ಧಾರವಾಡ ಜಿಲ್ಲೆಯ 107 ಮದ್ಯದಂಗಡಿಗಳ ಎತ್ತಂಗಡಿಗೆ ಇಂದು ಕೊನೆಯ ದಿನ
ಹುಬ್ಬಳ್ಳಿ, ಜೂನ್ 30: ನಾಳೆಯಿಂದ ಧಾರವಾಡ ಜಿಲ್ಲೆಯ ಮದ್ಯ ಪ್ರಿಯರು ಕಿಕ್ ಏರಿಸಿಕೊಳ್ಳಬೇಕಿದ್ದರೆ ಹೆದ್ದಾರಿಯಿಂದ ಸ್ವಲ್ಪ ದೂರ ತೆರಳಬೇಕು. ಯಾಕೆ ಅಂತಿರಾ ಮುಂದೆ ಓದಿ.
ಸುಪ್ರಿಂ ಕೋರ್ಟ್ ಆದೇಶದಂತೆ ಹೆದ್ದಾರಿಯಿಂದ ಅರ್ಧ ಕಿ.ಮೀ ವ್ಯಾಪ್ತಿ ಒಳಗಿರುವ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಇಂದೇ (ಜೂನ್ 30) ಕೊನೆಯ ದಿನವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಅಂದಾಜು 107 ಅಂಗಡಿಗಳು ಸ್ಥಳಾಂತರಗೊಳ್ಳಲಿವೆ.
ಈಗಿರುವ ಸ್ಥಳಗಳಲ್ಲಿಯೇ ಮದ್ಯದ ಅಂಗಡಿಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿ ಅಧಿಸೂಚನೆ ರದ್ದುಗೊಳಿಸುವ ಕೆಲಸಕ್ಕೆ ಕೈ ಹಾಕಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ಆದರೆ, ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದರಿಂದ ಹುಬ್ಬಳ್ಳಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮದ್ಯದ ಅಂಗಡಿಗಳು ರಸ್ತೆಯಿಂದ ನಿಗದಿತ ದೂರಕ್ಕೆ ಸ್ಥಳಾಂತರಗೊಳ್ಳಲಿವೆ.
ಮೂರು ರಾಷ್ಟ್ರೀಯ ಹೆದ್ದಾರಿಗಳು
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ - 4, ಹುಬ್ಬಳ್ಳಿ-ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ - 218, ಅಂಕೋಲಾ-ಗೂಟಿ ರಾಷ್ಟ್ರೀಯ ಹೆದ್ದಾರಿ - 63ರ ಬದಿಯಲ್ಲಿರುವ ಮದ್ಯದ ಅಂಗಡಿಗಳು ಶುಕ್ರವಾರದ ಸಂಜೆಯೊಳಗೆ ಸ್ಥಳಾಂತರಗೊಳ್ಳಬೇಕು. ಇಲ್ಲವೇ ಬಂದ್ ಮಾಡಬೇಕು. ಹೀಗಾಗಿ ಮದ್ಯದ ಅಂಗಡಿ ಮಾಲೀಕರು ಚಿಂತೆಗೀಡಾಗಿದ್ದಾರೆ.
ವರ್ತಮಾನದ ಪ್ರಕಾರ ಕಲಘಟಗಿಯಲ್ಲಿ ನಾಲ್ಕು ಅಂಗಡಿಗಳು ಸ್ಥಳಾಂತರಗೊಳ್ಳಬೇಕಿದೆ. ನವಲಗುಂದ ಹಾಗೂ ನರಗುಂದದಲ್ಲಿ ಒಂದೇ ಒಂದು ಅಂಗಡಿ ಉಳಿಯುವುದೂ ಸಂದೇಹ. ಎಲ್ಲಾ ಅಂಗಡಿಗಳು ಹೆದ್ದಾರಿಗೆ ಹೊಂದಿಕೊಂಡೇ ಇರುವುದರಿಂದ ಇವುಗಳ ಸ್ಥಳಾಂತರ ಅನಿವಾರ್ಯ.
ಈ ನಡುವೆ ಕ್ಲಬ್ (ಸಿಎಲ್4) ಪರವಾನಗಿ ಹೊಂದಿರುವ ಕೆಲವೊಂದು ಮದ್ಯದ ಅಂಗಡಿಗಳಿಗೆ ವಿನಾಯಿತಿ ದೊರೆತಿರುವುದರಿಂದ ಅವು ಸ್ಥಳಾಂತರದ ಭೀತಿಯಿಂದ ಹೊರಗುಳಿದಿವೆ. "ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಲೇಬೇಕು. ಆದರೆ, ಹೀಗೆ ಸ್ಥಳಾಂತರದ ಭೀತಿ ಎದುರಿಸುವುದಕ್ಕಿಂತ ರಾಜ್ಯದಲ್ಲಿ ಪಾನ ನಿಷೇಧ ಜಾರಿಗೆ ತರುವುದೇ ಒಳಿತು," ಎನ್ನುತ್ತಾರೆ ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ.
ವಿವಿಧ ತಾಲೂಕುಗಳಲ್ಲಿ ಸ್ಥಳಾಂತರಗೊಳ್ಳಲಿರುವ ಮದ್ಯದ ಅಂಗಡಿಗಳು ಮತ್ತು ಒಟ್ಟು ಮದ್ಯದ ಅಂಗಡಿಗಳು:
ಹುಬ್ಬಳ್ಳಿ - 71 (141), ಧಾರವಾಡ - 31 (81), ಕಲಘಟಗಿ - 08 (08), ಕುಂದಗೋಳ - 08(12), ನವಲಗುಂದ - 12 (15)