ಈ ವರ್ಷ ಯಡಿಯೂರಪ್ಪ ಸರ್ಕಾರ ಏನಾಗುತ್ತೆ? ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
Recommended Video
ಹುಬ್ಬಳ್ಳಿ, ಫೆಬ್ರವರಿ 05: "ರಾಜ್ಯದ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತದೆ. ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಿರಲಿದೆ" ಎಂದು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ.
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯಾಗುತ್ತಿರುವ ಈ ಹೊತ್ತಿನಲ್ಲಿ ಕೋಡಿಶ್ರೀಗಳ ಈ ಭವಿಷ್ಯ ಸರ್ಕಾರಕ್ಕೆ ಬಿಗ್ ರಿಲೀಫ್ ನೀಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸುಭದ್ರವಾಗಿರಲಿದೆ. ಯಶಸ್ವಿಯಾಗಿ ಸರ್ಕಾರ ರಚಿಸಿ ತನ್ನ ಅವಧಿಯನ್ನು ಬಿಜೆಪಿ ಪೂರೈಸಲಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಎಲ್ಲ ಗೊಂದಲಗಳಿಗೂ ತೆರೆಬೀಳಲಿದೆ ಎಂದೂ ತಿಳಿಸಿದ್ದಾರೆ.
"ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ"
"ರಾಜ್ಯ ರಾಜಕೀಯದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ಸದ್ಯಕ್ಕೆ ಯಾವುದೇ ತೊಡಕು ಕಂಡುಬಂದಿಲ್ಲ. ಸಚಿವ ಸಂಪುಟ ವಿಸ್ತರಣೆಗೆ, ಸಚಿವ ಸ್ಥಾನಕ್ಕೆ ಎಲ್ಲೆಡೆಯಿಂದ ಒತ್ತಾಯ, ಗೊಂದಲ ಉಂಟಾಗುತ್ತಿದ್ದರೂ ಸರ್ಕಾರಕ್ಕೆ ಇದರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪನವರು ಯಶಸ್ವಿಯಾಗಿ ತಮ್ಮ ಅಧಿಕಾರದ ಅವಧಿಯನ್ನು ಪೂರೈಸುತ್ತಾರೆ ಎಂದೂ ನುಡಿದಿದ್ದಾರೆ.
ಯುಗಾದಿವರೆಗೆ ಸುಸೂತ್ರ ಸರ್ಕಾರ
ಈ ಮಧ್ಯೆ ರಾಜ್ಯ ಸರ್ಕಾರ ಯುಗಾದಿವರೆಗೆ ಸುಸೂತ್ರವಾಗಿ ಸಾಗುತ್ತದೆ. ಯುಗಾದಿ ನಂತರ ಮತ್ತೆ ತಿಳಿಸುವೆ ಎಂದೂ ಗೊಂದಲವಾಗಿ ನುಡಿದಿದ್ದಾರೆ ಕೋಡಿಶ್ರೀಗಳು. ಆದರೆ ಯಡಿಯೂರಪ್ಪ ಸರ್ಕಾರ ತನ್ನ ಅವಧಿ ಪೂರೈಸುತ್ತದೆ ಎಂದು ನುಡಿದಿರುವುದರಿಂದ ಸದ್ಯಕ್ಕೆ ಬಿಜೆಪಿ ಸರ್ಕಾರ ರಚಿಸಿ ತನ್ನ ಕಾಲಾವಧಿಯನ್ನು ಪೂರೈಸುತ್ತದೆ ಎಂಬುದೂ ಖಚಿತವಾದಂತಾಗಿದೆ.
ಈ ವರ್ಷ ಇನ್ನೂ ಹೆಚ್ಚಿನ ಮಳೆ-ಹೊಸ ರೋಗಗಳ ಭೀತಿ
ಇದೇ ವೇಳೆ, ಈ ವರ್ಷ ಸಂಭವಿಸುವ ಪ್ರಕೃತಿ ಅವಘಡಗಳ ಕುರಿತೂ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಇನ್ನೂ ಹೆಚ್ಚಿನ ಮಳೆಯಾಗಲಿದೆ ಎಂದಿದ್ದಾರೆ. ಕಳೆದ ಬಾರಿಯೂ ಜಲಕಂಟಕ ಎದುರಾಗುತ್ತದೆ ಎಂದು ಅವರು ನುಡಿದಿದ್ದು, ಕರ್ನಾಟಕದಲ್ಲಿ ಪ್ರವಾಹ ಸಾಕಷ್ಟು ನಷ್ಟವನ್ನು ತಂದೊಡ್ಡಿತ್ತು. ಈ ವರ್ಷವೂ ಅಂಥ ಘಟನೆಗಳು ಸಂಭವಿಸಬಹುದು ಎಂದಿದ್ದಾರೆ. ಅಷ್ಟೇ ಅಲ್ಲ, ಅಗ್ನಿ ಅನಾಹುತಗಳೂ ಸಂಭವಿಸುವ ಎಚ್ಚರಿಕೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣ ಸಾಧ್ಯ ಎಂದ ಶ್ರೀಗಳು
ಜಲಕಂಟಕ, ಅಗ್ನಿ ದುರಂತದೊಂದಿಗೆ ಹೊಸ ಹೊಸ ರೋಗ, ಕಾಯಿಲೆಗಳು ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ದೇಶ ಆಳುವವನ ಕರ್ತವ್ಯ. ಬಹುಜನರ ಅಪೇಕ್ಷೆಯಾಗಿರುವ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಸಿಎಎ ಕುರಿತೂ ಪ್ರತಿಕ್ರಿಯಿಸಿದ ಅವರು, ಸಿಎಎ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.