ಹುಬ್ಬಳ್ಳಿಯ ಅರ್ಪಿತಾ ಬಿರಾದಾರ್ ಕೊಲೆಗೆ ದೃಶ್ಯ ಸಿನಿಮಾ ಸ್ಫೂರ್ತಿ!
ಹುಬ್ಬಳ್ಳಿ, ಅಕ್ಟೋಬರ್ 19: ಹುಬ್ಬಳ್ಳಿಯ ಗಬ್ಬೂರ್ ಕ್ರಾಸ್ ಹತ್ತಿರ ವರ್ಷದ ಹಿಂದೆ ನಡೆದಿದ್ದ ಅರ್ಪಿತಾ ಬಿರಾದಾರ್ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಜಿಕೆವಿಕೆ ಸಂಶೋಧನಾ ವಿದ್ಯಾರ್ಥಿ ಅರುಣಕುಮಾರ ಪಾಟೀಲ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ವಿಜಯಪುರದ ಆದರ್ಶನಗರದವನು. ಅರುಣ-ಅರ್ಪಿತಾ ಇಬ್ಬರೂ ವಿಜಯಪುರದಲ್ಲಿ ಬಿಎಸ್ಸಿ ಓದುತ್ತಿದ್ದರು. ಆಗ ಇಬ್ಬರ ಮಧ್ಯೆ ಪ್ರೀತಿ ಬೆಳೆದಿತ್ತು. ಆ ನಂತರ ಅರುಣನಿಗೆ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿಗೆ ಸೀಟು ಸಿಕ್ಕಿತ್ತು. ಅರ್ಪಿತಾ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿದ್ದರು.[ಮಾಲೂರು ಸರ್ಕಲ್ ಇನ್ ಸ್ಪೆಕ್ಟರ್ ಠಾಣೆಯಲ್ಲೇ ಆತ್ಮಹತ್ಯೆ]
ಮದುವೆ ಆಗುವಂತೆ ಅರ್ಪಿತಾ ಒತ್ತಾಯಿಸುತ್ತಿದ್ದರು. ಓದಿಗೆ ತೊಂದರೆ ಆಗುತ್ತದೆ ಎಂದು ಅರುಣ ನಿರಾಕರಿಸುತ್ತಿದ್ದ. ಯಾವಾಗ ಒತ್ತಡ ಹೆಚ್ಚಾಯಿತೋ ಆಗ ಅರ್ಪಿತಾ ಕೊಲೆಗೆ ನಿರ್ಧರಿಸಿ, ಮೇ 30, 2015ರಲ್ಲಿ ಗಬ್ಬೂರ ಕ್ರಾಸ್ ಬಳಿ ಕೊಲೆ ಮಾಡಿ, ಹೊಲದಲ್ಲಿ ಹೂತುಹಾಕಿದ್ದ.
ಆದರೆ, ಕೆಲ ದಿನಗಳ ನಂತರ ಮಳೆಯಾದಾಗ ಮಣ್ಣು ಪಕ್ಕಕ್ಕೆ ಸರಿದು, ಶವದ ಕೈಗಳು ಕಾಣಿಸಿಕೊಂಡಿದ್ದವು. ಹೊಲದ ಮಾಲೀಕರು ದೂರು ದಾಖಲಿಸಿದ್ದರು. ಅಪರಿಚಿತ ಯುವತಿ ಶವ ಎಂದು ಮೊದಲಿಗೆ ದೂರು ದಾಖಲಾಗಿತ್ತು.[ಸರಣಿ ಹಂತಕ, ಕಾಮುಕ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆ ಭೀತಿ]
'ದೃಶ್ಯ' ಸಿನಿಮಾದಿಂದ ಪ್ರೇರಣೆಗೊಂಡಿದ್ದ ಅರುಣ, ತಾನು ಸಿಕ್ಕಿಹಾಕಿಕೊಂಡರೆ ಹೇಗೆ ಉತ್ತರಿಸಬೇಕು ಎಂದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ಅದೀಗ ಆತನ ಹಾಸ್ಟೆಲ್ ಕೊಠಡಿಯಲ್ಲಿ ಪೊಲೀಸರಿಗೆ ಸಿಕ್ಕಿದೆ.
ಧಾರವಾಡಕ್ಕೆ ಬರುವಾಗ ಅರುಣ ತನ್ನ ಮೊಬೈಲ ಫೋನ ಹಾಸ್ಟೆಲ್ ನಲ್ಲಿ ಬಿಟ್ಟು ಬಂದಿದ್ದ. ಕೊಲೆಯ ನಂತರ ಅರ್ಪಿತಾಳ ವ್ಯಾನಿಟಿ ಬ್ಯಾಗ್, ಮೊಬೈಲ್ ಫೋನ್ ಸುಟ್ಟು ಹಾಕಿದ್ದರಿಂದ ಆರೋಪಿಯ ಬಂಧನ ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ