ಅಮರನಾಥ ಯಾತ್ರೆಗೆ ತೆರಳಿದ್ದ ಹುಬ್ಬಳ್ಳಿಯ 59 ಯಾತ್ರಿಗಳು ಸಂಕಷ್ಟದಲ್ಲಿ
ಹುಬ್ಬಳ್ಳಿ, ಜುಲೈ 05: ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಹುಬ್ಬಳ್ಳಿಯ 59 ಅಮರನಾಥ ಯಾತ್ರಿಗಳು ಸಂಕಷ್ಟದಲ್ಲಿ ಸಿಲುಕಿರುವ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಹುಬ್ಬಳ್ಳಿ -ಧಾರವಾಡ ಅವಳಿನಗರದಿಂದ ಜೂನ್ 26 ರಂದು ಖಾಸಗಿ ಟ್ರಾವೆಲ್ಸ್ ಮೂಲಕ ಅಮರನಾಥ ಯಾತ್ರೆಗೆ 115 ಯಾತ್ರಿಗಳು ತೆರಳಿದ್ದರು. ಅವರಲ್ಲಿ 59 ಯಾತ್ರಿಗಳು ಗುಫಾ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಇನ್ನುಳಿದ ಯಾತ್ರಿಗಳು ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಗುಫಾ ಪ್ರದೇಶದಲ್ಲಿ ಸಿಲುಕಿರುವ ಯಾತ್ರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆಹಾರ ಹಾಗೂ ನೀರಿನ ಕೊರತೆಯಿಂದ ಕೆಲವರು ಅಸ್ವಸ್ಥರಾಗಿದ್ದಾರೆ. ಗುಫಾ ಪ್ರದೇಶಲ್ಲಿ ಸಿಲುಕಿರುವ ಯಾತ್ರಿಕರು ಸಹಾಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಇನ್ನು ಸೂಕ್ತ ಸ್ಪಂದನೆ ಲಭಿಸಿಲ್ಲ. ಸದ್ಯ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಅವರನ್ನು ಕಾಪಾಡಲು ಸಕಲ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗಷ್ಟೆ ಭಾರಿ ಮಳೆಯಿಂದಾಗಿ ಮಾನಸಗಂಗೋತ್ರಿ ಯಾತ್ರೆಗೆ ನೇಪಾಳ ಮಾರ್ಗವಾಗಿ ತೆರಳಿದ್ದ 250 ಕನ್ನಡಿಗ ಯಾತ್ರಾರ್ತಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲಿ ಹಲವರನ್ನು ರಕ್ಷಿಸಲಾಗಿತ್ತು. ಈಗ ಅಮರನಾಥ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.