ಕುಂದಗೋಳ ಉಪಚುನಾವಣೆ : ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಪ್ರಕರಣ ದಾಖಲು
ಹುಬ್ಬಳ್ಳಿ, ಮೇ 14 : ಕುಂದಗೋಳ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸಿರುವ ಚುನಾವಣಾ ಆಯೋಗವು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಎಫ್ ಎಸ್ ಟಿ ಅಧಿಕಾರಿಗಳ ತಂಡ ಸೋಮವಾರ (ಮೇ.13) ರಾತ್ರಿ 9.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಹುಬ್ಬಳ್ಳಿ ನಗರದ ವಿವಿಧ ಪ್ರತಿಷ್ಟಿತ ಹೋಟೆಲುಗಳ ಮೇಲೆ ದಾಳಿ ನಡೆಸಿದೆ.
ರಾತ್ರಿ 10 ಗಂಟೆಯ ಸುಮಾರಿಗೆ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್ ನ ಕೊಠಡಿ ಸಂಖ್ಯೆ 307 ರಲ್ಲಿ ಇರಿಸಲಾಗಿದ್ದ, ಸಿ.ಎಸ್.ಶಿವಳ್ಳಿ ಅವರ 11 ಭಾವಚಿತ್ರಗಳು, ಬಂಗಾರದ ಬಣ್ಣ ಲೇಪಿಸಿರುವ 50 ಅರಿಶಿನ, ಕುಂಕುಮದ ಬಟ್ಟಲುಗಳು, ಕುಂದಗೋಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 51 ರಿಂದ 57 ರವರೆಗಿನ ಒಟ್ಟು 7 ಮತದಾರರ ಪಟ್ಟಿಗಳು ಹಾಗೂ ಕಾಂಗ್ರೆಸ್ ಪಕ್ಷದ ಚಿಹ್ನೆ ಹೊಂದಿದ್ದ ಕೇಸರಿ, ಬಿಳಿ, ಹಸಿರು ವರ್ಣದ ಟೊಪ್ಪಿಗೆಯೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಕುಂದಗೋಳದ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರ ಪರದಾಟ.!?
ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಇವುಗಳನ್ನು ಸಂಗ್ರಹಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಿವಕುಮಾರ್ ಚಂದ್ರಶೇಖರ್ ಗೋಕಾವಿ ಎಂಬುವವರ ವಿರುದ್ಧ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.