ಸಿದ್ದರಾಮಯ್ಯ ತಿದ್ದಿಕೊಳ್ಳದಿದ್ದರೆ ಬಾದಾಮಿ ಜನ ಬುದ್ಧಿ ಕಲಿಸ್ತಾರೆ: ಅಶೋಕ
ಹುಬ್ಬಳ್ಳಿ, ಅಕ್ಟೋಬರ್ 27: "ಸಿದ್ದರಾಮಯ್ಯ ಅವರು ಸ್ಪೀಕರ್ ವಿಚಾರವಾಗಿ ಏಕವಚನದಲ್ಲಿ ಮಾತಾಡಿದ್ದು ಸರಿಯಲ್ಲ. ಈ ರೀತಿಯ ಅವರ ನಡವಳಿಕೆಯಿಂದಲ್ಲೇ ಮೈಸೂರಿನ ಜನ ಅವರನ್ನು ಸೋಲಿಸಿದ್ದು. ಇನ್ನೂ ಇದೇ ರೀತಿ ಮಾಡಿದರೆ ಬಾದಾಮಿ ಜನ ಕೂಡಾ ಅವರ ಬಗ್ಗೆ ಯೋಚಿಸುವಂತಹ ಪರಿಸ್ಥಿತಿ ಬರಲಿದೆ" ಎಂದು ಕಂದಾಯ ಸಚಿವ ಆರ್. ಅಶೋಕ ಟೀಕೆ ಮಾಡಿದ್ದಾರೆ.
"ಡಿಕೆಶಿ ಯುದ್ಧ ಗೆದ್ದು ಬಂದಿದ್ದಾರಾ? ಯಾಕಿಷ್ಟು ಅದ್ಧೂರಿ ಸ್ವಾಗತ?"
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಸೇರಿದಂತೆ ಉನ್ನತ ಸ್ಥಾನಮಾನ ನಿಭಾಯಿಸಿದ್ದಾರೆ. ಅವರು ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಅದನ್ನು ಅರಿತು ಮಾತಾಡಲಿ. ಈ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ಕಳೆದ ಅಧಿವೇಶನದಲ್ಲಿ ಐದು ಗಂಟೆಗಳ ಕಾಲ ಭಾಷಣ ಮಾಡಿದ್ದಾರೆ. ಅದರಲ್ಲಿ ನೆರೆ ವಿಷಯದ ಕುರಿತು ಒಂದು ಗಂಟೆ ಆದರೆ ಉಳಿದ ಸಮಯ ಬರೀ ಸಮಯ ಹಾಳು ಮಾಡುವುದಕ್ಕಾಗಿಯೇ ಮಾತಾಡಿದ್ದಾರೆ. ಈ ಹಿಂದೆ ಭಾಷಣ ಮಾಡಿದವರ ರೆಕಾರ್ಡ್ ಮುರಿಯಲು ಅವರು ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು.