ಮುಂದುವರೆದ ಆಕ್ರೋಶ: ಹುಬ್ಬಳ್ಳಿಯಲ್ಲಿ ಕೆಎಫ್ಸಿಗೆ ಕರವೇ ದಿಗ್ಬಂಧನ
ಹುಬ್ಬಳ್ಳಿ, ಅಕ್ಟೋಬರ್, 26: ಕೆಎಫ್ಸಿ ಸಂಸ್ಥೆ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಅಭಿಯಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಹುಬ್ಬಳ್ಳಿಯ ಕೆಎಫ್ಸಿ ಮಳಿಗೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಿಗ್ಬಂಧನ ಹೂಡಿರುವ ಘಟನೆ ಮಂಗಳವಾರ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ, ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ್ ಹಳವದ ಅವರ ನೇತೃತ್ವದಲ್ಲಿ ಇಂದು ಕರವೇ ಪದಾಧಿಕಾರಿಗಳು ಕೆಎಫ್ ಸಿ ಮಳಿಗೆಗೆ ಮುತ್ತಿಗೆ ಹಾಕಿ, ಅಲ್ಲಿನ ಸಿಬ್ಬಂದಿಗೆ ಕನ್ನಡದ ಪಾಠ ಹೇಳಿದರು. ಕೆಎಫ್ಸಿ ಮಳಿಗೆಗಳಲ್ಲಿ ಸಂಪೂರ್ಣ ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಎಲ್ಲ ನಾಮಫಲಕಗಳೂ ಕನ್ನಡದಲ್ಲಿ ಇರಬೇಕು, ಕನ್ನಡದ ಹಾಡುಗಳನ್ನು ಹಾಕಬೇಕು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತಿದ್ದೇವೆ ಎಂದು ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ ಎಚ್ಚರಿಕೆ ನೀಡಿದರು.
Reject KFC trending: ಟ್ವಿಟ್ಟರ್ನಲ್ಲಿ ಕರವೇ ಆಕ್ರೋಶ
ರಾಜ್ಯೋತ್ಸವಕ್ಕೆ ಮುನ್ನ ಕೆಎಫ್ಸಿ ಕನ್ನಡೀಕರಣವಾಗಬೇಕು. ಬೆಂಗಳೂರಿನ ಇಂದಿರಾನಗರ ಕೆಎಫ್ಸಿ ಮಾಲ್ನಲ್ಲಿ ಕನ್ನಡಿಗರ ವಿರುದ್ಧ ಮಾತಾಡಿದ್ದಕ್ಕೆ ಸಂಸ್ಥೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕರವೇ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಆಗ ಆಗುವ ಅನಾಹುತಗಳಿಗೆ ಕೆಎಫ್ಸಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಕರವೇ ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ ಹಳವದ ಎಚ್ಚರಿಕೆ ನೀಡಿದರು.
ಇಂದು ಕರವೇ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಹುಬ್ಬಳ್ಳಿ ಗೋಕುಲ ರೋಡ್ ಕೆ.ಎಫ್.ಸಿ ಮಳಿಗೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ, ಕರವೇ ರಾಜ್ಯ ಪದವೀಧರ ಘಟಕದ ಕಾರ್ಯದರ್ಶಿ ಪ್ರಭುಗೌಡ ಸಖ್ಯಾಗೌಡಶಾನಿ, ಯುವ ಘಟಕ ಜಿಲ್ಲಾಧ್ಯಕ್ಷರಾದ ಸಾಗರ್ ಗಾಯಕವಾಡ, ರೈತ ಘಟಕ ಜಿಲ್ಲಾಧ್ಯಕ್ಷರಾದ ಪಾಪು ಧಾರೆ, ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಗುರಪ್ಪ ಹಳ್ಯಾಳ, ಹುಬ್ಬಳ್ಳಿ ತಾಲೂಕ ಯುವ ಘಟಕ ಅಧ್ಯಕ್ಷರಾದ ಗಂಗು ಪಾಟೀಲ್, ಧಾರವಾಡ ನಗರ ಘಟಕ ಅಧ್ಯಕ್ಷರಾದ ಮಲಿಕರೀಯಾಜ ಕಂಬಾರಗಣವಿ, ಧಾರವಾಡ ತಾಲ್ಲೂಕ ಉಪಾಧ್ಯಕ್ಷರಾದ ಕಲ್ಮೇಶ ಸಾಲಿ ಇನ್ನಿತರರು ಪಾಲ್ಗೊಂಡಿದ್ದರು.
'ಒಂದು ವಾರದೊಳಗೆ ಕೆಎಫ್ಸಿ ನಾಮಫಲಕ ಕನ್ನಡದಲ್ಲಿ ಹಾಕಬೇಕು': ಕರವೇ ಆಗ್ರಹ
ನಗರದ ಕೆಎಫ್ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ಮಹಿಳೆ ಹಾಗೂ ಕೆಎಫ್ಸಿ ಸಿಬ್ಬಂದಿಗಳ ನಡುವೆ ಮಾತುಕತೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಬಾರೀ ವೈರಲ್ ಆಗಿದೆ. ಈ ಬೆನ್ನಲ್ಲೇ ಕೆಎಫ್ಸಿ ವಿರುದ್ಧ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಭಾನುವಾರ #RejectKFC #KFCಕನ್ನಡಬೇಕು ಎಂಬ ಹ್ಯಾಶ್ ಟ್ಯಾಗ್ಗಳು ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆಗಿದ್ದವು. ಹಾಗೆಯೇ ಸೋಮವಾರ ದಾವಣಗೆರೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡರ ನೇತೃತ್ವದಲ್ಲಿ ಕೆಎಫ್ ಸಿ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು. ಕರವೇ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎಂ.ಎಸ್. ರಾಮೇಗೌಡರ ನೇತೃತ್ವದಲ್ಲಿ ಅನೇಕ ಮುಖಂಡರು ಕೆಎಫ್ಸಿ ಕನ್ನಡ ವಿರೋಧಿ ನಿಲುವು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. "ಒಂದು ವಾರದೊಳಗೆ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದ ಹಾಡುಗಳನ್ನೇ ಹಾಕಬೇಕು," ಎಂದು ರಾಮೇಗೌಡರು ಆಗ್ರಹ ಮಾಡಿದರು.
ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರ: ಕೆಎಫ್ಸಿ ಸ್ಪಷ್ಟನೆ
ಈಗಾಗಲೇ ಸ್ಪಷ್ಟನೆ ನೀಡಿರುವ ಕೆಎಫ್ಸಿ
ಈ ಎಲ್ಲಾ ಬೆಳವಣಿಗೆಯ ನಡುವೆ ಕೆಎಫ್ಸಿ ವಕ್ತಾರರು ಈ ವಿಡಿಯೋ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. "ಇದು ಹಳೆಯ ವಿಡಿಯೋ ಮತ್ತು ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ," ಎಂದು ತಿಳಿಸಿದ್ದಾರೆ. "ಹಾಗೆಯೇ ಕೆಎಫ್ಸಿ ಇಂಡಿಯಾ ಎಲ್ಲಾ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳ ಕುರಿತು ಅತ್ಯುನ್ನತ ಗೌರವ ಹೊಂದಿದೆ. ನಾವು ದೇಶಾದ್ಯಂತ ಬ್ರ್ಯಾಂಡ್ ಹೊಂದಿರುವುದರಿಂದ, ಗ್ರಾಹಕರು ದೇಶದ ಯಾವುದೇ ರೆಸ್ಟೊರೆಂಟ್ಗೆ ಆಗಮಿಸಿದರೂ, ಒಂದೇ ರೀತಿಯ ಕೆಎಫ್ಸಿ ಅನುಭವ ಪಡೆಯಬೇಕು ಎಂಬುದು ನಮ್ಮ ಗುರಿ. ಈ ಉದ್ದೇಶದಿಂದಲೇ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಕೇಂದ್ರ ಕಚೇರಿಯಿಂದ ಪರವಾನಗಿ ದೊರೆತ ಹಾಗೂ ಖರೀದಿಸಿ ಗೀತೆಗಳ ಸಂಗ್ರಹ ಇರಿಸಲಾಗಿದೆ. ಮತ್ತು ದೇಶಾದ್ಯಂತ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಅವುಗಳನ್ನೇ ಪ್ರಸಾರ ಮಾಡಲಾಗುತ್ತದೆ," ಎಂದು ಸ್ಪಷ್ಟಪಡಿಸಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)