ಹುಬ್ಬಳ್ಳಿ ಕಿಮ್ಸ್ ನಲ್ಲೇ ರವಿ ಬೆಳಗೆರೆಗೆ ಚಿಕಿತ್ಸೆ, ಶೆಟ್ಟರ್, ಪ್ರಕಾಶ್ ರೈ ಭೇಟಿ
ಹುಬ್ಬಳ್ಳಿ, ಜೂನ್ 27: ಪತ್ರಕರ್ತ ರವಿ ಬೆಳಗೆರೆ ಅವರು ಎಲ್ಲೋ ತಪ್ಪಿಸಿಕೊಂಡು ಹೋದರು ಎಂಬರ್ಥದ ಸುದ್ದಿ ಮಂಗಳವಾರ ತೇಲಾಡಿತ್ತು. ಆದರೆ ಅವರೀಗ ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆ ನೋವಿನಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆ ನಡೆಯುತ್ತಿದೆ.
ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರನ್ನು ಮಂಗಳವಾರ ನಸುಕಿನ ವೇಳೆಯಲ್ಲಿ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರ ವಿರುದ್ದ ಅವಹೇಳಕಾರಿ ಲೇಖನ ಬರೆದದ್ದಕ್ಕಾಗಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರುಪಾಯಿ ದಂಡ ವಿಧಿಸಿ ಸಮಿತಿ ಶಿಫಾರಸು ಮಾಡಿದೆ.
ರವಿ ಬೆಳಗೆರೆ ಬಂಧನ ಆದೇಶ ಹಿಂಪಡೆಯುವಂತೆ ಸಿಎಂ ಮನವಿ
ಅವರು ಎದೆನೋವಿನಿಂದ ಬಳಲುತ್ತಿದ್ದರಿಂದ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸೋಮವಾರ ಬೆಳಗಿನ ಜಾವ ಪೊಲೀಸರ ವಿರೋಧದ ಮಧ್ಯೆಯೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.
ಪತ್ರಕರ್ತರಿಗೆ ಶಿಕ್ಷೆ, ಆದೇಶಕ್ಕೆ ದಿನೇಶ್ ಗುಂಡೂರಾವ್ ಅಸಮಾಧಾನ
ಆದರೆ, ಮಂಗಳವಾರ ಬೆಳಗಿನ ಜಾವ ಪುನಃ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಮ್ಸ್ ನ ಸೂಪರಿಟೆಂಡೆಂಟ್ ಡಾ.ಶಿವಪ್ಪ ಆನೂರಶೆಟ್ಟರ್ ಬೆಳಗೆರೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ವೈದ್ಯರು ಹಾಗೂ ಪೊಲೀಸರನ್ನು ಹೊರತುಪಡಿಸಿ ಯಾರಿಗೂ ಭೇಟಿಗೆ ಅವಕಾಶ ನೀಡಿಲ್ಲ.
ಬಂಧನದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ
ಈ ಮಧ್ಯೆ ರವಿ ಬೆಳಗೆರೆ ಅವರು ದಾಖಲಾಗಿರುವ ಕಿಮ್ಸ್ ನ ಕಾರ್ಡಿಯಾಲಜಿ ವಿಭಾಗಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಆದರೆ ಅವರ ಬಂಧನದ ಕುರಿತಂತೆ ಪೊಲೀಸರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ.
ಜಗದೀಶ ಶೆಟ್ಟರ್ ಭೇಟಿ
ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಂಗಳವಾರ ಕಿಮ್ಸ್ ಗೆ ಭೇಟಿ ನೀಡಿ, ರವಿ ಬೆಳಗೆರೆ ಅವರ ಆರೋಗ್ಯ ವಿಚಾರಿಸಿದರು. ಬೆಂಬಲಿಗರೊಂದಿಗೆ ಭೇಟಿ ನೀಡಿದ ಶೆಟ್ಟರ್ ಜೊತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೆಯರ್ ಡಿ.ಕೆ.ಚೌವ್ಹಾಣ ಮತ್ತಿತರರು ಇದ್ದರು.
ಆದೇಶವನ್ನು ವಾಪಸ್ ಪಡೆಯಬೇಕು
ಆ ನಂತರ ಮಾತನಾಡಿದ ಅವರು, ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸದನದ ಹಕ್ಕು ಬಾಧ್ಯತಾ ಸಮಿತಿ ನೀಡಿದ ಆದೇಶವನ್ನು ವಾಪಸ್ ಪಡೆಯಬೇಕು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜೊತೆ ಮಾಧ್ಯಮ ರಂಗದೊಂದಿಗೆ ಸೌಹಾರ್ದ ಕಾಪಾಡಿಕೊಳ್ಳುವುದು ಅಗತ್ಯ ಎಂದರು.
ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಿ
ಸದನದ ಕೊನೆಯ ದಿನ ಸ್ಪೀಕರ್ ಈ ನಿರ್ಣಯವನ್ನು ಕೈಗೊಂಡಿದ್ದಾರೆ. ಕಿಮ್ಮನೆ ರತ್ನಾಕರ್ ನೇತೃತ್ವದ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಆದರೆ ರವಿ ಬೆಳಗೆರೆ ಅವರ ವಿಷಯ ಸದನದ ಅಜೆಂಡಾದಲ್ಲಿ ಇರಲಿಲ್ಲ. ನಾನು ಹೊರಗೆ ಬಂದ ನಂತರ ಈ ನಿರ್ಣಯ ಹೊರಬಿದ್ದಿದೆ. ರವಿ ಬೆಳಗೆರೆಗೆ ಶಿಕ್ಷೆ ವಿಧಿಸಿದ ನಿರ್ಣಯ ಕೇಳಿ ನನಗೂ ಆಶ್ಚರ್ಯವಾಗಿದೆ. ಪ್ರಕರಣವನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಮುಗಿಸಬೇಕು ಎಂದು ಅವರು ಸಲಹೆ ನೀಡಿದರು.
ಬಹುಭಾಷಾ ನಟ ಪ್ರಕಾಶ್ ರೈ ಭೇಟಿ
ಇನ್ನು ಮಂಗಳವಾರ ಸಂಜೆ ವೇಳೆಗೆ ಬಹುಭಾಷಾ ನಟ ಪ್ರಕಾಶ್ ರೈ ಕೂಡ ರವಿ ಬೆಳಗೆರೆ ಅವರನ್ನು ಭೇಟಿ ಆಗಿದ್ದಾರೆ. ಬೆಳಗೆರೆ ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಮಾತುಕತೆ ನಡೆಸಿದ ಬಗ್ಗೆ ಮೂಲಗಳಿಂದ ಮಾಹಿತಿ ದೊರೆಯುತ್ತಿದೆ.
ಪೇಜಾವರ ಶ್ರೀ ನಿಲುವು ಸರಿ
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ರಂಜಾನ್ ಅಂಗವಾಗಿ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟ ಹಾಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಒಳ್ಳೆ ಬೆಳವಣಿಗೆ. ಅಲ್ಲದೆ ಹಿಂದೂ ಧರ್ಮದ ರಕ್ಷಣೆ ವಿಷಯದಲ್ಲಿ ಸ್ವಾಮೀಜಿ ಈವರೆಗೂ ಉತ್ತಮ ನಿರ್ಧಾರಗಳನ್ನೇ ಕೈಗೊಂಡಿದ್ದಾರೆ ಎಂದು ಜಗದೀಶ ಶೆಟ್ಟರ್ ಸಮರ್ಥಿಸಿಕೊಂಡರು.
ಹಿಂದೂ ಧರ್ಮದ ಆಶಯದಂತೆ ನಡೆದುಕೊಂಡಿದ್ದಾರೆ
ಪರಧರ್ಮ ಸಹಿಷ್ಣುತೆ ಹಿಂದೂ ಧರ್ಮದ ಆಶಯ. ಹೀಗಾಗಿ ಕೋಮು ಸೌಹಾರ್ದ ಕಾಪಾಡುವ ಮಹತ್ತರ ಕೆಲಸವನ್ನು ಸ್ವಾಮೀಜಿ ಮಾಡಿದ್ಧಾರೆ ಎಂದು ಅವರು ಬಣ್ಣಿಸಿದರು.