ಸೋಮವಾರದಿಂದ ಹುಬ್ಬಳ್ಳಿಯಲ್ಲಿಯೂ ಲಾಕ್ಡೌನ್ ಸಡಿಲಿಕೆ
ಹುಬ್ಬಳ್ಳಿ, ಮೇ 9 : ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್ ಡೌನ್ ನಿಂದ ಹುಬ್ಬಳ್ಳಿ ಶಹರ ಹೊರತುಪಡಿಸಿ ಜಿಲ್ಲೆಯಾದ್ಯಂತ ಈಗಾಗಲೇ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಬರುವ ಸೋಮವಾರ ಮೇ.11 ರಿಂದ ಹುಬ್ಬಳ್ಳಿಯ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ವಾಣಿಜ್ಯ, ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗುವುದು ಎಂದು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
Recommended Video
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕೊರೊನಾ ನಿಯಂತ್ರಣ ಮತ್ತು ಲಾಕ್ ಡೌನ್ ಸಡಿಲಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಚಿವ ಜಗದೀಶ್ ಶೆಟ್ಟರ್ ಸುದ್ದಿಗೋಷ್ಟಿ ಬಹಿಷ್ಕರಿಸಿದ ಪತ್ರಕರ್ತರು
ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ ಪ್ರಕಾರ ಸ್ಥಾಪನೆಯಾಗಿರುವ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯ ವಾಣಿಜ್ಯ, ವಹಿವಾಟುಗಳು ಈಗಾಗಲೇ ಜಿಲ್ಲೆಯ ಧಾರವಾಡ, ಕಲಘಟಗಿ, ಅಳ್ನಾವರ, ಕುಂದಗೋಳ, ಅಣ್ಣಿಗೇರಿ ಹಾಗೂ ನವಲಗುಂದ ತಾಲ್ಲೂಕುಗಳಲ್ಲಿ ಪುನರಾರಂಭವಾಗಿವೆ.ಬರುವ ಸೋಮವಾರ ಮೇ 11 ರಿಂದ ಹುಬ್ಬಳ್ಳಿಯ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ ಉಳಿದ ಎಲ್ಲಾ ಕಡೆಗಳಲ್ಲೂ ಕಿರಾಣಿ ಅಂಗಡಿ, ಹೊಟೆಲ್ಗಳಲ್ಲಿ ಪಾರ್ಸೆಲ್ ಸೇರಿದಂತೆ ವಿವಿಧ ವ್ಯಾಪಾರ ಚಟುವಟಿಕೆಗಳ ಪ್ರಾರಂಭಕ್ಕೆ ವಾರದ ಎಲ್ಲಾ ದಿನಗಳಲ್ಲಿಯೂ ಅವಕಾಶ ಕಲ್ಪಿಸಿ ಸಮರ್ಪಕ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಲಾಕ್ ಡೌನ್ ಸಡಿಲಿಕೆಯ ಈ ಅವಕಾಶವನ್ನು ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು .ದೇಶದ ಹಿತಕ್ಕಾಗಿ ಪ್ರಧಾನಮಂತ್ರಿಗಳು 41 ದಿನಗಳ ಲಾಕ್ ಡೌನ್ ಜಾರಿಗೊಳಿಸಿದ್ದಾರೆ, ಕೊರೊನಾ ನಿಯಂತ್ರಣ ಜೊತೆಗೆ ದೇಶದ ಭವಿಷ್ಯ, ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಇರುವುದರಿಂದ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಲಾಕ್ಡೌನ್ ನಿಂದ ಕೆಲವು ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗುತ್ತಿದೆ.
ಈ ವಿನಾಯಿತಿಯನ್ನು ಜನತೆ ಮನಬಂದಂತೆ ಬಳಸಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಅನಗತ್ಯ ತಿರುಗಾಟಕ್ಕೆ ಸ್ವಯಂ ನಿಬರ್ಂಧ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸದೇ ಇದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸುವ ಕಾರ್ಯ ಚುರುಕುಗೊಳಿಸಬೇಕು. ಜನತೆ ಸಹಕರಿಸಿದರೆ ಕೊರೊನಾ ನಿಯಂತ್ರಣ ಸುಲಭ ಸಾಧ್ಯವಾಗುತ್ತದೆ ಎಂದರು.