ಮೋದಿ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ: ಹೊರಟ್ಟಿ
ಹುಬ್ಬಳ್ಳಿ, ಡಿಸೆಂಬರ್ 22: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮುನ್ನ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು, ಸಾಧಕ ಬಾಧಕಗಳ ಪರಿಶೀಲನೆ ನಡೆಸದೆ ದಿಢೀರ್ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಹೊರಟ್ಟಿಯವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದೆ. ದೇಶದ ಪ್ರಧಾನಿಯಾದವರಿಗೆ ಹಾಗೂ ಗೃಹ ಸಚಿವರಿಗೆ ಪೌರತ್ವ ಕಾಯ್ದೆಯ ಕುರಿತು ಜಾಗೃತಿ ವಹಿಸಬೇಕಿತ್ತು, ಒಂದು ಸಮುದಾಯವನ್ನು ಬಿಟ್ಟು ಕಾಯಿದೆ ರೂಪಿಸಿರುವುದು ಬೇರೆ ಅರ್ಥ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಲ್ಲಿ ಪೌರತ್ವದ ಪರವಾಗಿ ಮೆರವಣಿಗೆ
ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುವ ವೇಳೆ ಗೋಲಿಬಾರ್ ನಡೆಸಿರುವುದು ದುರ್ದೈವದ ಸಂಗತಿ, ಪೊಲೀಸರು ಆತ್ಮ ರಕ್ಷಣೆಗೆ ಮಾಡಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.
2008 ರಲ್ಲಿ ಇದೇ ಬಿಜೆಪಿ ಸರ್ಕಾರವಿದ್ದಾಗ ಗೊಬ್ಬರಕ್ಕಾಗಿ ಪ್ರತಿಭಟನೆ ಸಂದರ್ಭದಲ್ಲಿಯೂ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು, ಇದರಿಂದ ಜನ ಸರ್ಕಾರದ ಮೇಲಿರುವ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ
ಈ ಸಂದರ್ಭದಲ್ಲಿ ಯಾವುದೇ ಸರ್ಕಾರವಿದ್ದಿದ್ದರೂ ಇದೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಪೌರತ್ವ ತಿದ್ದುಪಡಿ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪಕ್ಷ ರಾಜಕಾರಣದಿಂದ ಯಾವುದೇ ದೇಶ ಮುಂದುವರೆಯಲು ಸಾಧ್ಯವಿಲ್ಲ, ಈಗಿನ ಯಾವುದೇ ಪಕ್ಷದಲ್ಲಿ ಮೌಲ್ಯಗಳು ಉಳಿದಿಲ್ಲ ಎಂದರು.