ನಾನು ಮೊದಲಿಂದಲೂ ಆರ್ಎಸ್ಎಸ್ ವಿರೋಧಿ: ಸಿದ್ದರಾಮಯ್ಯ
ಹುಬ್ಬಳ್ಳಿ,ಜೂನ್ 7 : "ನಾನು ಮೊದಲಿಂದಲೂ ಆರ್ಎಸ್ಎಸ್ ವಿರೋಧಿ. ಅವರ ಮಾಡುವ ಕೆಲಸವನ್ನು ನಾನು ವಿರೋಧಿಸುತ್ತನೆ. ಆ ಸಂಘಟನೆ ವಿರುದ್ಧ ಮಾತನಾಡಿದಾಗಲೆಲ್ಲಾ ನಾನು ಭಸ್ಮ ಆಗುತ್ತೇನೆ ಅಂತಾ ಹೇಳುತ್ತಾರೆ. ಆದರೆ ನಾನು ಚೆನ್ನಾಗಿಯೇ ಇದ್ದೇನೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, "ನಾನೂ ಮೊದಲಿನಿಂದಲೂ ಆರ್ಎಸ್ಎಸ್ ವಿರೋಧಿ. ಅವರ ಕೆಲಸಗಳನ್ನು ವಿರೋಧಿಸುತ್ತಲೇ ಇದ್ದೇನೆ. 1920 ರಿಂದ ಆರ್ಎಸ್ಎಸ್ನಲ್ಲಿ ಒಂದೇ ಜಾತಿಗೆ ಸೇರಿದವರು ಸರಸಂಗ ಸಂಚಾಲಕರಾಗಿದ್ದಾರೆ. ನನ್ನ ಈ ಪ್ರಶ್ನೆಗೆ ಅವರು ಯಾರು ಯಾಕೆ ಉತ್ತರ ನೀಡಲ್ಲ ಅಂದರೆ. ಸತ್ಯವನ್ನು ಅಷ್ಟು ಸುಲಭವಾಗಿ ತಳ್ಳಿಹಾಕೋಕೆ ಆಗಲ್ಲ. ಅದಕ್ಕಾಗಿ ಆರ್ಎಸ್ಎಸ್ನವರು ಮಾತನಾಡುತ್ತಿಲ್ಲ" ಎಂದರು.
ಕೋಮುವಾದಿಗಳನ್ನು ದೂರವಿಡಬೇಕು, ನಾವೆಲ್ಲಾ ಒಟ್ಟಾಗಬೇಕು: ಹೆಚ್.ಡಿ.ರೇವಣ್ಣ
ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ವಿಧಾನಸಭೆಯ ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ ಸೇರಿದಂತೆ ಹಲವರನ್ನು ಭೇಟಿ ಮಾಡಿ ಚುನಾವಣೆ ಪ್ರಯುಕ್ತ ಚರ್ಚೆ ಮಾಡಿದ್ದರು.
RSS ಚಡ್ಡಿ ಮತ್ತು ಹಿಂದೆ ಸಿದ್ದರಾಮಯ್ಯ ಪಂಚೆ ಕಳಚಿದ್ದ ಘಟನೆ
ಕೂತೂಹಲ ಕೆರಳಿಸಿದ ಬಿಎಸ್ವೈ ಭೇಟಿ
ಬಿ. ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಮಾತನಾಡುತ್ತಿರುವ ವಿಡಿಯೋ ಭಾರೀ ಸದ್ದು ಮಾಡಿದ್ದವು. ಇದಕ್ಕೆ ನಾನಾ ರೀತಿಯ ಮಾತುಗಳು ಕೇಳಿಬಂದಿದ್ದವು. ಆದರೆ ಇದರ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, "ಯಡಿಯೂರಪ್ಪ ನಾನು ಆಕಸ್ಮಿಕವಾಗಿ ಭೇಟಿಯಾಗಿದ್ದೇವೆ. ಇಬ್ಬರ ಮಧ್ಯೆ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಬೆಳಗಾವಿ ಪ್ರವಾಸಕ್ಕೆ ಹೋದರೆ, ಸಿದ್ದರಾಮಯ್ಯ ಹುಬ್ಬಳ್ಳಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾರೆ.
ಕೋಮುವಾದಿ ಅಭ್ಯರ್ಥಿ ಸೋಲಿಸುವ ಗುರಿ
"ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ನಾವು ಅಲ್ಪ ಸಂಖ್ಯಾತರಿಗೆ ಸೀಟು ನೀಡಿದ್ದೇವೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸುವುದೇ ನಮ್ಮ ಉದ್ದೇಶ. ದೇವೇಗೌಡರು ನಿಂತಾಗ ನಾವು ಅಭ್ಯರ್ಥಿ ಹಾಕಲಿಲ್ಲ. ಅವರು ಗೆಲ್ಲುವ ಸಲುವಾಗಿ ಹಾಗೇ ಮಾಡಿದ್ದೆವು. ಅವರಿಗೆ ಬಿಜೆಪಿ ಸೋಲಿಸಬೇಕೆಂಬ ಉದ್ದೇಶವಿದ್ದರೆ ಈಗ ಅವರು ಕ್ಯಾಂಡಿಡೇಟ್ ಹಾಕುತ್ತಿರಲಿಲ್ಲ, ಬದಲಾಗಿ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದಕ್ಕೆ ನಮ್ಮನ್ನು ಬೆಂಬಲಿಸಬೇಕಿತ್ತು" ಎಂದು ಸಿದ್ದರಾಮಯ್ಯ ಹೇಳಿದರು.
ಕುಮಾರಸ್ವಾಮಿ ವಿರುದ್ಧ ಅಸಮಧಾನ
"ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ವಿಪಕ್ಷದ ನಾಯಕ ಸಿದ್ದರಾಮಯ್ಯನವರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ಯೋಜನೆ. ಆದರೆ ರಾಜ್ಯಸಭೆ ಚುನಾವಣಾ ಫಲಿತಾಂಶದಿಂದ ಸಿದ್ದರಾಮಯ್ಯ ತಲೆ ಮೇಲೆ ಕಲ್ಲು ಎಳೆದುಕೊಂಡಿದ್ದಾರೆ ಎಂಬುದು ಬಹಿರಂಗವಾಗಲಿದೆ" ಎಂಬ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ನಾನು ಒಂದು ಕಲ್ಲಲ್ಲಿ ಎರಡೂ ಹಕ್ಕಿಯನ್ನು ಹೊಡೆದಿಲ್ಲ. ಒಂದು ಹಕ್ಕಿನೂ ಹೊಡೆದಿಲ್ಲ, ನಮಗೆ ಬಿಜೆಪಿ-ಜೆಡಿಎಸ್ ಆತ್ಮಸಾಕ್ಷಿ ಮತ ಬರುತ್ತವೆ. ನಾವೇ ಮೊದಲು ಅಭ್ಯರ್ಥಿಯನ್ನು ಹಾಕಿದ್ದೆವು. ನಮ್ಮನ್ನು ನೋಡಿದ ಮೇಲೆ ಅವರು ಅಭ್ಯರ್ಥಿ ಹಾಕಬಾರದಿತ್ತು" ಎಂದರು.
ಚಡ್ಡಿ ಪಾರ್ಸಲ್ ಬಗ್ಗೆ ವ್ಯಂಗ್ಯ
ಆರ್ಎಸ್ಎಸ್ ಕಾರ್ಯಕರ್ತರು ಚಡ್ಡಿ ಪಾರ್ಸೆಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಚಡ್ಡಿಗಳು ಮಾಡೋದು ಚಡ್ಡಿ ಕೆಲಸಾನೆ. ಚಡ್ಡಿಗಳು ಇನ್ನೇನು ಕೆಲಸ ಮಾಡುತ್ತವೆ. ಜನಕ್ಕೆ ಉಪಯೋಗುವಂತಹ ಕೆಲಸಗಳನ್ನು ಅವರು ಮಾಡಲ್ಲ, ಚಡ್ಡಿಗಳು ಚಡ್ಡಿ ಕೆಲಸವನ್ನೇ ಮಾಡಬೇಕಲ್ವಾ. ನಾನು ಬಹಳ ವರ್ಷಗಳಿಂದ ಆ ಚಡ್ಡಿಗಳಿಗೆ ಬಡವರ ಪರ ಕೆಲಸ ಮಾಡಿ ಅಂತಾ ಹೇಳಿದರೆ ಅವು ಚಡ್ಡಿ ಕೆಲಸಾನೆ ಮಾಡುತ್ತವೆ" ಎಂದು ಹೇಳಿದರು.
ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದ ಎನ್ಎಸ್ಯುಐ ಸಂಘಟನೆಯ ಕಾರ್ಯಕರ್ತರು ಆರ್ಎಸ್ಎಸ್ ಚಡ್ಡಿಯನ್ನು ಸುಟ್ಟಿದ್ದರು. ನಂತರ ಈ ವಿಚಾರ ರಾಜ್ಯದಲ್ಲಿ ಬೇರೆ ಆಯಾಮ ಪಡೆದುಕೊಂಡಿದ್ದ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಬಿಜೆಪಿ ಆರ್ಎಸ್ಎಸ್ ಪರ, ಕಾಂಗ್ರೆಸ್ ವಿರುದ್ಧ ಮಾತನಾಡುತ್ತಲೇ ಇವೆ.
Recommended Video