ಅಧಿಕಾರ ನಡೆಸಲು ಆಗದಿದ್ದರೆ ನಮಗೆ ಬಿಟ್ಟುಕೊಡಿ: ಯಡಿಯೂರಪ್ಪ
Recommended Video
ಹುಬ್ಬಳ್ಳಿ, ಜೂನ್ 6: ಯಾವುದೋ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಮತ್ತೆ ಚುನಾವಣೆ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಚುನಾವಣೆಗೆ ಈಗಲೇ ಸಿದ್ಧರಾಗಿರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ನೀಡಿದ್ದ ಸೂಚನೆಗೆ ಟಾಂಗ್ ನೀಡಿದರು. ಬರ ಪ್ರವಾಸ ಅಧ್ಯಯನ ಆರಂಭಿಸಿರುವ ಯಡಿಯೂರಪ್ಪ, ಶುಕ್ರವಾರ ಬಾದಾಮಿ ಮತ್ತು ಹುನಗುಂದ ತಾಲ್ಲೂಕಿನ ಬರ ಪರಿಸ್ಥಿತಿ ವೀಕ್ಷಣೆಗೆ ತೆರಳಿದರು.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ವಿರುದ್ಧ ಯಡಿಯೂರಪ್ಪ ತಂತ್ರ
ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ತಮ್ಮ ಕಾರ್ಯಕರ್ತರಿಗೆ ಚುನಾವಣೆಗೆ ಸಿದ್ಧರಾಗಿ ಎಂದಿದ್ದರು. ಆದರೆ, ನಾವು ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ಚುನಾವಣೆ ಮುಗಿದು ಇನ್ನೂ ಒಂದು ವರ್ಷ ಆಗಿಲ್ಲ, ಈಗ ಮತ್ತೆ ಚುನಾವಣೆಗೆ ಹೋಗುವುದು ಸರಿಯಲ್ಲ. ನಮ್ಮ ಬಳಿ 105 ಶಾಸಕರಿದ್ದಾರೆ. ಅವರಿಗೆ ಅಧಿಕಾರ ನಡೆಸಲು ಸಾಧ್ಯವಾಗದೆ ಇದ್ದರೆ ನಮಗೆ ಅಧಿಕಾರ ಬಿಟ್ಟುಕೊಡಲಿ. ಐದು ವರ್ಷ ಮುಗಿದ ಬಳಿಕವೇ ಜನರ ಬಳಿಗೆ ಹೋಗೋಣ ಎಂದರು.
ಮಂಡ್ಯದಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಕುಮಾರಣ್ಣ ಇನ್ನೂ ನಾಲ್ಕು ವರ್ಷ ಆಡಳಿತ ಮಾಡುತ್ತಾರೆ. ಆದರೆ, ಒಂದೆರಡು ವರ್ಷದಲ್ಲಿ ಚುನಾವಣೆ ಬರಬಹುದು. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡುವ ವಿಡಿಯೋ ವೈರಲ್ ಆಗಿತ್ತು.
ಅಧಿಕಾರ ನಮಗೆ ಕೊಟ್ಟು ಹೋಗಲಿ
ಈ ಸಮ್ಮಿಶ್ರ ಸರ್ಕಾರ ಬಹಳ ದಿನ ಮುಂದುವರಿಯುತ್ತದೆ ಎಂಬ ವಿಶ್ವಾಸವಿಲ್ಲ. ಅದರೆ, ಆ ಕಾರಣಕ್ಕೆ ಮಧ್ಯಂತರ ಚುನಾವಣೆ ನಡೆಯುವುದು ಬೇಡ. ಜನರ ಬಳಿ ಹೋಗಲು ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಆಡಳಿತ ನಡೆಸಲು ಸಾಧ್ಯವಾಗದೆ ಇದ್ದರೆ ನಮಗೆ ಬಿಟ್ಟುಕೊಡಲಿ. ನಾವು ನಡೆಸುತ್ತೇವೆ. ಏನಾಗುತ್ತದೆ ಎಂದು ನೋಡೋಣ ಎಂದರು.
ಜಿಂದಾಲ್ಗೆ ಕೊಟ್ಟಿರುವ ಭೂಮಿ ಸಾಕು
ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಯಡಿಯೂರಪ್ಪ ಕಿಡಿಕಾರಿದರು. ಒಂದು ಕಂಪೆನಿ ಪರವಾಗಿ ಕುಮಾರಸ್ವಾಮಿ ನಿಂತಿದ್ದಾರೆ. ಜಿಂದಾಲ್ಗೆ ಈಗ ಕೊಟ್ಟಿರುವ ಭೂಮಿಯೇ ಸಾಕಷ್ಟಿದೆ. ಜಿಂದಾಲ್ಗೆ ಕೊಡಲು ಉದ್ದೇಶಿಸಿರುವ ಭೂಮಿಯಲ್ಲಿ ಉತ್ತಮ ಖನಿಜಗಳಿವೆ. ಅದು ಸಾಕಷ್ಟು ಸಂಪನ್ಮೂಲಭರಿತ ಭೂಮಿ ಎಂದು ಹೇಳಿದರು.
ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ: ಯಡಿಯೂರಪ್ಪ ಸವಾಲು
ಡೀಲ್ ಕುದುರಿಸಲು ಹೋಗಿದ್ದಾರೆ
ಕುಮಾರಸ್ವಾಮಿ ಅವರು ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ ಡೀಲ್ ಕುದುರಿಸಲು ಹೋಗಿದ್ದಾರೆ. ಈ ಯೋಜನೆ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ. ವಿಧಾನಸೌಧದ ಮುಂದೆ ಬಿಜೆಪಿಯ ಎಲ್ಲ ನಾಯಕರು ಮೂರು ದಿನ ಧರಣಿ ನಡೆಸಲಿದ್ದೇವೆ. ಪ್ರತಿ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸಲು ಕರೆ ನೀಡುತ್ತೇವೆ ಎಂದು ತಿಳಿಸಿದರು.
ಬೇರೆಡೆಗೆ ಗಮನ ತಿರುಗಿಸಲು ನಾಟಕ
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ. ಅದರ ನಿಯಂತ್ರಣಕ್ಕೆ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಲಿ. ಆದರೆ, ಅವರು ಈಗ ಗ್ರಾಮ ವಾಸ್ತವ್ಯ ನಡೆಸಲು ಮುಂದಾಗಿದ್ದಾರೆ. ಈ ಹಿಂದೆ ವಾಸ್ತವ್ಯ ಮಾಡಿದ್ದ ಗ್ರಾಮಗಳಿಗೆ ಭರವಸೆ ನೀಡಿದಂತೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿರುವ ನಾಟಕವಿದು. ಆದರೆ, ರಾಜ್ಯದ ಜನರು ಇದಕ್ಕೆಲ್ಲ ಬೆಲೆ ಕೊಡುವುದಿಲ್ಲ. ಜನರನ್ನು ವಂಚಿಸಿ ಸರ್ಕಾರ ಕಚ್ಚಾಟ, ಬಡಿದಾಟದಲ್ಲಿ ತೊಡಗಿದೆ ಎಂದು ಟೀಕಿಸಿದರು.