Breaking: ವಿಧಾನ ಪರಿಷತ್: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ 8ನೇ ಬಾರಿ ಜಯ
ಹುಬ್ಬಳ್ಳಿ, ಜೂನ್ 15: ಬುಧವಾರ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಗೆದ್ದು ಬೀಗಿದ್ದಾರೆ. ಇನ್ನೂ ನಾಲ್ಕು ಸಾವಿರ ಮತಗಳ ಎಣಿಕೆ ಬಾಕಿ ಉಳಿದಿದೆ. 7,500 ಕ್ಕೂ ಹೆಚ್ಚು ಮತಗಳ ಕೋಟಾ ತಲುಪಿರುವ ಹೊರಟ್ಟಿ 8ನೇ ಬಾರಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ತಮ್ಮ 76ನೇ ವಯಸ್ಸಿನಲ್ಲಿ ಜೆಡಿಎಸ್ ಜೊತೆಗಿನ 2 ದಶಕದ ಸಂಬಂಧವನ್ನು ಕಡೆದುಕೊಂಡು ಬಿಜೆಪಿ ಸೇರಿದ್ದ ಹೊರಟ್ಟಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್ನ ಬಸವರಾಜ್ ಗುರಿಕಾರ ಹಾಗೂ ಜೆಡಿಎಸ್ನ ಶ್ರೀಶೈಲ ಗಿಡದಿನ್ನಿ ವಿರುದ್ಧ ಜಯ ಸಾಧಿಸಿದ್ದಾರೆ.
ಗೆಲುವು ಖಚಿತಪಡಿಸಿಕೊಂಡಿರುವ ಬಸವರಾಜ ಹೊರಟ್ಟಿ ಅವರ ಲೀಡ್ ಪ್ರಮಾಣದಲ್ಲಿ ಕುಸಿತವಾಗಿದೆ. ತಿರಸ್ಕೃತ ಮತಗಳಲ್ಲಿ ಬಹುತೇಕ ಮತಗಳು ಹೊರಟ್ಟಿ ಪರವಾಗಿ ಬಂದಿದ್ದವು ಎಂದು ತಿಳಿದುಬಂದಿದೆ.
ಗೆಲುವಿನ ಬಳಿಕ ಮಾತನಾಡಿದ ಬಸವಾರಜ ಹೊರಟ್ಟಿ, ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಶಿಕ್ಷಕರಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ನನಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು. ಶಿಕ್ಷಕರ ಬೇಡಿಕೆ ಈಡೇರಿಕೆಗಳಿಗೆ ನಾನು ಸದಾ ಬದ್ಧನಾಗಿರುತ್ತೇನೆ. ಸಭಾಪರಿ ಆಗಿದ್ದರಿಂದ ಹೋರಾಟ ಮಾಡಲು ಸಾಧ್ಯವಾಗಿರಲಿಲ್ಲಮ. ಆದರೆ ಈಗ ಶಿಕ್ಷಕರಿಗಾಗಿ ಮತ್ತಷ್ಟು ಹೋರಾಟ ನಡೆಸಲಿದ್ದೇನೆ ಎಂದರು. ನಾನು ಯಾವ ಪಕ್ಷದಲ್ಲಿ ಇರುತ್ತೇನೆಯೋ ಆ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಧಾನ ಪರಿಷತ್ ಸಭಾಪತಿ ಸ್ಥಾನ ನೀಡುವುದೂ ಕೂಡ ಬಿಜೆಪಿ ವರಿಷ್ಠರಿಗೆ ಬಿಟ್ಟ ವಿಚಾರ. ಆದರೆ ನನಗೆ ಹೈಕಮಾಂಡ್ ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹೊರಟ್ಟಿ ಹೇಳಿದರು.
ನನ್ನನ್ನು ಸೋಲಿಸಬೇಕೆಂದು ಹಲವಾರು ಜನರು ಸುಳ್ಳು ಆರೋಪಗಳನ್ನು ಮಾಡಿದ್ದರು. ಅದಕ್ಕೆ ಶಿಕ್ಷಕರು ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ಆರೋಪ ಮಾಡುವರಿಗೆ ಮಾನ- ಮರ್ಯಾದೆ ಇದ್ದರೆ, ಶಿಕ್ಷಕರ ಕೊಟ್ಟ ತೀರ್ಮಾನಕ್ಕೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಹೊರಟ್ಟಿ ತಿರುಗೇಟು ನೀಡಿದರು.
ಪ್ರತಿ ಬಾರಿ ಬಿಜೆಪಿ ನನ್ನ ಎದುರಾಳಿ ಆಗಿರುತಿತ್ತು. ಆದರೆ ಈ ಬಾರಿ ನಾನೇ ಬಿಜೆಪಿಗೆ ಬಂದಿದ್ದರಿಂದ ನನ್ನ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಶಿಕ್ಷಕರು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಇದರ ಪರಿಣಾಮ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ಎಂದು 8ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ ಹೊರಟ್ಟಿ ಧನ್ಯವಾದ ತಿಳಿಸಿದರು.
(ಒನ್ಇಂಡಿಯಾ ಸುದ್ದಿ)