ಕಲಘಟಗಿ ಜನರಲ್ಲಿ ಗಲಿಬಿಲಿ ಉಂಟು ಮಾಡಿದ ಬೃಹತ್ ಚಿರತೆ
ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಹುಬ್ಬಳ್ಳಿ, ಫೆಬ್ರವರಿ,17: ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾಮನಕೊಪ್ಪ ಗ್ರಾಮದ ಕಾಡಿನಂಚಿನ ವೀರಭದ್ರೇಶ್ವರ ದೆವಾಲಯದ ಬಳಿ ಚಿರತೆ ನಾಗರಾಜ ಗಂದಿಗವಾಡ ಎಂಬುವರಿಗೆ ಕಾಣಿಸಿದೆ. ಕೂಡಲೆ ನಾಗರಾಜ ದೇವಸ್ಥಾನದಲ್ಲಿ ಅಡಗಿಕೊಂಡಿದ್ದಾರೆ. ಅಲ್ಲಂದಲೇ ತಮ್ಮ ಗ್ರಾಮದ ಸ್ನೇಹಿತರಿಗೆ ಕರೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸುವಂತೆ ಹೇಳಿದ್ದಾರೆ.
ತಮ್ಮ ಹೊಲದಲ್ಲಿಯೇ ಮಲಗಿದ್ದ ಚಿರತೆ ನಂತರ ಉೂರ ಕಡೆಗೆ ತೆರಳಿದೆ ಎಂದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳಿಗೆ ನಾಗರಾಜ ಹೇಳಿದ್ದಾರೆ. ನಂತರ ಚಿರತೆಯ ಹೆಜ್ಜೆ ಗುರುತಿನ ಜಾಡು ಹಿಡಿದು ಅಧಿಕಾರಿಗಳು ಪರೀಕ್ಷಿಸಿ ಚಿರತೆ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಈ ಗ್ರಾಮದ ಹತ್ತಿರವಿರುವ ಕಾಡಿನಲ್ಲಿ ನಾಲ್ಕು ಚಿರತೆಗಳಿದ್ದು ಗ್ರಾಮಸ್ಥರು ಒಬ್ಬೊಬ್ಬರೆ ಓಡಾಡದಂತೆ ಮತ್ತು ಮಕ್ಕಳನ್ನು ಹೊರಗೆ ಕಳಿಸದಂತೆ ಸೂಚಿಸಿದ್ದಾರೆ. ರಾತ್ರಿ ಓಡಾಡುವವರು ಕೈಯಲ್ಲಿ ದೀಪ ಹಿಡಿದುಕೊಂಡು ಓಡಾಡಿ ಎಂದು ಅರಣ್ಯ ಅಧಿಕಾರಿ ಚಂದ್ರಕಾಂತ ಹಿಪ್ಪರಗಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಚಿರತೆಯನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.