'ಕಲರ್ಸ್ ಕನ್ನಡದ 'ಮಜಾ ಭಾರತ' ಕಾರ್ಯಕ್ರಮ ರದ್ದುಗೊಳಿಸಿ'
ಹುಬ್ಬಳ್ಳಿ, ಫೆಬ್ರವರಿ, 14 : ಕಲರ್ಸ್ ಕನ್ನಡ ಮನರಂಜನಾ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಹು-ಧಾ ಮಹಾನಗರ ಪಾಲಿಕೆ ಸದಸ್ಯ ಮತ್ತು ಭಾರತ ಸರಕಾರದ ಚಲನಚಿತ್ರ ಸರಳೀಕರಣ ಮಂಡಳಿಯ ನಿರ್ದೇಶಕ ಶಿವಾನಂದ ಮುತ್ತಣ್ಣನವರು ಒತ್ತಾಯಿಸಿದ್ದಾರೆ.
ಹಿಂದೂಗಳ ಪವಿತ್ರ ಗ್ರಂಥವಾಗಿರುವ ಮಹಾಭಾರತಕ್ಕೆ ಮಜಾಭಾರತ ಕಾರ್ಯಕ್ರಮದಿಂದ ಅವಮಾನವಾಗುತ್ತಿದೆ. ಹಿಂದೂ ಸಂಸ್ಕೃತಿಯ ಪವಿತ್ರ ಗ್ರಂಥವಾದ ಮಹಾಭಾರತ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಲರ್ಸ್ ಕನ್ನಡ ಮನೋರಂಜನಾ ವಾಹಿನಿ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮ ಕಲರ್ಸ್ ಕನ್ನಡ ಮನೋರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿಜಕ್ಕೂ ದುರದೃಷ್ಟಕರ ಎಂದು ದೂರಿರುವ ಅವರು ಇದರಿಂದ ಮುಂದಿನ ಪೀಳಿಗೆ ಜನಕ್ಕೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದಿದ್ದಾರೆ.
ಕಾರಣ ಕೂಡಲೇ ಕಲರ್ಸ್ ಕನ್ನಡ ಮನೋರಂಜನಾ ವಾಹಿನಿಯ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಅಲ್ಲದೇ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರನಟಿ ಶೃತಿ ಮತ್ತು ನಿರ್ದೇಶಕ ಎಸ್. ನಾರಾಯಣ ಕಾರ್ಯಕ್ರಮ ಬಹಿಷ್ಕರಿಸಿ ಹೊರ ಬರಬೇಕೆಂದು ಒತ್ತಾಯಿಸಿದ್ದಾರೆ.