ಕಾಂಗ್ರೆಸ್ , ಬಿಜೆಪಿ ಅಭ್ಯರ್ಥಿಗಳನ್ನು ಒದೆಯಿರಿ ಎಂದ ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ, ಏಪ್ರಿಲ್ 22 : ವೋಟ್ ಕೇಳಲು ಬರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಒದೆಯಿರಿ ಎಂದು ಶಿವಸೇನೆ ಕರ್ನಾಟಕ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಶನಿವಾರ ಶಿವಸೇನೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿ, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ನ ಡಿ.ಕೆ. ಶಿವಕುಮಾರ್ ಆಸ್ತಿ ಒಂದೇ ವರ್ಷದಲ್ಲಿ 300 ಕೋಟಿ ಜಾಸ್ತಿಯಾಗಿದೆ. ಕಾಂಗ್ರೆಸ್, ಬಿಜೆಪಿಯವರ ಆಸ್ತಿ ಘೋಷಣೆ ನೋಡಿದರೆ ಗೊತ್ತಾಗುತ್ತೆ ಇವರ ಆಸ್ತಿಗಳು ಹೇಗೆ ಬೆಳೆಯುತ್ತಿವೆ ಎಂದು ದೂರಿದರು.
ರಾಮನವಮಿ ತಡೆ ನೀಡುವ ಗೂಂಡಾ ಸರ್ಕಾರ ರಾಜ್ಯದಲ್ಲಿದೆ : ಮುತಾಲಿಕ್
ನೇಕಾರರು, ರೈತರು, ಕೂಲಿಕಾರರು ಎಲ್ಲಿದ್ದಾರೋ ಅಲ್ಲಿಯೇ ಇದ್ದಾರೆ. ಈ ರಾಜಕೀಯ ನೀಚರು ಮಾತ್ರ ಬಂಗಲೆ ಮೇಲೆ ಬಂಗಲೆ ಕಟ್ತಾ ಇದ್ದಾರೆ. ದತ್ತ ಪೀಠಕ್ಕಾಗಿ ನಾವು ಏಟು ತಿಂದು ರಕ್ತ ಹರಿಸಿದ್ದೆವು. ಹೋರಾಟ ಇಲ್ಲಿವರೆಗೆ ತಂದವರೇ ನಾವು. ಆದ್ರೆ ಅದರಿಂದ ಕರಾವಳಿ ಪ್ರದೇಶ ಇಂದು ಬಿಜೆಪಿ ಪರವಾಗಿದೆ. ಆದರೆ ಅದನ್ನು ಜೀವಂತವಾಗಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.
ಅವರು ಸಿ.ಟಿ. ರವಿ ಅಲ್ಲ, ಲೂಟಿ ರವಿ, ಕೋಟಿ ರವಿ. ಭ್ರಷ್ಟ ಮಾಲೀಕಯ್ಯ ಗುತ್ತೆದಾರರನ್ನು ಮತ್ತೇ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಇದು ಸರಿಯಲ್ಲ. ಇದು ಬಿಜೆಪಿಯ ವಿನಾಶ ಕಾಲ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಶಿವಸೇನೆ ಪ್ರಚಾರಕ್ಕೆ ಪ್ರವೀಣ್ಭಾಯ್ ತೊಗಾಡಿಯಾ ಬರಲಿದ್ದಾರೆ. ನರೇಂದ್ರ ಮೋದಿಯಿಂದಾಗಿ ಇಂದು ಪ್ರವೀಣ್ಭಾಯ್ ತೊಗಾಡಿಯಾ ಹೊರಗೆ ಬಂದಿದ್ದಾರೆ. ಹಿಂದೂತ್ವಕ್ಕಾಗಿ ಹೋರಾಟ ಮಾಡಿದ ಅವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಈಗ ಅವರು ಶಿವಸೇನೆ ಪರವಾಗಿ ನಿಲ್ಲಲ್ಲಿದ್ದಾರೆ. ಶಿವಸೇನೆ ಅಭ್ಯರ್ಥಿಗಳ ಪರವಾಗಿ ತೊಗಾಡಿಯಾ ಅವರು ರಾಜ್ಯದಲ್ಲಿ ಪ್ರವಾಸ ಮಾಡಿ, ಪ್ರಚಾರ ಮಾಡಲಿದ್ದು, ನಾವು ಈ ಸಾರಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ.