ತೀರಿಕೊಂಡ ಮಗುವಿನ ಕಣ್ಣು ದಾನ ಮಾಡಿದ ಹುಬ್ಬಳ್ಳಿಯ ಘಂಟಿಕೇರಿ ಪೋಷಕರು
ಹುಬ್ಬಳ್ಳಿ, ಜೂನ್ 9: ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಾ ಮನೆಯ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿದ್ದು, ಮಗುವಿನ ಪೋಷಕರು ತಮ್ಮ ದುಃಖದ ಮಧ್ಯೆಯೂ ಆ ಮಗುವಿನ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಇಲ್ಲಿನ ಘಂಟಿಕೇರಿಯಲ್ಲಿ ಗುರುವಾರ ನಡೆದಿದೆ.
ನಗರದ ಘಂಟಿಕೇರಿ ನಿವಾಸಿಗಳಾದ ರಾಘವೇಂದ್ರ ಹಾಗೂ ರೂಪಾ ಕಟ್ಟಿಮನಿ ದಂಪತಿಯ ಮಗು ನಿಶಾನ್ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ. ಕಣ್ಣ ಎದುರೇ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಪ್ರಾಣ ಕಳೆದುಕೊಂಡ ದುಃಖದ ಮಧ್ಯೆಯೇ ನಗರದ ಎಂ ಎಂ ಜೋಶಿ ನೇತ್ರ ಸಂಶೋಧನಾ ಸಂಸ್ಥೆಗೆ ಕಣ್ಣು ದಾನ ಮಾಡಿದ್ದಾರೆ.[ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ]
ಗುರುವಾರ ಸಂಜೆ ನೀರು ಕರ್ನಾಟಕ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಬೋರ್ಡ್ ಘಂಟಿಕೇರಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಮುಂದಾಗಿತ್ತು. ಅದರಂತೆ ಕಟ್ಟಿಮನಿ ಅವರ ಮನೆಯ ಸದಸ್ಯರೆಲ್ಲ ಕುಡಿಯುವ ನೀರು ಸಂಗ್ರಹಿಸಲು ಮುಂದಾಗಿದ್ದರು. ಆ ವೇಳೆ ನಿಶಾನ್ ಆಟವಾಡುತ್ತಾ ಮನೆ ಎದುರಿಗೆ ಇರುವ ನೀರಿನ ಸಂಪಿಗೆ ಬಿದ್ದಿದ್ದಾನೆ.[ತೀರಿಕೊಂಡ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಮಗು]
ಕುಟುಂಬದ ಸದಸ್ಯರು ನಿಶಾನ್ ಗಾಗಿ ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಅನುಮಾನಗೊಂಡ ಅವರು ನೀರು ಸಂಗ್ರಹಿಸುವ ಸಂಪ್ ನೋಡಿದಾಗ ನಿಶಾನ್ ನೀರಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಆತನನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಿಶಾನ್ ಕೊನೆಯುಸಿರೆಳೆದಿದ್ದ ಎಂದು ವೈದ್ಯರು ದೃಢಪಡಿಸಿದ್ದಾರೆ.