ವಾಣಿಜ್ಯ ನಗರದಲ್ಲಿ ಮುಚ್ಚುತ್ತಿವೆ ಇಂದಿರಾ ಕ್ಯಾಂಟೀನ್
ಹುಬ್ಬಳ್ಳಿ, ಜನವರಿ 05: ದುಡಿಯುವ ವರ್ಗಕ್ಕೆ ಕಡಿಮೆ ದರದಲ್ಲಿ ಉಪಹಾರ-ಊಟ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಿದ್ದವು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನುದಾನದ ಕೊರತೆಯಿಂದ ಒಂದೊಂದಾಗಿ ಬಾಗಿಲು ಹಾಕುತ್ತಿವೆ.
ಹುಬ್ಬಳ್ಳಿಯಲ್ಲಿ ಆರಂಭಗೊಂಡಿದ್ದ 9 ಇಂದಿರಾ ಕ್ಯಾಂಟೀನ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲು ಹಂತದಲ್ಲಿ ಮೂರು ಕ್ಯಾಂಟೀನ್. ನಂತರ ಆರು ಕ್ಯಾಂಟೀನ್ ಗಳನ್ನು ನಿರ್ಮಿಸಲಾಗಿತ್ತು. ಉತ್ತಮ ಸ್ಪಂದನೆಯೂ ಇತ್ತು. ಆದರೆ ಈಗ ಮೂರು ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ.
ಪ್ರವಾಹ ಪೀಡಿತರಿಗೆ ಪರಿಹಾರಕ್ಕಾಗಿ ಕಾಂಗ್ರೆಸ್ ನಿಂದ ಪ್ರಧಾನಿಗೆ ಪತ್ರ
ಇಂದಿರಾ ಕ್ಯಾಂಟೀನ್ ನನ್ನು ನಿರ್ವಹಿಸುವ ಸಂಸ್ಥೆಗೆ ಬಾಕಿ ಹಣ ಪಾವತಿ ಮಾಡದಿದ್ದರಿಂದ, ಗುತ್ತಿಗೆ ಪಡೆದಿದ್ದ ಸಂಸ್ಥೆ ಕ್ಯಾಂಟೀನ್ ಸಹವಾಸವೇ ಬೇಡ ಎಂದು ಮುಚ್ಚಲು ಮುಂದಾಗಿದೆ.
ಈ ಹಿಂದೆಯೂ ಕ್ಯಾಂಟಿನ್ ಗಳು ಮುಚ್ಚುವ ಪರಿಸ್ಥಿತಿ ಬಂದಾಗ, ಜಿಲ್ಲಾಡಳಿತ ಹಣ ಬಿಡುಗಡೆ ಮಾಡಿ ಜೀವ ತುಂಬಿತ್ತು. ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದ ಆದಿತ್ಯಾ ಮಯೂರ ರೆಸಾರ್ಟ್ ನವರು ಅನುದಾನಕ್ಕಾಗಿ ಕಾಯುತ್ತಿದ್ದರೂ, ಬಿಡುಗಡೆಯಾಗಲಿಲ್ಲ.
ಒಂದು ವರ್ಷದ ಹಿಂದೆ ಹಣ ಬಿಡುಗಡೆಯಾಗಿದ್ದು ಬಿಟ್ಟರೆ ಮತ್ತೆ ಹಣ ಬಂದಿಲ್ಲ. ಜಿಲ್ಲಾಡಳಿತದಿಂದ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಬಾಕಿ ಅನುದಾನ ಬರಬೇಕಿದೆ.
ಇಂದಿರಾ ಕ್ಯಾಂಟೀನ್ ಮೆನು ಬದಲು : ಚಪಾತಿ, ರಾಗಿ ಮುದ್ದೆ ಸೇರ್ಪಡೆ?
ಎಲ್ಲೆಲ್ಲಿ ಮುಚ್ಚಿವೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂಬತ್ತು ಇಂದಿರಾ ಕ್ಯಾಂಟೀನ್ ಬರುತ್ತವೆ. ಅದರಲ್ಲಿ ಮೂರು ಕ್ಯಾಂಟೀನ್ ಗಳು ಬಿಲ್ ಬಾಕಿ ಕಾರಣದಿಂದ ಜನವರಿ ಒಂದರಿಂದ ದಾಸೋಹ ನಿಲ್ಲಿಸಿವೆ.
ಎಂ.ಕೃಷ್ಣಾನಗರ, ಸೋನಿಯಾ ಗಾಂಧಿ ನಗರ ಮತ್ತು ಬೆಂಗೇರಿ ಕಿಚನ್ ಪಕ್ಕದಲ್ಲಿರುವ ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ಈ ಮೂರು ಕ್ಯಾಂಟೀನ್ ಗಳಲ್ಲಿ ಸಿಬ್ಬಂದಿ ಕೊರತೆಯೂ ಇತ್ತು, ಜನರೂ ಕೂಡಾ ಕ್ಯಾಂಟೀನ್ ನತ್ತ ಬರಲು ನಿರಾಸಕ್ತಿ ತೋರಿದ್ದರಿಂದ ಬಂದ್ ಮಾಡಲಾಗಿದೆಯಂತೆ.