ರಾಜ್ಯದ ಪೊಲೀಸರಿಗೆ ವಿದೇಶದಲ್ಲಿ ತರಬೇತಿ ಕೊಡಿಸಲು ನಿರ್ಣಯ: ಬೊಮ್ಮಾಯಿ
ಹುಬ್ಬಳ್ಳಿ, ಸೆಪ್ಟೆಂಬರ್ 29: ವಿದೇಶದಲ್ಲಿ ಇರುವ ಅತ್ಯುತ್ತಮ ಗುಣಮಟ್ಟದ ಪೊಲೀಸ್ ತರಬೇತಿ ಶಾಲೆಗಳಲ್ಲಿ ರಾಜ್ಯದ ಪೊಲೀಸರಿಗೆ ತರಬೇತಿ ಕೊಡಿಸುವ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇನ್ನು ಪೊಲೀಸರ ವೇತನ ಪರಿಷ್ಕರಣೆಯ ಕುರಿತು ಸರ್ಕಾರ ಶೀಘ್ರವಾಗಿ ನಿರ್ಧಾರ ಪ್ರಕಟಿಸಲಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇರುವ ಪೊಲೀಸ್ ತಾತ್ಕಾಲಿಕ ತರಬೇತಿ ಶಾಲೆಯಲ್ಲಿ 6ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ ಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ, ಮಾತನಾಡಿ, ಎಲ್ಲ ರೀತಿಯ ಅರ್ಹತೆ ಮತ್ತು ಪ್ರತಿಭೆಗಳಿಂದಾಗಿ ನಿಮಗೆಲ್ಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ರಾಜ್ಯದ 14 ಪೊಲೀಸ್ ತರಬೇತಿಗಳಲ್ಲಿ ಸಾವಿರಾರು ಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದಿದ್ದಾರೆ.
ಔರಾದ್ಕರ್ ವರದಿಗೆ ಸರ್ಕಾರ ತಡೆ: ಪೊಲೀಸರ ಆಸೆಗೆ ತಣ್ಣೀರು
ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಂತರ ಸಾಮಾಜಿಕ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಆಧುನಿಕ ತಂತ್ರಜ್ಞಾನವನ್ನು ದುಷ್ಟ ಶಕ್ತಿಗಳು ಬಳಸಿಕೊಂಡು, ಸುಳ್ಳು ವದಂತಿ ಹರಡುತ್ತಿವೆ. ಎಲ್ಲ ಪೊಲೀಸರಿಗೆ ಸೈಬರ್ ಅಪರಾಧದ ನಿಯಂತ್ರಣ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿಧಿವಿಜ್ಞಾನ, ಸೈಬರ್ ಅಪರಾಧ ಪತ್ತೆಗೆ ಹೆಸರುವಾಸಿಯಾಗಿರುವ ತರಬೇತಿ ಶಾಲೆಗಳಿಗೆ ರಾಜ್ಯದ ಪೊಲೀಸರನ್ನು ಹಂತ ಹಂತವಾಗಿ ತರಬೇತಿ ನಿಯೋಜಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.