ವೀರಯೋಧ ಹನುಮಂತಪ್ಪ ಪತ್ನಿಗೆ ಇನ್ನೂ ಸಿಕ್ಕಿಲ್ಲ ಉದ್ಯೋಗ
ಹನುಮಂತಪ್ಪ ಕುಟುಂಬದಲ್ಲಿ ತಾಯಿ ಶೇಕವ್ವ, ಯೋಧನ ಪತ್ನಿ ಮಹಾದೇವಿ ಮತ್ತು ಮೂರು ವರ್ಷದ ಕೂಸು ನೇತ್ರಾ ಇದ್ದಾರೆ. ಸರಕಾರ ಮಹಾದೇವಿಯವರಿಗೆ ಸರ್ಕಾರಿ ನೌಕರಿ ನೀಡುತ್ತೇವೆಂದು ಹೇಳಿ ಮಾತು ತಪ್ಪಿದೆ ವರ್ಷ ಉರುಳುತ್ತಿದೆ ಅವರು ಏನು ಮಾಡಬೇಕು?
ಹುಬ್ಬಳ್ಳಿ ಮಹಾನಗರದಿಂದ 17 ಕೀ.ಮೀ ದೂರವಿರುವ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮವು ಕಳೆದ ವರ್ಷ ಫೆ.11 ರಂದು ಇಡೀ ವಿಶ್ವದ ಗಮನ ಸೆಳೆದಿತ್ತು. ಕಾರಣ ಸಿಯಾಚಿನ್ ನಲ್ಲಿ ಹಿಮಪಾತದ 25 ಅಡಿ ಆಳದಲ್ಲಿ ಸಿಲುಕಿ ವೀರಮರಣವನ್ನಪ್ಪಿದ ಹನುಮಂತಪ್ಪ ಕೊಪ್ಪದ ಮಣ್ಣಲ್ಲಿ ಮಣ್ಣಾಗಿ ಒಂದು ಸಂವತ್ಸರ.
ಹಿಮದಡಿ ಜೀವ ಹಿಡಿದುಕೊಂಡು ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಲಾನ್ಸ್ ನಾಯಕ ಹನುಮಂತಪ್ಪ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು. ಜೀವನದಲ್ಲಿನ ಎಲ್ಲ ಸಂಕಷ್ಟಗಳಿಗೆ ಎದೆಯುಬ್ಬಿಸಿ ಸವಾಲೆಸೆಯುತ್ತಿದ್ದ ಹನುಮಂತಪ್ಪ ತೀರಾ ಮೃದು ಸ್ವಭಾವದವರಾಗಿದ್ದರು ಎನ್ನುತ್ತಾರೆ ಗ್ರಾಮಸ್ಥರು.
ಹನುಮಂತಪ್ಪ ಕುಟುಂಬದಲ್ಲಿ ತಾಯಿ ಶೇಕವ್ವ, ಯೋಧನ ಪತ್ನಿ ಮಹಾದೇವಿ ಮತ್ತು ಮೂರು ವರ್ಷದ ಕೂಸು ನೇತ್ರಾ ಇದ್ದಾರೆ. ಸಂಸಾರವನ್ನು ಮಹಾದೇವಿಯವರೇ ಮುನ್ನೆಡೆಸಬೇಕು. ಒಂದು ವರ್ಷ ಕಳೆದರೂ ಪತ್ನಿ ಮಹಾದೇವಿಗೆ ಸರಕಾರಿ ನೌಕರಿಯನ್ನು ನೀಡುತ್ತೇನೆ ಎಂದು ರಾಜ್ಯ ಸರಕಾರ ನೀಡಿದ್ದ ಮಾತನ್ನು ತಪ್ಪಿದೆ.[ಹನುಮಂತಪ್ಪನ ಸಾವಿಗೆ ವರ್ಷವಾದರೂ ಪತ್ನಿಗೆ ಕೆಲಸವಿಲ್ಲ!]
ಪರಿಸ್ಥಿತಿ ಹೀಗಿರುವಾಗ ವರ್ಷ ಉರುಳುತ್ತಿದೆ ಮುಂದೇನು ಮಾಡಬೇಕು ಎನ್ನುವ ಯೋಚನೆ ಅವರದಾಗಿದೆ. ಜೀವನದ ಭದ್ರತೆ, ಮಗುವಿನ ಪಾಲನೆ, ವೃದ್ಧರ ಆರೋಗ್ಯ ನೋಡುವವರಾರು ?
ಸರಕಾರ ನೀಡಿದ್ದೇನು?
ಕೊಪ್ಪದ ವೀರ ಮರಣ ಹೊಂದಿದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೊಪ್ಪದ ಕುಟುಂಬವದರಿಗೆ 25 ಲಕ್ಷ ರೂ.ಗಳ ಚೆಕ್ ನೀಡಿದ್ದರು. ನಂತರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಹಾಯ ಮಾಡಿದ್ದವು. ಈಗ 6 ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಹುಬ್ಬಳ್ಳಿಯಲ್ಲಿ ಒಂದು ನಿವೇಶನವನ್ನು ನೀಡಿದೆ. ಅನೇಕ ಮುಖಂಡರು ಸಾಂತ್ವನ ಹೇಳಿದ್ದರು.
ನೀಡಬೇಕಾಗಿರುವುದೇನು?
ಮಹಾದೇವಿಗೆ ನೀಡಬೇಕಾಗಿದ್ದ ಸರಕಾರಿ ನೌಕರಿ ಇನ್ನು ಸಿಕ್ಕಿಲ್ಲ. ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿ ಹನುಮಂತಪ್ಪ ಕುಟುಂಬದವರಿಗಾಗಿ 4 ಎಕರೆ ಜಮೀನು ನೀಡಲಾಗುವುದು ಶೀಘ್ರ ನೋಂದಣಿ ಮಾಡಿಸಿಕೊಡಲಾಗುವುದು ಎಂದು ಶಾಸಕ ಸಿ.ಎಸ್.ಶಿವಳ್ಳಿ ಭರವಸೆಯನ್ನು ಮುಂದುವರೆಸುತ್ತಿದ್ದಾರೆ.
ಯೋಧನ ಪತ್ನಿಯ ಜೀವನ
ಇನ್ನು ಇವರು ಸಂಘ- ಸಂಸ್ಥೆಗಳು, ಸಂಘಟನೆಗಳು, ಮರುಕದಿಂದ ನೀಡುವ ಜನರ ಹಣದಿಂದ ಜೀವನ ನಡೆಸುವಂತಾಗಿದೆ. ಮುಖ್ಯಮಂತ್ರಿಗಳು ನೀಡಿದ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ದೇಹದಲ್ಲಿ ಶಕ್ತಿಯಿದ್ದರೂ ದುಡಿಯಲು ಕೆಲಸವಿಲ್ಲ. ಕೃಷಿ ಮಾಡೋಣವೆಂದರೆ ಕೃಷಿ ಭೂಮಿಯೂ ಇಲ್ಲ.
ಮಗಳ ಮುಂದಿನ ಭವಿಷ್ಯವೇನು?
ಮಗಳಿಗೆ ಇನ್ನು ಮೂರು ವರುಷ ಆಕೆ ಬೆಳೆದು ದೊಡ್ಡವಳಾಗಲು ಬಹಳ ವರ್ಷಗಳು ಬೇಕು, ಹೆಣ್ಣುಮಕ್ಕಳಿಗೆ ಇಂದಿನ ಜೀವನದಲ್ಲಿ ಖರ್ಚು ಕಡಿಮೆ ತಗಲುತ್ತದೆಯೇ ಎಲ್ಲರಂತೆ ಸ್ವಾಭಿಮಾನದಿಂದ ಬದುಕ ಬೇಕಿದೆ. ಅದಕ್ಕೆ ಸರಕಾರ, ಸಂಘ ಸಂಸ್ಥೆಗಳ ಸಹಾಯ ಅನಿವಾರ್ಯವಾಗಿದೆ ಉದ್ಯೋಗವೊಂದಿದ್ದರೆ ಮಗಳನ್ನು ಸಾಕಲು ಸಹಾಯವಾಗುತ್ತದೆ ಎಂದು ಕಣ್ಣಿರಾಕುತ್ತಾರೆ ಮಹಾದೇವಿ.
ಕುಟುಂಬಕ್ಕೆ ಸರಕಾರಿ ಜಮೀನು
4 ಎಕರೆ ಸರಕಾರಿ ಭೂಮಿಯ ಹಕ್ಕು ಪತ್ರ ಮುಂದಿನ ವಾರದಲ್ಲಿ ಅವರ ಕುಟುಂಬಕ್ಕೆ ನೀಡಲಾಗುವುದು. ಇನ್ನು ಸಮಾಧಿ ಅಭಿವೃದ್ಧಿ ಮಾಡಲು ಗ್ರಾಮ ಪಂಚಾಯಿತಿ ಹತ್ತಿರವಿರುವ ಕೆರೆಯ ಬಳಿ ಕೆಲ ಸರಕಾರಿ ಮತ್ತು ಸರಕಾರೇತರ ಕಟ್ಟಡಗಳಿವೆ ಅವುಗಳ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ವಿಳವಾಗುತ್ತಿದೆ ಎನ್ನುತ್ತಾರೆ ಬೆಟದೂರ ಗ್ರಾಮದ ಪಿಡಿಓ ಹನುಮರಡ್ಡಿ ನಾಗಾವಿ.
ಕಂಚಿನ ಪುತ್ಥಳಿ ಅನಾವರಣ
ವೀರ ಯೋಧ ಹನುಮಂತಪ್ಪ ಕೊಪ್ಪದ ಅವೆರ ಕಂಚಿನ ಮೂರ್ತಿ ಇನ್ನೊಂದು ತಿಂಗಳಿನಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಗ್ರಾಮ ವಿಕಾಸ ಯೋಜನೆಯಡಿ ಕಂಚಿನ ಪುತ್ಥಳಿಯನ್ನು 9 ಲಕ್ಷ ರೂ. ವೆಚ್ಚದಲ್ಲಿ ಮಾಡಿಸಲಾಗುತ್ತಿದೆ. 5 ಅಡಿಯ ಕಂಚಿನ ಪುತ್ಥಳಿಯು ಕೊಲ್ಲಾಪುರದಲ್ಲಿ ತಯಾರಾಗಿದೆ. ಆದರೆ ಸಮಾಧಿ ಅಭಿವೃದ್ಧಿಗೆ ಮತ್ತು ಕಂಚಿನ ಪುತ್ಥಳಿ ಸ್ಥಾಪಿಸಲು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ವಿಳಂಬವಾಗಿದೆ ಎನ್ನುತ್ತಾರೆ ಪಿಡಿಓ ಹನುಮರಡ್ಡಿ ನಾಗಾವಿ.