತ್ತು ನಿಮಿಷ ಕಾರು ನಿಲ್ಲಿಸಿದ್ದೇಕೆ?
ಆಂತರಿಕ ತನಿಖಾ ಸಮಿತಿಯಲ್ಲಿ ವಿಳಂಬ
ಸಿಎಂ ಆಪರೇಷನ್ ಕಮಲ ಆಡಿಯೋ ಪ್ರಕರಣದ ಕುರಿತು ಆಂತರಿಕ ತನಿಖಾ ಸಮಿತಿ ರಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ತನಿಖಾ ಸಮಿತಿ ರಚನೆಯಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ನಳಿನ್ ಕುಮಾರ್ ದೆಹಲಿ ಪ್ರವಾಸದಲ್ಲಿದ್ದು ಅಲ್ಲಿಂದ ಬಂದ ಬಳಿಕ ಸಮಿತಿ ರಚನೆಯಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.