ಗೌರಿ ಲಂಕೇಶ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
2008ರ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಗೌರಿ ಲಂಕೇಶ್ ಅವರು ಶನಿವಾರ ಅಂತಿಮ ತೀರ್ಪಿಗೆ ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ ಹುಬ್ಬಳ್ಳಿಯ 2ನೇ ಜೆಎಂಎಫ್ ಕೋರ್ಟ್ ಶನಿವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಹುಬ್ಬಳ್ಳಿ, ನವೆಂಬರ್, 26: ಹಿರಿಯ ಪತ್ರಕರ್ತ ದಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ಅವರ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಆರೋಪಿಯಾಗಿರುವ ಗೌರಿ ಲಂಕೇಶ್ ಅವರು ಶನಿವಾರ ಅಂತಿಮ ಕೋರ್ಟ್ ತೀರ್ಪಿಗೆ ಗೈರು ಹಾಜರಾಗಿದ್ದರಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಶನಿವಾರ ಹುಬ್ಬಳ್ಳಿ ಜಿಲ್ಲಾ 2ನೇ ಜೆಎಂಎಫಸಿ ನ್ಯಾಯಾಲಯದಲ್ಲಿ ಗೌರಿ ಲಂಕೇಶ್ ಅವರ ಪ್ರಕರಣದ ಅಂತಿಮ ತೀರ್ಪು ಹಿನ್ನಲೆಯಲ್ಲಿ. ಕೋರ್ಟ್ ಗೆ ಹಾಜರಾಗಬೇಕಿತ್ತು.
ಲಂಕೇಶ್ ಪರ ವಕೀಲ ಆರ್ ಎಂ ಜಾವೀದ್ ಅನಾರೋಗ್ಯ ಕಾರಣ ನೀಡಿ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಮುಂದಾದರು. ಆದರೆ ಅಂತಿಮ ತೀರ್ಪು ಇರುವುದರಿಂದ ಯಾವುದೇ ಅರ್ಜಿ ಪರಿಗಣಿಸಲಿಲ್ಲ. ಹೀಗಾಗಿ ಅವರಿಗೆ ಹುಬ್ಬಳ್ಳಿ 2ನೇ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಅಮರ ವಿ ಎಲ್ ಅವರು ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶ ಕಾಯ್ದಿರಿಸಿದ್ದಾರೆ.
ಸಂಸದ ಪ್ರಹ್ಲಾದ್ ಜೋಶಿ ಮತ್ತು ಮೂವರ ಮುಖಂಡರ ಮೇಲೆ 2008 ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಅವರು ಅವಹೇಳನಕಾರಿಯಾಗಿ ಲೇಖನ ಬರೆದಿದ್ದಾರೆ ಎಂದು ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿತ್ತು.
ಹೀಗಾಗಿ ಕಳೆದ ಹಲವು ವರ್ಷಗಳಿಂದ ವಿಚಾರಣೆ ನಡೆದಿದ್ದು, ಅಂತಿಮ ಹಂತಕ್ಕೆ ತಲುಪಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಧುರೀಣ ಉಮೇಶ ದುಶಿ ಪರವಾಗಿ ವಕೀಲ ಸಂಜು ಬಡಸ್ಕರ ಮತ್ತು ಸಂಸದ ಪ್ರಹ್ಲಾದ ಜೋಶಿ ಪರವಾಗಿ ವಕೀಲ ಲಕ್ಷ್ಮೇಶ್ವರ ವಾದ ಮಂಡಿಸಿದ್ದರು.
ಲಂಕೇಶ ಪತ್ರಿಕೆಯ ಹುಬ್ಬಳ್ಳಿ ವರದಿಗಾರ ಪ್ರಕರಣದ ಆರೋಪಿ ಜಗಾಪುರ ಕೋರ್ಟ್ ಗೆ ಹಾಜರಾಗಿದ್ದರು.