ಕುಮಾರಣ್ಣನ ಹುಬ್ಬಳ್ಳಿ ಮನೆಯ ಅಂತರಂಗ-ಬಹಿರಂಗ
ಏಕದಂತ ಕೃಪಾ, ಮಾಯಕಾರ್ಸ್ ಕಾಲೋನಿ, ಬ್ಲಾಕ್ ನಂ.359,2, ಒಂದನೇ ಮುಖ್ಯರಸ್ತೆ, ಈಶ್ವರ ನಗರ, ಹುಬ್ಬಳ್ಳಿ-ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೊಸ ವಿಳಾಸ.
ಹುಬ್ಬಳ್ಳಿ, ನವೆಂಬರ್ 15: ಏಕದಂತ ಕೃಪಾ, ಮಾಯಕಾರ್ಸ್ ಕಾಲೋನಿ, ಬ್ಲಾಕ್ ನಂ.359,2, ಒಂದನೇ ಮುಖ್ಯರಸ್ತೆ, ಈಶ್ವರ ನಗರ, ಹುಬ್ಬಳ್ಳಿ-ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೊಸ ವಿಳಾಸ. ಅಂದಹಾಗೆ, ನವೆಂಬರ್ 18ರಂದು ಹುಬ್ಬಳ್ಳಿಯ ಬಾಡಿಗೆ ಮನೆ ಗೃಹಪ್ರವೇಶಕ್ಕೆ ಎಲ್ಲ ಸಿದ್ಧತೆ ಪೂರ್ಣವಾಗಿದೆ. ಇನ್ನೇನಿದ್ದರೂ ಕುಮಾರಸ್ವಾಮಿ ದಂತಿ ಗೋ ಪ್ರವೇಶ ಮಾಡಿಸುವುದಷ್ಟೇ ಬಾಕಿ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲಗೊಳ್ಳಬೇಕು ಎಂಬುದು ದೊಡ್ಡ ಗೌಡರು-ಕುಮಾರಸ್ವಾಮಿ ಇಬ್ಬರ ಅಭಿಲಾಷೆ. ಆ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ತಿಂಗಳ ಹತ್ತು ದಿನ ವಾಸ್ತವ್ಯ ಹೂಡುವುದಕ್ಕೆ ಎಲ್ಲವೂ ಅಂತಿಮಗೊಂಡಂತಾಗಿದೆ. ಈ ಹೊಸ ಮನೆಯ ಮಾಹಿತಿಗಳನ್ನು ಇಲ್ಲಿ ಕೊಡಲಾಗುತ್ತಿದೆ.[ನವೆಂಬರ್ 18ಕ್ಕೆ ಎಚ್ ಡಿಕೆ ಹುಬ್ಬಳ್ಳಿ ಮನೆ ಗೃಹಪ್ರವೇಶ]
ಈಶ್ವರನಗರದಲ್ಲಿ ಚಟುವಟಿಕೆಯಂತೂ ಶುರುವಾಗಿದೆ. ಈಗ ಜೆಡಿಎಸ್ ನಾಯಕರು ಹುಡುಕಿಟ್ಟಿರುವ ಮನೆಯ ಆಸುಪಾಸಿನಲ್ಲಿ ವಾಣಿಜ್ಯ ಚಟುವಟಿಕೆ, ಅಕ್ಕಪಕ್ಕದ ಮನೆಯವರ ಕುತೂಹಲಭರಿತ ಆತಂಕ ಎಲ್ಲವೂ ಕಾಣತೊಡಗಿದೆ. ಒಟ್ಟಿನಲ್ಲಿ ಒಂದು ಸಂಚಲನವಂತೂ ಅರಂಭವಾಗಿದೆ.
ಏಕದಂತ ಕೃಪಾ
ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯ ಭೈರಿದೇವರಕೊಪ್ಪದಿಂದ ಗಾಮನಗಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಮುಖ್ಯ ರಸ್ತೆಯಿಂದ ಸುಮಾರು 3 ಕಿಲೋ ಮೀಟರ್ ದೂರದ ಈಶ್ವರನಗರದಲ್ಲಿ ಕುಮಾರಸ್ವಾಮಿ ಅವರಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮತ್ತು ಜೆಡಿಎಸ್ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಸಂಬಂಧಿ ಸುರೇಶ ರಾಯರಡ್ಡಿ ಅವರ 'ಏಕದಂತ ಕೃಪಾ' ಗೊತ್ತು ಮಾಡಲಾಗಿದೆ.
ನವೀಕರಣ ಆಗ್ತಿದೆ
ಸದ್ಯಕ್ಕೆ ಇಡೀ ಮನೆ ನವೀಕರಣಗೊಳ್ಳುತ್ತಿದ್ದು, ಸುಣ್ಣ- ಬಣ್ಣ ಮತ್ತು ಹೊಸ ರೀತಿ ಒಳಾಂಗಣ ವಿನ್ಯಾಸ ಮಾಡಲಾಗುತ್ತಿದೆ. ನವೆಂಬರ್ 18ಕ್ಕಂತೂ ಯಾವುದೇ ಪರಿಸ್ಥಿತಿಯಲ್ಲೂ ಗೃಹ ಪ್ರವೇಶ ಅಗೇಆಗುತ್ತದೆ.
ಐದು ಬೆಡ್ ರೂಮ್
6 ಸಾವಿರ ಚದರಡಿ ವಿಸ್ತೀರ್ಣದ ಮನೆಯಲ್ಲಿ ಐದು ಬೆಡ್ ರೂಮ್ ಗಳಿವೆ. ಎರಡು ಮಹಡಿಯ ಈ ಮನೆಯಲ್ಲಿ ತುರ್ತು ಸಂದರ್ಭದ ವಿದ್ಯುತ್ ವ್ಯವಸ್ಥೆ, ಎರಡು ಅಕ್ವೇರಿಯಂ, ಹೋಂ ಥಿಯೇಟರ್, ಜಿಮ್, ಸೋಲಾರ್ ವ್ಯವಸ್ಥೆ, ಭದ್ರತಾ ದೃಷ್ಟಿಯಿಂದ 8 ಸಿಸಿ ಕ್ಯಾಮೆರಾ, ಮೂರು ನಾಯಿಗಳು ಸಾಕಲು ಸ್ಥಳಾವಕಾಶ, ಯುಪಿಎಸ್ ಸಿಸ್ಟಮ್ ಅಳವಡಿಸಲಾಗಿದೆ. ಜನರ ಭೇಟಿಗಾಗಿ ಮನೆಯ ಎದುರಿಗೆ ಕಚೇರಿಯೊಂದನ್ನು ಮಾಡಲಾಗಿದೆ. ಗನ್ ಮ್ಯಾನ್, ವಾಹನ ಚಾಲಕರು ಮತ್ತು ಆಪ್ತ ಸಹಾಯಕರ ವಾಸಕ್ಕಾಗಿ ವ್ಯವಸ್ಥೆ ಇದೆ.
ಎಲ್ಲ ಧರ್ಮದ ಮುಖಂಡರು
ಕ್ರೈಸ್ತ, ಮುಸ್ಲಿಂ, ಹಿಂದೂ ಧರ್ಮದ ಮಠಾಧೀಶರು, ಧಾರ್ಮಿಕ ಮುಖಂಡರು ಗೃಹ ಪ್ರವೇಶಕ್ಕೆ ಆಗಮಿಸಲಿದ್ದು, ಕುಮಾರಸ್ವಾಮಿ ಮತ್ತು ಅನಿತಾ ದಂಪತಿ ಹೋಮ- ಹವನದೊಂದಿಗೆ ಗೃಹಪ್ರವೇಶ ಮಾಡಲಿದ್ದಾರೆ.
ಹತ್ತು ದಿನ ವಾಸ್ತವ್ಯ
ಉತ್ತರ ಕರ್ನಾಟಕದಲ್ಲಿಯೇ ವಾಸ ಮಾಡಿ, ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕೆಂದು ಹಂಬಲಿಸುತ್ತಿದ್ದ ಕುಮಾರಸ್ವಾಮಿ ಈ ಮನೆಯಲ್ಲಿ ತಿಂಗಳಲ್ಲಿ ಕನಿಷ್ಠ 10 ದಿನ ವಾಸ್ತವ್ಯ ಮಾಡಲಿದ್ದಾರೆ. ಬೆಳಗಾವಿ, ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಹಾಗೂ ಹೈದ್ರಾಬಾದ್- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಎಪಿಎಂಸಿ ಹತ್ತಿರ
ಮನೆಗೆ ಹತ್ತಿರದಲ್ಲಿಯೇ ಎಪಿಎಂಸಿ ಇರುವುದರಿಂದ ರೈತರು ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಅನುಕೂಲವಾಗುತ್ತದೆ. ಗೃಹ ಪ್ರವೇಶದ ನಂತರ ಸ್ಥಳೀಯ ಎಪಿಎಂಸಿಗೆ ಕುಮಾರಸ್ವಾಮಿ ಭೇಟಿ ನೀಡುತ್ತಾರೆ.
ಕುಮಾರಸ್ವಾಮಿ ಲೇಔಟ್
ಸದ್ಯಕ್ಕೆ ಮಾಯಕಾರ್ಸ್ ಕಾಲೋನಿ ಎಂದೇ ಹೆಸರಾಗಿರುವ ಈ ಬಡಾವಣೆಯು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಲೇಔಟ್ ಎಂದು ಹೆಸರು ಪಡೆದುಕೊಳ್ಳಬಹುದು. ಈ ಮನೆಯಿಂದ ಹಲವಾರು ಜನರಿಗೆ ಉದ್ಯೋಗ, ವ್ಯವಹಾರ- ವಹಿವಾಟು ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆಯಂತೂ ಇದೆ.
ದುಡಿಮೆ ದಾರಿ
ಈ ಮನೆಯ ಹತ್ತಿರ ಒಂದೂ ಅಂಗಡಿಯಿಲ್ಲ. ಏನೇ ಬೇಕೆಂದರೂ ಕಿಲೋಮೀಟರ್ ಗಟ್ಟಲೆ ನಡೆಯಬೇಕು. ಹೀಗಾಗಿ ವ್ಯಾಪಾರಸ್ಥರು ಅಂಗಡಿ ಹಾಕಬಹುದು. ಮುಖ್ಯರಸ್ತೆಯಿಂದ 3 ಕಿಲೋಮೀಟರ್ ದೂರವಿರುವುದರಿಂದ ಇವರನ್ನು ಭೇಟಿಯಾಗಲು ಬರುವವರು ಸಹಜವಾಗಿ ಆಟೋಗಳನ್ನೇ ಅವಲಂಬಿಸಬೇಕಾಗುತ್ತದೆ. ಹೀಗಾಗಿ ಆಟೋ ಚಾಲಕರಿಗೂ ದುಡಿಮೆಗೆ ದಾರಿಯಾಗಬಹುದು.