ಮುಂದೆಯೂ ನಮ್ಮದೇ ಸರ್ಕಾರ, ರೈತಪರ ಬಜೆಟ್ ಖಂಡಿತ; ಬಿಎಸ್ ವೈ
ಹುಬ್ಬಳ್ಳಿ, ಡಿಸೆಂಬರ್ 3: "15 ಕ್ಷೇತ್ರದಲ್ಲಿ ಬಿಜೆಪಿ ಅಲೆಯಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಸೋಲನ್ನು ಒಪ್ಪಿಕೊಂಡಿದ್ದಾರೆ. ಮುಂದೆಯೂ ನಾವೇ ಗೆದ್ದು, ಸ್ಥಿರ ಸರ್ಕಾರ ನೀಡುತ್ತೇವೆ" ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, "ಇಂದು ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನಬೆಂಬಲ ಇದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ. ಆದ್ರೆ ಯಾವ ಕ್ಷೇತ್ರದಲ್ಲೂ ಅವರ ಪರವಾದ ವಾತಾವರಣ ಇಲ್ಲ" ಎಂದರು.
ಬಿಜೆಪಿ, ಕಾಂಗ್ರೆಸ್ ಮುಖಂಡರ ಮಾತಿಗೆ ಏಕಕಾಲಕ್ಕೆ ಉತ್ತರ ಕೊಟ್ಟ ಎಚ್ ಡಿಕೆ
"ನಾನು ರಾಜ್ಯದಲ್ಲಿ ಸ್ಥಿರ ಸರ್ಕಾರ ಮಾಡಲು ಎಲ್ಲ ಯೋಜನೆಗಳನ್ನೂ ರೂಪಿಸಿದ್ದೇನೆ, ಫೆಬ್ರುವರಿಯಲ್ಲಿ ರೈತಪರವಾದ ಹೊಸ ಬಜೆಟ್ ಮಂಡಿಸುತ್ತೇವೆ. ಕಾಂಗ್ರೆಸ್, ಜೆಡಿಎಸ್ ನವರಿಗೆ ರಾಮಮೂರ್ತಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನೂ ನಿಲ್ಲಿಸಲಾಗಲಿಲ್ಲ. ಈ ಮೂಲಕ ಉಭಯ ಪಕ್ಷದವರು ಸೋಲೊಪ್ಪಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ" ಎಂದರು.
ಉಪ ಚುನಾವಣೆ ನಂತರ ಬಿಎಸ್ ವೈ ರಾಜೀನಾಮೆ ನೀಡುತ್ತಾರೆಂಬ ಕಾಂಗ್ರೆಸ್ ನವರ ಹೇಳಿಕೆ ವಿಚಾರವಾಗಿ ಮಾತನಾಡಿ, "ಡಿಸೆಂಬರ್ 9ಕ್ಕೆ ಏನಾಗುತ್ತೆ ಎಂಬುದನ್ನು ನೀವೇ ನೋಡ್ತೀರಿ. ಅಲ್ಲಿಯವರೆಗೂ ಕಾದು ನೋಡಿ. ಕಾಂಗ್ರೆಸ್ ಜೆಡಿಎಸ್ ನವರು ತೆಪ್ಪಗಿರಲಿ" ಎಂದರು.