ಪಾಕಿಸ್ತಾನ ಪರ ಘೋಷಣೆ: ದೇಶದ್ರೋಹ ಪ್ರಕರಣ ಕೈಬಿಡುವಂತೆ ಯಡಿಯೂರಪ್ಪಗೆ ಮನವಿ
ಹುಬ್ಬಳ್ಳಿ, ಆಗಸ್ಟ್ 11: ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಮೂವರು ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹದ ಪ್ರಕರಣಗಳನ್ನು ಕೈಬಿಡುವಂತೆ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘಟನೆ (ಜೆಕೆಎಸ್ಎ) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮನವಿ ಮಾಡಿದೆ.
Recommended Video
ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳು ಬೆಂಗಳೂರಿಗೆ ವರ್ಗಾವಣೆ ತೆಗೆದುಕೊಳ್ಳಲು ಅಲ್ಲಿ ಓದು ಮುಂದುವರಿಸಲು ಅವಕಾಶ ನೀಡುವಂತೆಯೂ ಸಂಘಟನೆ ಕೋರಿದೆ. ಬೆಂಗಳೂರಿನಲ್ಲಿ ಸುರಕ್ಷಿತ ಪರಿಸರವಿದ್ದು, ಈ ವಿದ್ಯಾರ್ಥಿಗಳ ಮಾನಸಿಕ ಆಘಾತವನ್ನು ಶಮನ ಮಾಡಲು ಮತ್ತು ಮುಂದೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿದೆ ಎಂದು ಹೇಳಿದೆ.
ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ; ಇನ್ಸ್ಪೆಕ್ಟರ್ ಅಮಾನತು
ಆಗಸ್ಟ್ 10ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಜೆಕೆಎಸ್ಎ, ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೋ ವೈರಲ್ ಆದ ಬಳಿಕ ಬಂಧನಕ್ಕೆ ಒಳಗಾದ ವಿದ್ಯಾರ್ಥಿಗಳು ಆರ್ಥಿಕವಾಗಿ ಬಡತನದಲ್ಲಿರುವ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ಯೋಜನೆ ಮೂಲಕ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಅವರನ್ನು ಪ್ರಶ್ನಿಸಿದ ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದರು. ಆದರೆ ಬಲಪಂಥೀಯ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ ಒತ್ತಡ ಹೇರಿದ ಬಳಿಕವೇ ಬಂಧಿಸಿದ್ದರು ಎಂದು ಹೇಳಿದೆ.
2020ರ ಫೆ. 14ರಂದು ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮೀರ್, ಬಾಸಿತ್ ಮತ್ತು ತಾಲೀಬ್ ಪಾಕಿಸ್ತಾನದ ಸೇನೆಯ ಹಾಡಿಗೆ ಹಾಸ್ಟೆಲ್ನಲ್ಲಿ ನರ್ತಿಸಿ, ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.
ಪಾಕಿಸ್ತಾನ ಪರ ಘೋಷಣೆ; ಹುಬ್ಬಳ್ಳಿಯ ವಿದ್ಯಾರ್ಥಿಗಳು ಬಿಡುಗಡೆ
ಈ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಗೆ ವಿಳಂಬ ಮಾಡಿದ್ದ ಕಾರಣಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರನ್ನು ಎರಡು ತಿಂಗಳ ಹಿಂದೆ ಅಮಾನತು ಮಾಡಲಾಗಿತ್ತು.