ಹೊಸ ನೋಟ್ ಬದಲಾವಣೆಗೆ ಎಡತಾಕಿದ ಹುಬ್ಬಳ್ಳಿ ಮಂದಿ
ಹುಬ್ಬಳ್ಳಿ ಜನರು ಬ್ಯಾಂಕ್ ಗಳಲ್ಲಿ ಹಳೆ ನೋಟ್ ಹಿಂದುರಿಗಿಸಿ ಹೊಸ ನೋಟ್ ಪಡೆಯಲು ಹರಸಾಹಸ ಪಟ್ಟು ನೋಟ್ ಗಳನ್ನು ಬದಲಾಹಿಸಿಕೊಂಡುರು.
ಹುಬ್ಬಳ್ಳಿ, ನವೆಂಬರ್, 10 : ಕೇಂದ್ರ ಸರಕಾರ ದಿಢೀರ್ 500, 1000 ರೂ. ನೋಟ್ ರದ್ದುಗೊಳಿಸಿದ್ದರಿಂದ ಗುರುವಾರ ನಗರದ ಖಾಸಗಿ ಮತ್ತು ಸರಕಾರಿ ಬ್ಯಾಂಕ್ ಗಳಲ್ಲಿ ಜನತೆ ಸರತಿ ಸಾಲಿನಲ್ಲಿ ನಿಂತು ನೋಟ್ ಬದಲಾಯಿಸಿಕೊಂಡರು.
ಚಿತ್ರಗಳಲ್ಲಿ [ನೋಟು ಬದಲಾವಣೆಗಾಗಿ ನೂಕು ನುಗ್ಗಲು]
ನಗರದ ದುರ್ಗದಬೈಲ್, ಸ್ಟೇಶನ್ ರಸ್ತೆ, ಕ್ಲಬ್ ರೋಡ್, ಹಳೇ ಬಸ್ ನಿಲ್ದಾಣದ ಬಳಿಯ ಎಲ್ಲ ಬ್ಯಾಂಕ್ ಗಳಲ್ಲಿ ಹಣ ಬದಲಾವಣೆಗೆಂದು ಬೆಳಗ್ಗೆ 9 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತ ಜನತೆ ತಮ್ಮವರಿಗೆ ಫೋನ್ ಮೂಲಕ ಎಲ್ಲಿ ಗದ್ದಲ ಕಮ್ಮಿ ಇದೆ ಎಂದು ಕೇಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. [ಹೊಸ ನೋಟುಗಳನ್ನು ಬಳಸುವ ಮುನ್ನ ಈ ರೀತಿ ಪರೀಕ್ಷಿಸಿ]
ಆಧಾರ ಕಾರ್ಡ್ ಅಥವಾ ವೋಟಿಂಗ್ ಕಾರ್ಡ್ ಕಡ್ಡಾಯವಾಗಿ ತೋರಿಸಬೇಕಾಗಿದ್ದರಿಂದ ಝರಾಕ್ಸ್ ಮಾಡಿಸಲು ಅಂಗಡಿಗೆ ಮುಗಿಬಿದ್ದ ಜನತೆಗೆ ಪದೇ ಪದೇ ಕೈಕೊಡುತ್ತಿದ್ದ ಕರೆಂಟ್ ನಿಂದ ಕಂಗಾಲಾಗುವಂತಾಗಿತ್ತು.[500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]
ಇನ್ನು ಕೆಲವರು ಕೆಲ ಬ್ಯಾಂಕ್ ಗಳ ಮುಂದೆ ನಿಂತುಕೊಂಡು ಹಣ ಬದಲಾಯಿಸಲು ತುಂಬಬೇಕಾಗಿದ್ದ ಫಾರ್ಮ್ ನ್ನು ತಾವೇ ತುಂಬಿಕೊಡುತ್ತ ತಲಾ ಫಾರ್ಮ್ ಗೆ 10 ರೂ. ನಂತೆ ಹಣದ ದುಡಿಮೆ ಮಾಡಿಕೊಂಡರು.
ಸಂಜೆ 4 ಗಂಟೆಯವರೆಗೂ ಹಣ ಬದಲಾಯಿಸಿಕೊಳ್ಳಬಹುದು ಮತ್ತು ಎಲ್ಲರಿಗೂ ಸಾಕಷ್ಟು ಸಂಖ್ಯೆಯ ಚಿಲ್ಲರೆ ಹಣ ನಮ್ಮಲ್ಲಿದೆ ಹಾಗೂ ಹೊಸ 500 ರೂ ಮತ್ತು 2000 ನೋಟ್ ಗಳು ಬಂದಿವೆ ಅವುಗಳನ್ನು ನಾಳೆಗೆ ವಿತರಿಸಲಾಗುತ್ತದೆ ಎಂದು ಖಾಸಗಿ ಬ್ಯಾಂಕ್ ನ ಜ್ಯೋತಿ ಹೇಳಿದರು.
ಖಾಸಗಿ ಬ್ಯಾಂಕ್ ನ ಜ್ಯೋತಿ ಹೇಳಿದ್ದೇನು?
ಇನ್ನೊಂದು ಗಮನಾರ್ಹ ವಿಷಯವೇನೆಂದರೆ ಈಗಿರುವ ಎಟಿಎಂ ಮಶೀನ್ ಗಳಲ್ಲಿ ಹೊಸ ನೋಟ್ ಗಳನ್ನು ಹಾಕಲು ಬರುವುದಿಲ್ಲ. ಅದಕ್ಕಾಗಿ ಹೊಸ ಮಶೀನ ಗಳನ್ನು ತರಿಸಬೇಕಾಗುತ್ತದೆ. ಈಗ ಹಳೆಯ ನೋಟ್ ಗಳನ್ನು ಮಾತ್ರ ವಿತರಿಸಲು ಬರುವಂಥಹ ತಂತ್ರಜ್ಞಾನ ಈಗಿರುವ ಎಟಿಎಂ ಗಳಲ್ಲಿದೆ. ಹೊಸ ಮಶೀನ್ ಬರಲು ಕನಿಷ್ಠ 6 ತಿಂಗಳಾದರೂ ಆಗಬಹುದು ಎಂದು ಖಾಸಗಿ ಬ್ಯಾಂಕ್ ನ ಜ್ಯೋತಿ ತಿಳಿಸಿದರು.
ಕಮೀಷನ್ ದಂಧೆ ಶುರು
ಹಣ ಬದಲಾವಣೆ ಮಾಡಿಕೊಳ್ಳಲು ಬಂದ ಕೆಲ ಸಿರಿವಂತರ ಬಳಿ ಕೆಲವರು ನಿಮ್ಮ ಬಳಿ ಕಪ್ಪು ಹಣ ಇದ್ದರೆ ನಮಗೆ ಕೊಡಿ ನಾವು ದಾಖಲೆ ನೀಡಿ ಅವುಗಳನ್ನು ಬದಲಾವಣೆ ಮಾಡಿಕೊಳ್ಳುತ್ತೇವೆ. ನಮಗೂ ಅದರಲ್ಲೂ ಸ್ವಲ್ಪ ಕಮೀಷನ್ ಕೊಡಬೇಕೆಂದು ಕಮೀಷನ್ ದಂಧೆಗಳು ಸಹ ನಡೆಯುತ್ತಿವೆ.
ಮನೆ ಬಾಡಿಗೆ ಕಟ್ಟಲು ಹೊಸ ನೋಟುಗಳಿಲ್ಲ
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ 10 ನೇ ತಾರೀಖಿಗೆ ಮನೆ ಬಾಡಿಗೆ, ದಿನಸಿ ಅಂಗಡಿಯ ಸಾಲ ಮತ್ತಿತರ ಹಣಕಾಸು ವ್ಯವಹಾರಗಳನ್ನು ಜನರು ಮಾಡುತ್ತಾರೆ. ಆದರೆ ದಿಢೀರ್ ಆಗಿ ಕೇಂದ್ರ ಸರಕಾರದ ನಿರ್ಧಾರದಿಂದ ಕಂಗಾಲಾದ ಬಾಡಿಗೆದಾರರು ಮನೆ ಮಾಲೀಕರಿಗೆ ಪರಿ ಪರಿಯಾಗಿ ಬೇಡಿಕೊಳ್ಳುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.
ವ್ಯಾಪಾರ-ವ್ಯವಹಾರಕ್ಕೆ ತಟ್ಟಿದ ನೋಟ್ ಬಿಸಿ
ನಗರದ ಮಾರುಕಟ್ಟೆ, ಶಾಪಿಂಗ್ ಮಾಲ್ ಗಳಲ್ಲಿ ಸ್ಮಶಾನ ಮೌನ ಅವರಿಸಿದ್ದು ಇನ್ನು ಎಷ್ಟು ದಿನ ಇದೇ ರೀತಿ ಇರುತ್ತೋ ಅಥವಾ ಜನರು ಮಾರುಕಟ್ಟೆಗೆ ಬಂದು ವಹಿವಾಟು ಚೇತರಿಕೆ ಕಾಣುತ್ತದೆಯೋ ಕಾದು ನೋಡಬೇಕು.