ಕೆಲಸದ ಹಸಿವೋ? ಸರ್ಕಾರಿ ನೌಕರಿ ಮೋಹವೋ?
ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳ ಬಿಸಿಎಂ ಹಾಸ್ಟೆಲ್ಗಳ ಅಡುಗೆ ಸಿಬ್ಬಂದಿ ನೇಮಕಾತಿಯಲ್ಲಿ ಆಯ್ಕೆ ಬಯಸಿ ಎಂಜಿನಿಯರಿಂಗ್, ಡಿಪ್ಲೋಮಾ, ವಿಜ್ಞಾನ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವು
ಹುಬ್ಬಳ್ಳಿ, ಜುಲೈ 4: ಇದು ಕೆಲಸದ ಹಸಿವೋ? ಅಥವಾ ಸರ್ಕಾರಿ ನೌಕರಿ ಮೋಹವೋ? ಗೊತ್ತಾಗುತ್ತಿಲ್ಲ. ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳ ಬಿಸಿಎಂ ಹಾಸ್ಟೆಲ್ಗಳ ಅಡುಗೆ ಸಿಬ್ಬಂದಿ ನೇಮಕಾತಿಯಲ್ಲಿ ಆಯ್ಕೆ ಬಯಸಿ ಎಂಜಿನಿಯರಿಂಗ್, ಡಿಪ್ಲೋಮಾ, ವಿಜ್ಞಾನ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವುದು ಈ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು, ಹುದ್ದೆಗೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ನಿಗದಿಪಡಿಸಿದ್ದರೂ ಅರ್ಜಿ ಸಲ್ಲಿಸಿದವರಲ್ಲಿ ಉನ್ನತ ವ್ಯಾಸಂಗ ಮಾಡಿರುವವರದ್ದೆ ಸಿಂಹಪಾಲು.
ಅದರಲ್ಲೂ ತಾಂತ್ರಿಕ ಸೇರಿದಂತೆ ವಿಜ್ಞಾನ ಪದವೀಧರರು ನೇಮಕಾತಿ ಬಯಸಿ ಅರ್ಜಿ ಸಲ್ಲಿಸಿರುವುದು ಅಷ್ಟೇ ಅಲ್ಲ ಜಿಲ್ಲಾ ಮಟ್ಟದ ನೇಮಕಾತಿ ಪ್ರಾಧಿಕಾರ ಇತ್ತೀಚೆಗೆ ನಡೆಸಿರುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ಪದವೀಧರರು ಹಾಜರಾಗಿ ವಿವಿಧ ಖಾದ್ಯಗಳನ್ನು ತಯಾರಿಸಿದ್ದಾರೆ. ಈ ಪದವೀಧರರಿಗೆ ನಿರುದ್ಯೋಗದ ಸಮಸ್ಯೆಯೋ? ಅಥವಾ ಸರ್ಕಾರಿ ನೌಕರಿಯ ಮೋಹವೋ? ಎಂಬ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿವೆ.
ಸರ್ಕಾರಿ ನೌಕರಿ ವ್ಯಾಮೋಹ: ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಸರ್ಕಾರಿ ನೌಕರಿ ವ್ಯಾಮೋಹ ಹೆಚ್ಚು. ಅಟೆಂಡರ್ ಆದರೂ ಸರಿ ಅದು ಸರ್ಕಾರಿ ಕಚೇರಿಯಲ್ಲಿ ಆಗಬೇಕು ಎಂಬುದು ಇಲ್ಲಿನ ಬಹುತೇಕ ಯುವಕರ ಬಯಕೆ.
ಆದರೆ, ಭಾನುವಾರ ಬಾಗಲಕೋಟೆ ಜಿಲ್ಲೆಯ ಅಡುಗೆ ಸಿಬ್ಬಂದಿ ನೇಮಕಾತಿಗೆ ನಡೆದ ಪ್ರಾಯೋಗಿಕ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಶಿವಾನಂದ ಕಿಲಬನೂರ ಇಂಜಿನಿಯರಿಂಗ್ (ಮೆಕ್ಯಾನಿಕಲ್) ಪದವೀಧರನಾಗಿದ್ದುಕೊಂಡು ಈ ಹುದ್ದೆಯ ಸಂದರ್ಶನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಒಂದೆಡೆ ಬಡತನವೂ ಕಾರಣವಾಗಿರಬಹುದು.
''ತಂದೆ-ತಾಯಿ ಕೂಲಿ ಮಾಡಿ ಇಂಜಿನಿಯರಿಂಗ್ ಮಾಡಿಸಿದ್ದಾರೆ. ಆದರೆ, ಖಾಸಗಿ ಕಂಪನಿಯಲ್ಲಿ ೮ ಸಾವಿರ ವೇತನ ಇದ್ದು, ಇದು ಯಾವುದಕ್ಕೂ ಸಾಕಾಗುವುದಿಲ್ಲ. ಹಾಸ್ಟೆಲ್ಗಳಲ್ಲಿ ಅಡುಗೆ ಮಾಡಿದರೆ ಕೊನೆ ಪಕ್ಷ ೧೬,೪೦೦ ಸಂಬಳ ದೊರೆಯಲಿದೆ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದೇನೆ'' ಎನ್ನುತ್ತಾರೆ ಶಿವಾನಂದ ಕಿಲಬನೂರ.
ರಿಸ್ಕ್ ಬೇಡ: ಇದೇ ಹುದ್ದೆಯ ಆಯ್ಕೆ ಬಯಸಿ ಕೃಷಿ ಪದವೀಧರೆ ವಾಣಿಶ್ರೀ ರಾಂಪುರ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಕೇವಲ ಬಿಎ ಪದವಿ ಪಡೆದು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಕೈ ತುಂಬಾ ಸಂಪಾದನೆ ಮಾಡುತ್ತಿರುವ ಈ ಸಂದರ್ಭದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ ಪದವಿ ಪೂರೈಸಿದರೂ ಸರ್ಕಾರಿ ಹಾಸ್ಟೆಲ್ಗಳಲ್ಲಿ ಅಡುಗೆ ಮಾಡಿ ಬದುಕುವ ಗೀಳು ಈ ಯುವಕರಿಗೆ ಯಾಕೆ? ಎಂಬ ಪ್ರಶ್ನೆಗೆ ಸರಳ ಉತ್ತರ ರಿಸ್ಕ್ ಬೇಡಾ ಎಂಬುದು.
ಹೌದು, ಇಂದಿನ ಬಹುತೇಕ ಪದವೀಧರರಿಗೆ ರಿಸ್ಕ್ ತೆಗೆದುಕೊಳ್ಳುವ ಮನಃಸ್ಥಿತಿ ಇಲ್ಲ. ಜೀವನದಲ್ಲಿ ಬೇಗ ಸೆಟ್ಲ್ ಆಗಬೇಕು ಎಂಬ ಬಯಕೆಯೊಂದಿಗೆ ಭದ್ರತೆ ಇರುವ ಸರ್ಕಾರಿ ನೌಕರಿ ಯಾವುದಾದರೇನು ಎಂಬ ತಿರ್ಮಾನಕ್ಕೆ ಬಂದಂತಿದೆ.