ಪೇಜಾವರ ಶ್ರೀ ಕನಕರ ಚಿನ್ನದ ಪ್ರತಿಮೆ ಮಾಡಿಸಿ ಕೃಷ್ಣ ದೇಗುಲದಲ್ಲಿಡಲಿ
ಹುಬ್ಬಳ್ಳಿ, ಸೆಪ್ಟೆಂಬರ್ 27: ಉಡುಪಿಯ ಶ್ರೀಕೃಷ್ಣನ ದೇವಾಲಯದಲ್ಲಿ ಕನಕದಾಸರ ಚಿನ್ನದ ಪ್ರತಿಮೆ ಪ್ರತಿಷ್ಠಾಪಿಸಿ, ಪೇಜಾವರ ಮಠದ ಶ್ರೀಗಳು ಪೂಜೆ ಮಾಡಿ ತೋರಿಸಬೇಕು ಎಂದು ಮನ್ಸೂರು ರೇವಣಸಿದ್ಧೇಶ್ವರ ಮಠದ ಬಸವರಾಜು ದೇವರು ಸವಾಲು ಹಾಕಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಮಾತನಾಡಿ, ಹಿಂದುಳಿದ ವರ್ಗಗಳವರ ಉದ್ಧಾರದ ಬಗ್ಗೆ ಪೇಜಾವರ ಶ್ರೀಗಳು ಬಹಳಷ್ಟು ಮಾತನಾಡುತ್ತಾರೆ. ಬರೀ ಮಾತಿನಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ತೋರಿದರೆ ಸಾಲದು. ಹಿಂದುಳಿದ ವರ್ಗಕ್ಕೆ ಸೇರಿದವರಾದ ಕನಕದಾಸರ ಚಿನ್ನದ ಪ್ರತಿಮೆ ಮಾಡಿ, ಕೃಷ್ಣನ ಮೂರ್ತಿಯ ಪಕ್ಕದಲ್ಲಿಯೇ ಇಟ್ಟು ಪೂಜಿಸಬೇಕು ಎಂದರು.[ಕಾವೇರಿ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು]
ಆ ರೀತಿ ಪೂಜಿಸಿದಾಗ ಮಾತ್ರ ಹಿಂದುಳಿದ ವರ್ಗಕ್ಕೆ ಪೇಜಾವರ ಶ್ರೀಗಳು ಗೌರವ ಕೊಟ್ಟಂತೆ ಆಗುತ್ತದೆ. ಸದ್ಯಕ್ಕೆ ಉಡುಪಿಯಲ್ಲಿ ಅಷ್ಟ ಮಠಗಳಿದ್ದು, ಇವುಗಳೊಂದಿಗೆ ಯಾದವ ಸಮಯದಾಯಕ್ಕೆ ಗೊಲ್ಲ ಮಠ, ಕುರುಬ ಸಮಾಜಕ್ಕೆ ಕನಕ ಮಠವನ್ನು ಸ್ಥಾಪಿಸಿ ಎಂದು ಎಂದು ಬಸವರಾಜ ದೇವರು ಒತ್ತಾಯಿಸಿದರು.['ತುಳುನಾಡ್ ತಿರ್ಗಾಟದ ತೇರ್'ಗೆ ಪೇಜಾವರ ಶ್ರೀ ಸ್ವಾಗತ]
ಒಟ್ಟು ಹತ್ತು ಮಠಗಳನ್ನು ಮಾಡಬೇಕು. ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ ಅಥವಾ ಹಾವೇರಿ ಜಿಲ್ಲೆಯಲ್ಲಿರುವ ಜಾನಪದ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರಿಡಬೇಕು ಮತ್ತು ಪ್ರತ್ಯೇಕವಾಗಿ ಕನಕದಾಸರ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ರಾಯಣ್ಣ ಬ್ರಿಗೇಡ್ ನಿಂದ ಹಿಂದ ಮತ್ತು ಅಹಿಂದ ಒಂದಾಗಿ ಕುರುಬ ಸಮಾಜವನ್ನು ನಿರ್ಲಕ್ಷಿಸಬಾರದು ಎಂದರು.