ಹುಬ್ಬಳ್ಳಿ : ಪ್ರವಾಸಿತಾಣವಾಗಿ ಅಭಿವೃದ್ಧಿಯಾಗಲಿದೆ ನೀರಸಾಗರ ಕೆರೆ
ಹುಬ್ಬಳ್ಳಿ, ಜೂನ್ 25 : ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ನೀರಸಾಗರ ಕೆರೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಕಂದಾಯ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನೀರಸಾಗರ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದರು. ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೀರು ತುಂಬಿಸಲು ಆಗ್ರಹಿಸಿ ಕೆರೆಗೆ ಹಾರಿದ ರೈತರ ರಕ್ಷಣೆ
ನೀರಸಾಗರ ಕೆರೆ ಅಭಿವೃದ್ಧಿ ಯೋಜನೆಯ ಮೊದಲ ಹಂತದಲ್ಲಿ ಕೆರೆಯ ಸುಮಾರು 100 ಎಕರೆ ಪ್ರದೇಶದ ಹೂಳನ್ನು ತೆಗೆಯಲಾಗುತ್ತಿದೆ. ಸುಮಾರು 12 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣು ತೆಗೆಯುವ ಕಾಮಗಾರಿ ಸುಮಾರು 3 ತಿಂಗಳ ಕಾಲ ನಡೆಯಲಿದೆ.
ಹಾಸನ : ಶೀಘ್ರದಲ್ಲಿಯೇ ಪ್ರವಾಸಿಗರನ್ನು ಆಕರ್ಷಿಸಲಿದೆ ಹುಣಸಿನಕೆರೆ
ಕೆರೆಯ ಹೂಳನ್ನು ರೈತರು ತಮ್ಮ ಟ್ರಾಕ್ಟರ್ ಮೂಲಕ ತೆಗೆದುಕೊಂಡು ಹೋಗಿ ಜಮೀನಗಳಿಗೆ ಬಳಸಿಕೊಳ್ಳಲಿದ್ದಾರೆ. ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿತಾಣವಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.....
ಬೆಂಗಳೂರಿನ 6 ಕೆರೆಗಳನ್ನು ದತ್ತು ಪಡೆದ ಕಾರ್ಪೊರೇಟ್ ಕಂಪನಿಗಳು
ಕುಡಿಯುವ ನೀರು ಪೂರೈಕೆ ಮಾಡುತ್ತಿತ್ತು
1955ರಿಂದ ಹುಬ್ಬಳ್ಳಿ ನಗರಕ್ಕೆ ನೀರಸಾಗರ ಕೆರೆ ಕುಡಿಯುವ ನೀರು ಪೂರೈಕೆ ಮಾಡುತ್ತಿತ್ತು. 2003ರಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ7.72 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ತೆಗೆಯಲಾಗಿತ್ತು. 2009ರಲ್ಲಿ ಕೆರೆ ಸಂಪೂರ್ಣವಾಗಿ ತುಂಬಿತ್ತು.
ನೀರಿನ ಕೊರತೆ ಉಂಟಾಗಿದೆ
ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ನೀರಸಾಗರ ಕೆರೆಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದಾಗಿ ಕಳೆದ ಎರಡು ಮೂರು ವರ್ಷದಿಂದ ನೀರು ಸರಬರಾಜನ್ನು ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ವಿಶೇಷ ಆಸಕ್ತಿಯಿಂದಾಗಿ ಕೆರೆಗೆ ಮರುಜೀವ ನೀಡುವ ಪ್ರಯತ್ನವನ್ನು ಈಗ ಆರಂಭಿಸಲಾಗಿದೆ.
8 ಕೋಟಿ ವೆಚ್ಚದ ಕಾಮಗಾರಿ
ನೀರಸಾಗರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲ ಹಂತವಾಗಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಮಾರು 8 ಕೋಟಿ ರೂ. ವೆಚ್ಚದ ಕಾಮಗಾರಿ ಮೂರು ತಿಂಗಳು ನಡೆಯುವ ನಿರೀಕ್ಷೆ ಇದೆ. ರೈತರು ಟ್ರಾಕ್ಟರ್ ಮೂಲಕ ಹೂಳನ್ನು ಜಮೀನಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.
ಸಚಿವರು ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ ಅವರು, 'ಟಾಟಾ ಹಿಟ್ಯಾಚ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಖೇಶ್ ಸಿಂಗ್ ಜೊತೆ ಮಾತನಾಡಿ, ಕಂಪನಿಯ ಸಿಎಸ್ಆರ್ ನಿಧಿಯಲ್ಲಿ ಹಣ ಬಳಕೆ ಮಾಡಿಕೊಂಡು ಉಚಿತವಾಗಿ ಕೆರೆ ಹೂಳು ತೆಗೆದುಕೊಡಲು ವಿನಂತಿಸಲಾಗಿದೆ. ಮೂರು ಹಿಟ್ಯಾಚಿ ಯಂತ್ರಗಳನ್ನು ಹೂಳೆತ್ತಲು ನೀಡಿದ್ದಾರೆ. ಅಂದಾಜು ಎರಡು ಮೂರು ತಿಂಗಳು ಈ ಕೆಲಸ ನಡೆಯಲಿದೆ' ಎಂದು ಹೇಳಿದರು.
ಪ್ರವಾಸಿತಾಣವಾಗಿ ಅಭಿವೃದ್ಧಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, 'ಅವಳಿ ನಗರಕ್ಕೆ ನೀರಿನ ಕೊರತೆ ಆಗದಂತೆ ಮಲಪ್ರಭಾ ಜಲಾಶಯದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗಿದೆ. ಬರುವ ಡಿಸೆಂಬರ್ನೊಳಗೆ ಅದು ಪೂರ್ಣಗೊಂಡು ಹೆಚ್ಚುವರಿ ನೀರು ಲಭ್ಯವಾಗಲಿದೆ. ಅದರಂತೆ ನೀರಸಾಗರ ಕೆರೆ ಹೂಳೆತ್ತುವ, ಒತ್ತುವರಿ ತೆರವುಗೊಳಿಸುವ ಮತ್ತು ಕೆರೆ ಸೌಂದರ್ಯೀಕರಣಗೊಳಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಾಗಿದೆ' ಎಂದು ಅವರು ಹೇಳಿದರು.