ವಿನಯ ಕುಲಕರ್ಣಿ ಕೆಡವಲು ಬಿಜೆಪಿಯಿಂದ ಹಂಗರಕಿ ಕುಟುಂಬದ ಜಟ್ಟಿ ಕಣಕ್ಕೆ
ಹುಬ್ಬಳ್ಳಿ, ಏಪ್ರಿಲ್ 21: ಧಾರವಾಡ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸುವ ತವಕದಲ್ಲಿದ್ದಾರೆ. ಆದರೆ ಇವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಹಂಗರಕಿ ದೇಸಾಯಿ ಮನೆತನದ ಕುಡಿ ಮತ್ತೊಮ್ಮೆ ಎದುರಾಗಿದೆ.
ಸಚಿವ ವಿನಯ ಕುಲಕರ್ಣಿ ಮತ್ತು ಹಂಗರಕಿ ದೇಸಾಯಿ ಕುಟುಂಬ ಬರೋಬ್ಬರಿ 4ನೇ ಬಾರಿಗೆ ಮುಖಾಮುಖಿ ಆಗುತ್ತಿರುವುದು ಈ ಚುನಾವಣೆಯ ವಿಶೇಷ. ಆದರೆ ಹಂಗರಕಿ ದೇಸಾಯಿ ಮನೆತನದ ಸದಸ್ಯರೊಬ್ಬರು ಎಂಟನೇ ಬಾರಿಗೆ ಧಾರವಾಡ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿರುವುದು ಮತ್ತೊಂದು ವಿಶೇಷ.
ಲಾಡ್ ಜತೆಗೆ ಜೋಶಿ- ಶೆಟ್ಟರ್ ಸಖ್ಯ ಆರೋಪ, ಜೋರು ದನಿಯಲ್ಲೇ ಆಕ್ರೋಶ
ಇನ್ನು ವಿನಯ ಕುಲಕರ್ಣಿ ಮತ್ತು ದೇಸಾಯಿ ಕುಟುಂಬದ ಮಧ್ಯೆ 1985ರಿಂದ ಆರಂಭವಾದ ಚುನಾವಣೆ ಸ್ಪರ್ಧೆ ಈಗಲೂ ಮುಂದುವರಿದಿದೆ. 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಹಂಗರಕಿ ದೇಸಾಯಿ ಮನೆತನದ ಎ.ಬಿ.ದೇಸಾಯಿ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿಯೇ ಅವರು ಗೆಲುವು ಸಾಧಿಸಿದ್ದರು.
ಆ ನಂತರ ಜನತಾ ದಳ ಹಾಗೂ ಜೆಡಿಯುನಿಂದ ನಾಲ್ಕು ಬಾರಿ ಸ್ಪರ್ಧಿಸಿ, ಸೋತಿದ್ದರು. ಆದರೆ ಬಳಿಕ ಎ.ಬಿ. ದೇಸಾಯಿ ಅವರ ಮಗ ಅಮೃತ ದೇಸಾಯಿ ಮೊದಲ ಬಾರಿಗೆ 2008ರಲ್ಲಿ ಮುಖಾಮುಖಿ ಆಗಿದ್ದರು. ಆದರೆ ಇವರಿಬ್ಬರ ಪೈಪೋಟಿ ಮದ್ಯೆ ಬಿಜೆಪಿಯ ಸೀಮಾ ಮಸೂತಿ ಅವರು ಗೆದ್ದಿದ್ದರು. ಬಳಿಕ 2013 ರಲ್ಲಿ ಜೆಡಿಎಸ್ ನಿಂದ ಅಮೃತ್ ದೇಸಾಯಿ ಮತ್ತೆ ವಿನಯ್ ಕುಲಕರ್ಣಿ ಅವರ ವಿರುದ್ಧ ತೊಡೆ ತಟ್ಟಿದರು.
ಆ ಬಾರಿ ಅಮೃತ್ ದೇಸಾಯಿ ಸೋಲು ಕಂಡರು. ಆದರೆ ಏಳು ಬಾರಿ ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಈ ಕುಟುಂಬದ ಸದಸ್ಯರೊಬ್ಬರು, ಮೊದಲ ಬಾರಿಗೆ ಬಿಜೆಪಿಯಿಂದ ಕಣಕ್ಕೆ ಇಳಿದು ಅಗ್ನಿ ಪರೀಕ್ಷೆಗೆ ನಿಂತಿದ್ದಾರೆ. ಆದರೆ ಬಿಜಿಪಿಯ ಮಾಜಿ ಶಾಸಕಿ ಸೀಮಾ ಮಸೂತಿ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ಅವರ ಬೆಂಬಲಿಗರಲ್ಲಿ ಅಸಮಾಧಾನ ಇದೆ.
ಸತತ 9 ಸಾರಿ ಕಾಂಗ್ರಸ್ ವಶವಾಗಿರುವ ಈ ಕ್ಷೇತ್ರದಲ್ಲಿ ಇಲ್ಲಿನ ಸ್ಥಳೀಯ ನಾಯಕರಿಗೆ ಪ್ರತಿಸ್ಪರ್ಧಿಯ ಹುಡುಕಾಟದಲ್ಲಿಯೇ ಕಾಲ ಹರಣ ಮಾಡಿದ್ದಾರೆ. ಆದರೆ ಈ ಬಾರಿ ವಿನಯ ಕುಲಕರ್ಣಿಯನ್ನು ಮಣಿಸಲು ಸರಿಯಾದ ಅಭ್ಯರ್ಥಿ ಸಿಕ್ಕಿದ್ದಾರೆ ಎನ್ನುವ ನಂಬಿಕೆ ಇದೆ. ಇಲ್ಲಿನ ಸ್ಥಳೀಯ ನಾಯಕರ ಲೆಕ್ಕಾಚಾರ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುದನ್ನು ಕಾದು ನೋಡಬೇಕಿದೆ.